ತನ್ನ ಪತಿ ಬೆಥಲ್ ಚರ್ಚ್ ಪಾದ್ರಿಯಾಗಿದ್ದು, ಆತನ ಅಪ್ರಾಪ್ತ ವಯಸ್ಸಿನ ಹೆಣ್ಣುಮಕ್ಕಳನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವುದಾಗಿ ಪತ್ನಿಯೇ ಗಂಗಮ್ಮನ ಗುಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿರುವ ಘಟನೆ ಶುಕ್ರವಾರ ನಡೆದಿದೆ.
ಬೆಥಲ್ ಚರ್ಚ್ ಪಾಸ್ಟರ್ ಶಾಂತರಾಜು ತುಮಕೂರು ರಸ್ತೆಯಲ್ಲಿರುವ ನಗರದ ಸಿದ್ದಾರ್ಥ ನಗರದಲ್ಲಿ ಶಿಕ್ಷಣ ಸಂಸ್ಥೆಯೊಂದನ್ನು ನಡೆಸುತ್ತಿದ್ದಾನೆ. ಆದರೆ ಶಾಂತರಾಜು ಸಂಸ್ಥೆಯಲ್ಲಿನ ಅಪ್ರಾಪ್ತ ಬಾಲಕಿಯರನ್ನು ಮನೆಗೆ ಕರೆತಂದು ಕೌನ್ಸೆಲಿಂಗ್ ಹೆಸರಿನಲ್ಲಿ ಲೈಂಗಿಕ ಚಟುವಟಿಕೆ ನಡೆಸುತ್ತಿರುವುದಾಗಿ ಪತ್ನಿ ಪ್ರಿಯಲತಾ ದೂರಿನಲ್ಲಿ ತಿಳಿಸಿದ್ದಾರೆ.
1995ರಲ್ಲಿ ಶಿಕ್ಷಣ ಸಂಸ್ಥೆ ಆರಂಭವಾಗಿದ್ದು, ಅದಕ್ಕೆ ಪಾಸ್ಟರ್ ಶಾಂತರಾಜು ಮುಖ್ಯಸ್ಥ. ಆದರೆ ಪತಿ ಹೆಣ್ಮಕ್ಕಳಿಗೆ ಆಮಿಷವೊಡ್ಡಿ ಲೈಂಗಿಕ ಚಟುವಟಿಕೆ ನಡೆಸುತ್ತಿದ್ದರು. ಅದೂ ಅಲ್ಲದೇ ಹೆಣ್ಣು ಮಕ್ಕಳನ್ನು ಮನೆಗೆ ಕರೆದುಕೊಂಡು ಬರುತ್ತಿದ್ದ. ಆಗ ನನ್ನ ಮತ್ತು ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕುತ್ತಿದ್ದ ಎಂದು ಅಲವತ್ತುಕೊಂಡಿರುವ ಪತ್ನಿ ಪ್ರಿಯಲತಾ, ಇದರಿಂದ ರೋಸಿ ಹೋಗಿ ತಾನು ಪೊಲೀಸ್ ಠಾಣೆ ಮೆಟ್ಟಿಲೇರುವುದಾಗಿ ತಿಳಿಸಿದ್ದಾರೆ.
ಗಂಡನ ಈ ನಡವಳಿಕೆಯಿಂದ ರೋಸಿ ಹೋಗಿ ಸಾಕಷ್ಟು ರಂಪಾಟ ನಡೆದಿತ್ತು. ಆಗ 2000ನೇ ಇಸವಿಯಲ್ಲಿ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದೆ. ಆದರೆ ಶಾಂತರಾಜು ವಿಚ್ಛೇದನಕ್ಕೆ ಒಪ್ಪದೆ, ಕೊನೆಗೆ ತಾನು ಇನ್ಮುಂದೆ ಆ ರೀತಿ ನಡೆದುಕೊಳ್ಳುವುದಿಲ್ಲ ಎಂದು ಕೋರ್ಟ್ನಲ್ಲಿ ಬರೆದುಕೊಟ್ಟು ರಾಜಿಯಾಗಿದ್ದೇವು. ಆ ಬಳಿಕ 2010ರಲ್ಲಿ ಕೆಲ ಕಾಲ ಸುಮ್ಮನಿದ್ದ ಪತಿ, ನಂತರ ಮತ್ತೆ ಶಿಕ್ಷಣ ಸಂಸ್ಥೆಯ ಹೆಣ್ಣು ಮಕ್ಕಳನ್ನು ಮನೆಗೆ ಕರೆದು ತಂದು ಎರಡು ಗಂಟೆಗಳ ಕಾಲ ಕೋಣೆಯೊಳಗೆ ಇರುತ್ತಿದ್ದರು. ಇದನ್ನು ಪ್ರತಿಭಟಿಸಿದ್ದಕ್ಕೆ ತನಗೂ ಮತ್ತು ಮಕ್ಕಳಿಗೆ ಹೊಡೆದು ಮನೆಯಿಂದ ಹೊರಹಾಕಿರುವುದಾಗಿ ಪ್ರಿಯಲತಾ ಆರೋಪಿಸಿದ್ದಾರೆ.
ಶಾಂತರಾಜು ಲೈಂಗಿಕ ಕಿರುಕುಳದ ಬಗ್ಗೆ ಸ್ಥಳೀಯರಲ್ಲಿ ಹೇಳಿದರೆ, ಅವರು ಪಾಸ್ಟರ್ ಹಾಗೆಲ್ಲ ಮಾಡುವುದಿಲ್ಲ ಎಂದು ನಮ್ಮ ಮೇಲೆ ಗೂಬೆ ಕೂರಿಸುತ್ತಾರೆ. ಇದೀಗ ನಾವು ಚರ್ಚ್ ಆವರಣದ ಶೆಡ್ನಲ್ಲಿ ವಾಸವಾಗಿದ್ದೇವೆ. ಅಲ್ಲದೇ ಎರಡು ಮೂರು ಬಾರಿ ಕೊಲೆ ಮಾಡಲು ಕೂಡ ಶಾಂತರಾಜ್ ಸಂಚು ನಡೆಸಿರುವುದಾಗಿ ದೂರಿದ್ದಾರೆ. ಇದೀಗ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.