ರಾಜ್ಯದಲ್ಲಿ ಒಂದರಿಂದ ಹತ್ತನೆ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು. ಆ ಮೂಲಕ ಭಾಷೆ ವಿಷಯದಲ್ಲಿ ಸರಕಾರ ತನ್ನ ಬದ್ಥತೆ ತೋರಿಸಬೇಕಾದ ಅಗತ್ಯವಿದೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಆಗ್ರಹಿಸಿದ್ದಾರೆ.
ಸರಕಾರಿ ಹಾಗೂ ಹಾಗೂ ಖಾಸಗಿ ಎಂಬ ಎರಡು ಮಾದರಿಯಲ್ಲಿ ಶಿಕ್ಷಣ ನೀಡುವದರಿಂದ ರಾಜ್ಯ ಶಿಕ್ಷಣ ಕ್ಷೇತ್ರದಲ್ಲಿ ಏಕತೆ ಮೂಡಿಸಲು ಸಾಧ್ಯವಿಲ್ಲ. ಆದರೆ ಶಿಕ್ಷಣದಲ್ಲಿ ಕೀಳರಿಮೆಯನ್ನು ನೀಗಿಸಲು ಒಂದರಿಂದ 10ರ ವರೆಗಿನ ಶಿಕ್ಷಣವನ್ನು ಕಡ್ಡಾಯಗೊಳಿಸಬೇಕು. ಈ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದರು.
ತಮಿಳುನಾಡು, ಮಹಾರಾಷ್ಟ್ರ ಸೇರಿದ ರಾಜ್ಯಗಳಲ್ಲಿ ಈಗಾಗಲೇ ಪ್ರಾಂತ್ಯ ಭಾಷೆಗಳನ್ನು ಕಡ್ಡಾಯಗೊಳಿಸಲಾಗಿದೆ. ಇದು ಕರ್ನಾಟಕಕ್ಕೆ ಕೂಡಾ ಅನ್ವಯವಾಗಬೇಕು ಎಂದರು.
ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ನಂತರ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ್ದ ಕಂಬಾರರು ಕನ್ನಡ ಭಾಷೆಗಳ ಪೂರಕವಾದ ವಿಷಯಗಳ ಬಗ್ಗೆ ಪ್ರಸ್ತಾಪಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಮಗೆ ಪ್ರಶಸ್ತಿ ಬಂದಿದ್ದರ ಬಗ್ಗೆ ಡಾ. ಪಾಟೀಲ ಪುಟ್ಟಪ್ಪ ಅಪಸ್ವರ ಎತ್ತಿದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಕಂಬಾರರು ಈ ವಿಷಯವನ್ನು ಅವರನ್ನೇ ಕೇಳಿ ಎಂದರು.