ಬಿಡಿಎ ನಿವೇಶನದಲ್ಲಿ ಅಕ್ರಮ ಕಟ್ಟಡ ನಿರ್ಮಿಸಿದ ಆರೋಪ ಹೊರಿಸಿ ನೂತನ ಮುಖ್ಯಮಂತ್ರಿ ಡಿವಿ ಸದಾನಂದ ಗೌಡರ ವಿರುದ್ಧ ಹೈಕೋರ್ಟ್ನಲ್ಲಿ ಪತ್ರಕರ್ತೆ ಕೆ.ಜಿ.ನಾಗಲಕ್ಷ್ಮಿ ಬಾಯಿ ಗುರುವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ.
ಬಿಡಿಎ ರೂಪಿಸಿರುವ ಮಾಸ್ಟರ್ ಪ್ಲಾನ್-2015ರ ಪ್ರಕಾರ, ಎರಡು ನಿವೇಶನಗಳನ್ನು ಜತೆಗೂಡಿಸಿ ಕಟ್ಟಡ ನಿರ್ಮಿಸುವಂತಿಲ್ಲ. ವಸತಿ ನಿವೇಶನದಲ್ಲಿ ವಾಣಿಜ್ಯ ಕಟ್ಟಡ ನಿರ್ಮಿಸಲಾಗಿದೆ. ನಿವೇಶನ ಹಿಂಪಡೆದು ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
2007ರಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಎಚ್ಎಸ್ಆರ್ ಲೇಔಟ್ನ ಯಲ್ಲಂಗುಂಟೆಯಲ್ಲಿ ಡಿ.ವಿ.ಸದಾನಂದ ಗೌಡ 50-80ರ ನಿವೇಶನ ಪಡೆದಿದ್ದರು. ಇದರ ಪಕ್ಕದಲ್ಲೇ ಶೃಂಗೇರಿ ಶಾಸಕ ಡಿ.ಎನ್.ಜೀವರಾಜ್ ಅವರಿಗೂ ನಿವೇಶನ ಕೊಡಲಾಗಿತ್ತು. ಜೀವರಾಜ್ ಜತೆ ಒಪ್ಪಂದ ಮಾಡಿಕೊಂಡಿದ್ದು, ಎರಡೂ ನಿವೇಶನ ಸೇರಿಸಿ ದೊಡ್ಡ ಕಟ್ಟಡ ನಿರ್ಮಿಸಲು ಅನುಮತಿ ನೀಡಿ ಎಂದು ಬಿಡಿಎಗೆ ಗೌಡರು ಮನವಿ ಸಲ್ಲಿಸಿದ್ದರು.
ಆದರೆ, ಬಿಡಿಎ ಮನವಿಯನ್ನು ತಿರಸ್ಕರಿಸಿ 2015ರ ಮಾಸ್ಟರ್ ಪ್ಲಾನ್ ಕಲಂ 6.2ರ ಪ್ರಕಾರ, ಇಬ್ಬರಿಗೆ ಸೇರಿದ ಪ್ರತ್ಯೇಕ ನಿವೇಶನವನ್ನು ಒಟ್ಟುಗೂಡಿಸಿ ಒಂದೇ ಕಟ್ಟಡ ನಿರ್ಮಿಸುವಂತಿಲ್ಲ. ಅಲ್ಲದೇ, ವಸತಿ ಪ್ರದೇಶದಲ್ಲಿ ವಾಣಿಜ್ಯ ಉದ್ದೇಶಕ್ಕೆ ಕಟ್ಟಡ ನಿರ್ಮಿಸಲು ಅನುಮತಿ ನೀಡಲು ಸಾಧ್ಯ ಇಲ್ಲ ಎಂದು ಹೇಳಿತ್ತು.
ಈ ಆದೇಶಕ್ಕೆ ಬೆಲೆ ಕೊಡದೆ ಸದಾನಂದ ಗೌಡ, ಐದು ಮಹಡಿಗಳ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಮುಂದಾಗಿದ್ದಾರೆ. ಈಗಾಗಲೇ ಎರಡು ಮಹಡಿ ಕಾಮಗಾರಿ ಮುಗಿದಿದೆ. ಬಹುಮಹಡಿ ಕಟ್ಟಡ ಕಟ್ಟಲು ಪಾಲಿಕೆ ಅಥವಾ ಬಿಡಿಎ ಅನುಮತಿ ಪಡೆದಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಎಚ್ಡಿಕೆಯಿಂದ್ಲೂ ನಿವೇಶನ: ಮುಖ್ಯಮಂತ್ರಿ ವಿವೇಚನೆ ಕೋಟಾದಡಿ ನಿವೇಶನ ಹಂಚಿಕೆ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಮತ್ತೊಂದು ಅರ್ಜಿ ದಾಖಲಾಗಿದೆ. ಇದರಲ್ಲೂ ಡಿವಿಎಸ್ ಒಬ್ಬ ಪ್ರತಿವಾದಿ. 2007ರ ಫೆಬ್ರವರಿಯಲ್ಲಿ ಸದಾನಂದ ಗೌಡ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರಿಂದ ಜಿ ಕೆಟಗರಿ ನಿವೇಶನ ಪಡೆದಿದ್ದರು.