ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಗಾಂಧಿನಗರ ಕಾರ್ಪೋರೇಟರ್ ನಟರಾಜ್ ಹತ್ಯೆ, ಇಬ್ಬರ ಸೆರೆ (Bangalore corporator Murder | Nataraj Murder | bangalore | Gandhinagar | Congress | BBMP,)
ಗಾಂಧಿನಗರ ಕಾರ್ಪೋರೇಟರ್ ನಟರಾಜ್ ಹತ್ಯೆ, ಇಬ್ಬರ ಸೆರೆ
ಬೆಂಗಳೂರು, ಶನಿವಾರ, 1 ಅಕ್ಟೋಬರ್ 2011( 15:28 IST )
PR
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಗಾಂಧಿನಗರ 94ನೇ ವಾರ್ಡ್ನ ಕಾಂಗ್ರೆಸ್ ಸದಸ್ಯ ಎಸ್.ನಟರಾಜ್ ಅವರನ್ನು ಶನಿವಾರ ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಶೇಷಾದ್ರಿಪುರಂ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಲ್ಲೇಶ್ವರಂ ಸರ್ಕಲ್ನಲ್ಲಿ ಬಿಬಿಎಂಪಿ ಪ್ರತಿಪಕ್ಷದ ನಾಯಕ ನಟರಾಜ್ ಮೇಲೆ ಕಾರಿನಲ್ಲಿ ಆಗಮಿಸಿದ್ದ ದುಷ್ಕರ್ಮಿಗಳು ಮಚ್ಚು, ಲಾಂಗ್ಗಳಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ನಟರಾಜ್ ಹತ್ಯೆಗೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಆರು ತಂಡಗಳನ್ನು ರಚಿಸಲಾಗಿತ್ತು. ಇದೀಗ ಮುರುಗನ್ ಹಾಗೂ ಶಶಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮುರುಗನ್ ಎಂಬಾತ ನಟರಾಜ್ ವಿರುದ್ಧ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದ. ನಟರಾಜ್ ವಿರುದ್ಧ ಸ್ಪರ್ಧಿಸಿದ್ದ ಮುರುಗನ್ ಮತ ಎಣಿಕೆ ವೇಳೆ ಜಟಾಪಟಿಗೆ ಇಳಿದಿದ್ದ ಎಂದು ಪ್ರಾಥಮಿಕ ಮಾಹಿತಿ ಲಭ್ಯವಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಅಲ್ಲದೇ ಶಶಿ ಎಂಬಾತ ಲೈಸೆನ್ಸ್ ಇಲ್ಲದೇ ನಡೆಸುತ್ತಿದ್ದ ಚಪ್ಪಲಿ ಅಂಗಡಿಯನ್ನು ಕಾರ್ಪೋರೇಟರ್ ನಟರಾಜ್ ಎತ್ತಂಗಡಿ ಮಾಡಿಸಿದ್ದರು. ಇದರಿಂದ ಆತನಿಗೆ ನಟರಾಜ್ ಮೇಲೆ ದ್ವೇಷ ಇತ್ತು ಎನ್ನಲಾಗಿದೆ. ಆ ನಿಟ್ಟಿನಲ್ಲಿ ಇಬ್ಬರನ್ನೂ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿರುವುದಾಗಿ ಪೊಲೀಸ್ ಅಧಿಕಾರಿಗಳು ವಿವರಿಸಿದ್ದಾರೆ.
ಕಾರ್ಪೋರೇಟರ್ ನಟರಾಜ್ ಅವರನ್ನು ಹತ್ಯೆಗೈದ ನಂತರ ದುಷ್ಕರ್ಮಿಗಳು ಹೆಬ್ಬಾಳದ ಮುನೇಶ್ವರ್ 3ನೇ ಕ್ರಾಸ್ ಬಳಿ ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಇದನ್ನು ವೈಯ್ಯಾಲಿಕಾವಲ್ ಪೊಲೀಸರು ಪತ್ತೆ ಹಚ್ಚಿ, ಕಾರಿನಲ್ಲಿದ್ದ ಮಚ್ಚು, ಲಾಂಗ್ ಅನ್ನು ವಶಪಡಿಸಿಕೊಂಡಿದ್ದರು.