ಬಿ.ಎಸ್.ಯಡಿಯೂರಪ್ಪ ರಾಜ್ಯದ ಮೇಲೆ ಸಾವಿರಾರು ಕೋಟಿ ರೂಪಾಯಿ ಸಾಲದ ಹೊರೆ ಹೊರಿಸಿ ಮುಖ್ಯಮಂತ್ರಿಗಾದಿಯಿಂದ ನಿರ್ಗಮಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ, ಸಂಸದ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಬರೇ ಹೇಳಿಕೆಗಳ ಮೂಲಕ ರಾಜ್ಯದ ಬಹಳಷ್ಟು ಪ್ರಗತಿ ಸಾಧಿಸಿರುವುದಾಗಿ ಬೊಗಳೆ ಬಿಟ್ಟಿದ್ದ ಯಡಿಯೂರಪ್ಪ ರಾಜ್ಯದ ಜನರ ಮೇಲೆ 95 ಸಾವಿರ ಕೋಟಿ ರೂಪಾಯಿ ಸಾಲ ಹೇರಿರುವುದಾಗಿ ವಾಗ್ದಾಳಿ ನಡೆಸಿದರು.
ಬಿಜೆಪಿಯಲ್ಲಿ ಒಳಜಗಳ ಹೆಚ್ಚಾಗಿದ್ದು, ಈಶ್ವರಪ್ಪ ಮತ್ತು ಯಡಿಯೂರಪ್ಪ ಬಣಗಳಾಗಿವೆ. ತಮ್ಮದು ಕಾಂಗ್ರೆಸ್ಗಿಂತ 'ಭಿನ್ನ' ಪಕ್ಷ ಎಂದು ಹೇಳಿಕೊಳ್ಳುತ್ತಲೇ ಪಕ್ಷದೊಳಗೆ ಬಂಡಾಯ ಸ್ಫೋಟಗೊಂಡಿರುವುದು ಇದೀಗ ಜಗಜ್ಜಾಹೀರಾಗಿದೆ ಎಂದು ಟೀಕಿಸಿದರು.
ಪಕ್ಷದ ವರಿಷ್ಠರ ಮೇಲೆ ಒತ್ತಡ ತಂತ್ರ ಹೇರಿರುವ ಯಡಿಯೂರಪ್ಪ ಸದಾನಂದ ಗೌಡರನ್ನು ಮುಖ್ಯಮಂತ್ರಿಯನ್ನಾಗಿ ಮಾಡುವ ಮೂಲಕ ತಮ್ಮ ಹಠವನ್ನು ಸಾಧಿಸಿದ್ದಾರೆ ಎಂದು ಅಭಿಪ್ರಾಯವ್ಯಕ್ತಪಡಿಸಿದ ವಿಶ್ವನಾಥ್, ನೂತನ ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿದ ನ್ಯಾ.ಶಿವರಾಜ್ ಪಾಟೀಲ್ ಕ್ರಿಮಿನಲ್ ಮುಕ್ತ ರಾಜ್ಯವನ್ನಾಗಿ ಮಾಡಲು ಶ್ರಮಿಸಲಿ ಎಂದು ಸಲಹೆ ನೀಡಿದರು.