ರಾಜ್ಯಾದ್ಯಂತ ಕುತೂಹಲ ಕೆರಳಿಸಿದ್ದ ಅಣ್ಣಿಗೇರಿ ತಲೆಬುರುಡೆಗಳ ರಹಸ್ಯವನ್ನು ಕರ್ನಾಟಕ ರಾಜ್ಯ ಪ್ರಾಚ್ಯಶಾಸ್ತ್ರ ಮತ್ತು ವಸ್ತುಸಂಗ್ರಾಹಲಯ ಇಲಾಖೆ ಕೊನೆಗೂ ಬಯಲುಗೊಳಿಸಿದ್ದು, ಇವು ಸಾಮೂಹಿಕ ಹತ್ಯಾಕಾಂಡದಲ್ಲಿ ಬಲಿಯಾದವರ ತಲೆಬುರುಡೆ ಎಂದು ರಾಜ್ಯ ಪುರಾತತ್ವ ಇಲಾಖೆ ಸ್ಪಷ್ಟಪಡಿಸಿದೆ.
ತಲೆಬುರುಡೆ ದೊರೆತ ಸ್ಥಳದಲ್ಲಿ ಮುಕ್ತಾಯವಾದ ಉತ್ಖನನ ಕಾರ್ಯವನ್ನು ಸೋಮವಾರ ಪರಿಶೀಲಿಸಿದ ಜಿಲ್ಲಾಧಿಕಾರಿ ದರ್ಪಣ್ ಜೈನ್ ಸುದ್ದಿಗಾರರ ಜತೆ ಮಾತನಾಡುತ್ತ ಈ ಮಾಹಿತಿ ತಿಳಿಸಿದ್ದಾರೆ.
ಕೆಲವು ತಿಂಗಳ ಹಿಂದೆ ನಾಲಾದಲ್ಲಿ 50 ಬುರುಡೆಗಳು ದೊರಕಿದ್ದವು. ನಂತರ 1.7ಮೀಟರ್ ಉದ್ದ ಹಾಗೂ 15.6 ಮೀಟರ್ ಅಗಲ ಪ್ರದೇಶದಲ್ಲಿ ಶೋಧನಾ ಕಾರ್ಯ ಮುಂದುವರಿಸಲಾಗಿತ್ತು. ಒಟ್ಟು 471 ತಲೆ ಬುರುಡೆಗಳು ಸಾಲಾಗಿ ಜೋಡಿಸಿಟ್ಟ ರೀತಿಯಲ್ಲಿ ಸಿಕ್ಕಿವೆ ಎಂದು ವಿವರಿಸಿದರು. ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ವಿಧಿವಿಜ್ಞಾನ ವಿಭಾಗ ಮೂರು ತಲೆಬುರುಡೆಗಳ ತಪಾಸಣೆ ನಡೆಸಿತ್ತು. ನಂತರ ಹೆಚ್ಚಿನ ಪರೀಕ್ಷೆಗಾಗಿ ಹೈದರಾಬಾದ್ನ ಸಂಶೋಧನಾಲಯಕ್ಕೆ ಕಳುಹಿಸಿಲಾಗಿತ್ತು. ಆದರೆ ಅಲ್ಲಿಂದ ನಿರೀಕ್ಷಿತ ಫಲಿತಾಂಶ ಬರಲಿಲ್ಲವಾಗಿತ್ತು.
ಇದೀಗ ಭುವನೇಶ್ವರದಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ತಲೆಬುರುಡೆಗಳ ಮಾದರಿಗಳನ್ನು ಕಾರ್ಬನ್ ಡೇಟಿಂಗ್ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಇನ್ನೆರಡು ವಾರಗಳಲ್ಲಿ ಅದರ ವರದಿಯನ್ನು ನಿರೀಕ್ಷಿಸಲಾಗುತ್ತಿದ್ದು, ಈ ಹತ್ಯಾಕಾಂಡ ನಡೆದ ಕಾಲದ ಬಗ್ಗೆ ಪತ್ತೆಯಾಗುವ ನಿರೀಕ್ಷೆಯಿದೆ ಎಂದರು.
ಇದು ವಾಮಾಚಾರಕ್ಕೆ ಬಲಿಯಾದವರ ತಲೆಬುರುಡೆಗಳು ಅಲ್ಲವೇ ಅಲ್ಲ. ಸಾಮೂಹಿಕ ಹತ್ಯಾಕಾಂಡದ ತಲೆಬುರುಡೆಗಳು ಎನ್ನಲು ಸಾಕಷ್ಟು ಪುರಾವೆಗಳಿವೆ. ಇದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ನಡೆದ ಘಟನೆಯಾಗಿರಬಹುದು ಎಂದು ಇಲಾಖೆಯ ನಿರ್ದೇಶಕ ಎಂ.ಎಸ್.ಕೃಷ್ಣಮೂರ್ತಿ ಹೇಳಿದರು.