ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » 'ಕೈ' ಕಾರ್ಪೋರೇಟರ್ ಹತ್ಯೆ, ಸಚಿವ ಸೋಮಣ್ಣ ಮೇಲೆ ಚಪ್ಪಲಿ ಎಸೆದು ಹಲ್ಲೆ (Bangalore C0rporator Murder | V.Somanna | Murder | Congress | Karnataka News | Bangalore News)
'ಕೈ' ಕಾರ್ಪೋರೇಟರ್ ಹತ್ಯೆ, ಸಚಿವ ಸೋಮಣ್ಣ ಮೇಲೆ ಚಪ್ಪಲಿ ಎಸೆದು ಹಲ್ಲೆ
ಬೆಂಗಳೂರು, ಶನಿವಾರ, 1 ಅಕ್ಟೋಬರ್ 2011( 15:28 IST )
PR
ವಿಧಾನಸೌಧದ ಸಮೀಪ ವಸತಿ ಸಚಿವ ವಿ.ಸೋಮಣ್ಣ ಮೇಲೆ ವ್ಯಕ್ತಿಯೊಬ್ಬ ಚಾಕುವಿನಿಂದ ಹಲ್ಲೆ ನಡೆಸಲು ಯತ್ನಿಸಿ, ಚಪ್ಪಲಿ ಎಸೆದ ಘಟನೆ ಶನಿವಾರ ಬೆಳಿಗ್ಗೆ ನಡೆದಿದೆ. ಮತ್ತೊಂದೆಡೆ ಗಾಂಧೀನಗರ 94ನೇ ವಾರ್ಡ್ ಕಾಂಗ್ರೆಸ್ ಕಾರ್ಪೋರೇಟರ್ ಎಸ್.ನಟರಾಜ್ ಅವರನ್ನು ಹಾಡಹಗಲೇ ದುಷ್ಕರ್ಮಿಗಳು ಮಚ್ಚು, ಲಾಂಗ್ನಿಂದ ಕೊಚ್ಚಿ ಕೊಲೆಗೈದಿರುವ ಆಘಾತಕಾರಿ ಘಟನೆ ನಡೆದಿದೆ.
ಮೂರನೇ ಮಹಡಿಯಲ್ಲಿ ಸೋಮಣ್ಣನವರ ಅಧಿಕೃತ ಕಚೇರಿ ಇದೆ. ಆ ಸಂದರ್ಭದಲ್ಲಿ ಸೋಮಣ್ಣ ಕಚೇರಿಯಲ್ಲಿ ಚರ್ಚೆ ನಡೆಸಿ ಹೊರಬರುತ್ತಿದ್ದ ವೇಳೆ ಬಿಜೆಪಿ ಕಾರ್ಯಕರ್ತ ಎಂದು ಶಂಕಿಸಲಾಗಿರುವ ಪ್ರಸಾದ್ ಎಂಬಾತ ಚಪ್ಪಲಿ ಎಸೆದು ಹಲ್ಲೆ ನಡೆಸಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೂಲತಃ ಈತ ಉತ್ತರ ಕರ್ನಾಟಕದ ವ್ಯಕ್ತಿ. ಸದ್ಯ ಹೆಬ್ಬಾಳದ ಗಂಗಯ್ಯನಹಳ್ಳಿ ನಿವಾಸಿಯಾಗಿರುವ ಪ್ರಸಾದ್, ತನಗೆ ಬಿಜೆಪಿಯಿಂದ ಸಾಕಷ್ಟು ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಸಚಿವ ಸೋಮಣ್ಣ ಮೇಲೆ ಚಪ್ಪಲಿ ಎಸೆದು ಹಲ್ಲೆಗೆ ಮುಂದಾಗಿದ್ದಾನೆ ಎಂದು ಮೂಲಗಳು ಹೇಳಿವೆ.
ಆದರೆ ಚಪ್ಪಲಿ ಸಚಿವರ ಮೇಲೆ ಬೀಳಲಿಲ್ಲ ಎನ್ನಲಾಗಿದೆ. ಕೂಡಲೇ ಸೋಮಣ್ಣನವರನ್ನು ಭೇಟಿಯಾಗಲು ಬಂದಿದ್ದ ಇನ್ನಿತರ ವ್ಯಕ್ತಿಗಳು ಪ್ರಸಾದ್ನನ್ನು ಸೆರೆ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಅಲ್ಲದೇ ಪ್ರಸಾದ್ ಬಳಿ ಚೂರಿ ಇದ್ದಿರುವುದಾಗಿ ಪ್ರತ್ಯಕ್ಷದರ್ಶಿಗಳು ವಿವರಿಸಿದ್ದಾರೆ.
PR
ಹಾಡಹಗಲೇ ಕಾರ್ಪೋರೇಟರ್ ಹತ್ಯೆ: ಮತ್ತೊಂದೆಡೆ ಗಾಂಧಿನಗರ 94ನೇ ವಾರ್ಡ್ನ ಕಾಂಗ್ರೆಸ್ ಪಕ್ಷದ ಕಾರ್ಪೋರೇಟರ್ ಎಸ್. ನಟರಾಜ್ ಮೇಲೆ ಲಾಂಗ್, ಮಚ್ಚುಗಳಿಂದ ಹಾಡಹಗಲೇ ವ್ಯಾನ್ನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ನಡೆಸಿದ ಮಾರಣಾಂತಿಕವಾಗಿ ಹಲ್ಲೆಯಲ್ಲಿ ಸಾವನ್ನಪ್ಪಿರುವ ಘಟನೆಯೂ ನಡೆದಿದೆ. ಕೂಡಲೇ ಸಾರ್ವಜನಿಕರು ನಟರಾಜ್ ಅವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಇದೀಗ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮಲ್ಲೇಶ್ವರಂ ಬಳಿ ಬಿಬಿಎಂಪಿ ಪ್ರತಿಪಕ್ಷ ನಾಯಕ ನಟರಾಜ್ ಮೇಲೆ ಏಕಾಏಕಿ ದಾಳಿ ನಡೆಸಿದ್ದು, ಅವರ ತಲೆಗೆ ಗಂಭೀರವಾದ ಏಟು ಬಿದ್ದಿದ್ದರಿಂದ ಸಾವನ್ನಪ್ಪಿರುವುದಾಗಿ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ನಟರಾಜ್ ಅವರ ಮೇಲೆ ದಾಳಿ ನಡೆಸಿ ಯಾಕಾಗಿ ಹತ್ಯೆ ನಡೆಸಲಾಯಿತು ಎಂಬ ವಿವರ ತಿಳಿದು ಬಂದಿಲ್ಲ. ಆದರೆ ಪ್ರಾಥಮಿಕ ಮಾಹಿತಿ ಪ್ರಕಾರ ರಾಜಕೀಯ ವೈಷಮ್ಯವೇ ನಟರಾಜ್ ಹತ್ಯೆಗೆ ಕಾರಣ ಎಂದು ಹೇಳಲಾಗುತ್ತಿದೆ.