ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ಕರ್ನಾಟಕ ಸುದ್ದಿ » ಸೊಪ್ಪು ಹಾಕದ ನಿತಿನ್ ಗಡ್ಕರಿ; ಕೋಪದಿಂದ ಯಡ್ಡಿ ವಾಪಸ್ (Bjp | Yeddyurappa | Sadananda Gowda | Nithin Gadkari | Eshwarappa | Meeting | Yeddy Angry | Karnataka News)
ಸೊಪ್ಪು ಹಾಕದ ನಿತಿನ್ ಗಡ್ಕರಿ; ಕೋಪದಿಂದ ಯಡ್ಡಿ ವಾಪಸ್
ಬೆಂಗಳೂರು, ಶುಕ್ರವಾರ, 24 ಫೆಬ್ರವರಿ 2012( 09:46 IST )
PR
'ತನ್ನನ್ನು ಮತ್ತೆ ಮುಖ್ಯಮಂತ್ರಿ ಮಾಡುವ ನಿಟ್ಟಿನಲ್ಲಿ ಹೈಕಮಾಂಡ್ ಫೆ.27ರ ಗಡುವು ನೀಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಡೆಡ್ಲೈನ್ಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಮಣೆ ಹಾಕದ ಕಾರಣ ಬಿಎಸ್ವೈ ಕೋಪದಿಂದ ವಾಪಸ್ ಆಗುವ ಮೂಲಕ' ಬಿಜೆಪಿಯೊಳಗಿನ ಗದ್ದುಗೆ ಗುದ್ದಾಟ ಮತ್ತೊಂದು ಸ್ವರೂಪ ಪಡೆದುಕೊಳ್ಳತೊಡಗಿದೆ.
ಶುಕ್ರವಾರ ಬೆಳಿಗ್ಗೆ ನಗರದ ಅಶೋಕ್ ಹೋಟೆಲ್ಗೆ ಭೇಟಿ ನೀಡಿದ್ದ ಯಡಿಯೂರಪ್ಪನವರು ನಿತಿನ್ ಗಡ್ಕರಿ ಜತೆ ಸುಮಾರು 20 ನಿಮಿಷಗಳ ಕಾಲ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಸಂಸದ ಅನಂತ್ ಕುಮಾರ್, ಮುಖ್ಯಮಂತ್ರಿ ಸದಾನಂದ ಗೌಡ, ರಾಜ್ಯಾಧ್ಯಕ್ಷ ಈಶ್ವರಪ್ಪ ಕೂಡ ಹಾಜರಿದ್ದರು.
ಯಡಿಯೂರಪ್ಪ ಸದಾನಂದ ಗೌಡರು ಮುಖ್ಯಮಂತ್ರಿ ಸ್ಥಾನವನ್ನು ತಮಗೆ ಬಿಟ್ಟುಕೊಡುವ ಸಂಬಂಧ ತೀರ್ಮಾನ ತೆಗೆದುಕೊಳ್ಳಳು ಹೈಕಮಾಂಡ್ಗೆ ಫೆ.27ರ ಗಡುವು ನೀಡಿದ್ದರು. ತಮಗೆ ಎಲ್ಲ ಶಾಸಕರ ಬೆಂಬಲ ಇರುವುದಾಗಿಯೂ ಹೇಳಿದ್ದಾರೆನ್ನಲಾಗಿದೆ. ಆದರೆ ಗಡ್ಕರಿಯವರು ಈ ಬೇಡಿಕೆಯನ್ನು ಸುತಾರಾಂ ಒಪ್ಪದ ಪರಿಣಾಮ ಕೋಪಗೊಂಡು ಹೊರನಡೆದಿದ್ದರು.
ಇದೀಗ ರೇಸ್ಕೋರ್ಸ್ ನಿವಾಸಕ್ಕೆ ವಾಪಸ್ ಆಗಿರುವ ಯಡಿಯೂರಪ್ಪ ಇಂದು ಗಡ್ಕರಿ ನೇತೃತ್ವದಲ್ಲಿ ನಡೆಯಲಿರುವ ಚಿಂತನ-ಮಂಥನ ಸಭೆಗೆ ಹೋಗಬೇಕೇ ಬೇಡವೇ ಎಂಬ ಬಗ್ಗೆ ತಮ್ಮ ಆಪ್ತ ಶಾಸಕರು,ಸಚಿವರು, ಸಂಸದರ ಜತೆ ಬಿರುಸಿನ ಚರ್ಚೆ ನಡೆಸುತ್ತಿದ್ದಾರೆ.
ಏತನ್ಮಧ್ಯೆ ಯಡಿಯೂರಪ್ಪ ಕಟ್ಟಾ ಬೆಂಬಲಿಗರಾದ ಸಚಿವ ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಜಗದೀಶ್ ಶೆಟ್ಟರ್ ಸೇರಿದಂತೆ ಹಲವು ಶಾಸಕರು, ಸಚಿವರು ನಿತಿನ್ ಗಡ್ಕರಿಯವರನ್ನು ಭೇಟಿಯಾಗಿ ಯಡಿಯೂರಪ್ಪ ಪರ ವಕಾಲತ್ತು ವಹಿಸಿದ್ದಾರೆ. ಒಟ್ಟಿನಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಗಾದಿ ಏರಬೇಕೆಂಬ ಹಠ ಬಿಜೆಪಿಯೊಳಗೆ ಮತ್ತೊಂದು ಸುತ್ತಿನ ರಾಜಕೀಯ ಬಿಕ್ಕಟ್ಟು ಸೃಷ್ಟಿಗೆ ಎಡೆಮಾಡಿಕೊಟ್ಟಿದೆ.