ಧಾರವಾಡ ಜಿಲ್ಲೆಯ ಅಣ್ಣಿಗೇರಿಯಲ್ಲಿ ದೊರೆತ ತಲೆಬುರುಡೆಗಳು ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಆ ತಲೆಬುರುಡೆಗಳು ಸುಮಾರು 638 ವರ್ಷಗಳಷ್ಟು ಹಳೆಯ ಕಾಲದವು ಎಂದು ಕಾರ್ಬನ್-14 ಡೇಟಿಂಗ್ ತಂತ್ರಜ್ಞಾನದಿಂದ ತಿಳಿದುಬಂದಿದೆ.
ಅಣ್ಣಿಗೇರಿಯಲ್ಲಿ ದೊರೆತ ನೂರಾರು ತಲೆಬುರುಡೆಗಳಲ್ಲಿ ಎರಡನ್ನು ಭುವನೇಶ್ವರದ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆ ನಿಟ್ಟಿನಲ್ಲಿ ಅಣ್ಣಿಗೇರಿಯಲ್ಲಿ ದೊರೆತ ತಲೆಬುರುಡೆಗಳ ಕಾಲವನ್ನು ಕಾರ್ಬನ್ ಡೇಟಿಂಗ್ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿರುವುದಾಗಿ ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ತಿಳಿಸಿದ್ದಾರೆ.
ತಲೆಬುರುಡೆಗಳ ಕುರಿತ ವಿಸ್ತ್ರತ ವರದಿಯನ್ನು ಪ್ರೊ.ಮಹಾಪಾತ್ರ ಅವರು ಧಾರವಾಡ ಜಿಲ್ಲಾಧಿಕಾರಿ ದರ್ಪಣ್ ಜೈನ್ ಅವರಿಗೆ ರವಾನಿಸಿದ್ದರು. ಹೆಚ್ಚಿನ ಪರೀಕ್ಷೆಗಾಗಿ ತಲೆಬುರುಡೆಯನ್ನು ಅಹಮದಾಬಾದ್ಗೆ ರವಾನಿಸುವುದಾಗಿ ಜೈನ್ ಹೇಳಿದರು.
ಅಲ್ಲದೇ, ರಾಜ್ಯ ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿ ಪುರಾತತ್ವ ಶಾಸ್ತ್ರಜ್ಞರು ಮತ್ತು ಇತಿಹಾಸ ತಜ್ಞರು ಅಣ್ಣಿಗೇರಿಯಲ್ಲಿ 2010ರ ಸೆಪ್ಟೆಂಬರ್ ಮತ್ತು 2011ರ ಮಾರ್ಚ್ನಲ್ಲಿ ದೊರೆತ ತಲೆಬುರುಡೆಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಿ ಪ್ರತ್ಯೇಕ ವರದಿ ತಯಾರಿಸಿದ್ದಾರೆ. ಈ ವರದಿ ತಲೆಬುರುಡೆಗಳ ಕುರಿತ ಗೊಂದಲ ಪರಿಹರಿಸಲಿದೆ ಎಂದು ಇತಿಹಾಸ ತಜ್ಞ ಪ್ರೊ.ಎಂ.ಎಸ್.ಕೃಷ್ಣಮೂರ್ತಿ ತಿಳಿಸಿದ್ದಾರೆ.
ಅಣ್ಣಿಗೇರಿಯಲ್ಲಿ ಆಕಸ್ಮಿಕವಾಗಿ ನೂರಾರು ತಲೆಬುರುಡೆಗಳು ಪತ್ತೆಯಾದಾಗ ಇದಕ್ಕೆ ಇತಿಹಾಸದಲ್ಲಿ ನಡೆದಿರಬಹುದಾದ ಮಾನವ ಹತ್ಯಾಕಾಂಡವೊಂದು ಕಾರಣವಾಗಿರುವ ಸಾಧ್ಯತೆ ಇದೆ ಎಂದು ಪುರಾತತ್ವ ಶಾಸ್ತ್ರಜ್ಞರು ಅನುಮಾನವ್ಯಕ್ತಪಡಿಸಿದ್ದರು.