ಕಾಂಗ್ರೆಸ್ ನಾಯಕರ ಮಾರಾಮಾರಿ; ಸಿದ್ದು, ಪರಮೇಶ್ವರ್ ಮೂಕ ಸಾಕ್ಷಿ!
ಬೆಂಗಳೂರು, ಭಾನುವಾರ, 2 ಅಕ್ಟೋಬರ್ 2011( 15:21 IST )
ಚಿತ್ರದುರ್ಗದಲ್ಲಿ ನಡೆದ ಮತದಾರರೊಂದಿಗೆ ಮುಖಾಮುಖಿ ಕಾರ್ಯಕ್ರಮದ ವೇಳೆ ಕಾಂಗ್ರೆಸ್ ನಾಯಕರ ನಡುವೆ ಭಾರಿ ಮಾರಾಮಾರಿ ನಡೆದಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ (ಕೆಪಿಸಿಸಿ) ಡಾ. ಜಿ. ಪರಮೇಶ್ವರ್ ಮೂಕ ಸಾಕ್ಷಿಯಾಗಿ ನಿಲ್ಲುವಂತಾಗಿದೆ.
ಸ್ವಾಗತ ಭಾಷಣದಲ್ಲಿ ಹಿರಿಯ ಮುಖಂಡ ಮಾಜಿ ಸಂಸದ ಕೊಂದಡರಾಮ ಹೆಸರು ಕೈಬಿಟ್ಟಿದ್ದಕ್ಕೆ ಬೆಂಬಲಿಗರು ದಾಂಧಲೆ ಸೃಷ್ಟಿಸಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮತ್ತೊಂದು ಬಣದಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಮಾತಿಗೆ ಮಾತು ಬೆಳೆಯುತ್ತಿದ್ದಂತೆಯೇ ಎರಡು ಬಣಗಳ ನಡುವೆ ಜಟಾಪಟಿ ನಡೆಯಿತು ಎಂದು ಮೂಲಗಳು ತಿಳಿಸಿವೆ.
ರಾಜ್ಯ ನಾಯಕರಾದ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ಸನ್ಮುಖದಲ್ಲೇ ದಾಂಧಲೆ ಸೃಷ್ಟಿಯಾಗಿರುವುದು ಕಾಂಗ್ರೆಸ್ ಪಕ್ಷವನ್ನು ತೀವ್ರ ಮುಜುಗರಕ್ಕೆ ಒಳಪಡಿಸಿದೆ. ಮತ್ತೊಂದು ಮೂಲಗಳು ವರದಿ ಮಾಡುವಂತೆಯೇ, ಮುಖಂಡರು ಜಟಾಪಟಿಯಲ್ಲಿ ತೊಡಗುತ್ತಿದ್ದ ಸಂದರ್ಭದಲ್ಲಿ ಎಲ್ಲರೂ ಸಿನಿಮಾ ನೋಡುವ ರೀತಿಯಲ್ಲಿ ಕುಳಿತುಕೊಂಡಿದ್ದರು ಎಂಬ ಅಪವಾದವೂ ಕೇಳಿಬಂದಿವೆ. ಈ ಸಂದರ್ಭದಲ್ಲಿ ಕಾಂಗ್ರೆಸ್ ಧುರೀಣೆ ಮೋಟಮ್ಮ ಕೂಡಾ ಉಪಸ್ಥಿತರಿದ್ದರು.
ಆನಂತರ ಮಧ್ಯಸ್ಥಿಕೆ ವಹಿಸಿದ ಪೊಲೀಸರು ಕಾದಾಟದಲ್ಲಿ ತೊಡಗಿದ್ದವರನ್ನು ಚದುರಿಸಿದರು. ಗಲಾಟೆ ಮಾಡಿಕೊಂಡವರು ಕಾಂಗ್ರೆಸ್ ಮುಖಂಡರೇ ಆಗಿರುವುದು ಪಕ್ಷಕ್ಕೆ ತೀವ್ರ ಮುಜುಗರಕ್ಕೆ ಕಾರಣವಾಗಿದ್ದು, ಒಟ್ಟಾರೆಯಾಗಿ ಕಾಂಗ್ರೆಸ್ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದನ್ನು ಇಂತಹ ಘಟನೆಗಳು ಸಾರುತ್ತಿವೆ.