ಕೇವಲ ಹತ್ತೇ ದಿನ ಇಲ್ಲಿ ಜಾತ್ರೆ ನಡೆಯುತ್ತದೆ. ಆದರೂ ಭರ್ತಿ ಎರಡು ಲಕ್ಷ ಆಡುಗಳ ಜೀವ ಅನ್ನೋದು ಬಲಿ ರೂಪದಲ್ಲಿ ಹೋಗಿರುತ್ತದೆ. ದಿನಕ್ಕೆ 20 ಸಾವಿರ ಆಡುಗಳ ಪ್ರಾಣ ಹರಣ. ಅದೆಷ್ಟು ರಕ್ತ ಇಲ್ಲಿ ಹರಿದು ಮಡುವಾಗಿ ನಿಂತಿರಬಹುದು. ಲೆಕ್ಕಕ್ಕೆ ಸಿಗದ ಮಾತಿದು.
ಆದರೂ ಇಲ್ಲಿ ಒಂದೇ ಒಂದು ನೊಣ ಇಲ್ಲ. ರಕ್ತದ ವಾಸನೆ ಹಿಡಿದು ದಾಳಿ ಇಡಬೇಕಾಗಿದ್ದ ನೊಣಗಳಿಗೆ ಅಸಲು ಇಲ್ಲಿ ಪ್ರವೇಶವೇ ಇಲ್ಲ. ಇದೇ ಈ ಬಾರಿಯ ನಮ್ಮ ನಂಬಿಕೆ ಅಪನಂಬಿಕೆ ಪಯಣಗಳ ಕಥಾ ವಸ್ತು.
ಇದು ಸಾತ್ಪುರಾ ಬೆಟ್ಟಗಳಡಿಯಲ್ಲಿ ಬರುವ ಒಂದು ಕುಗ್ರಾಮ. ಹೆಸರು ಇಲ್ಲದ ಊರು. ಮಧ್ಯ ಪ್ರದೇಶದಿಂದ ಖಾಂಡ್ವಾದಿಂದ 55 ಕೀ. ಮೀ ದೂರದಲ್ಲಿ ಇರುವ ಈ ಊರು ಒಂದು ಬುಡಕಟ್ಟು ಜನರಿಗೆ ಸೇರಿದ ಊರು.
ವಸಂತ ಪಂಚಮಿಯಿಂದ ಪೂರ್ಣಿಮೆಯವರೆಗೆ ನಡೆಯುವ ಹತ್ತು ದಿನಗಳ ಜಾತ್ರೆಗೆ ಶಿವಬಾಬಾನ ಜಾತ್ರೆ ಎಂದು ಹೆಸರು. ಇದು ಸಾಮಾನ್ಯ ಜಾತ್ರೆಯಂತಾಗಿದ್ದರೆ ಸರಿ ಎನ್ನಬಹುದಿತ್ತು. ಆದರೆ ಇಲ್ಲೇನೊ ವಿಶೇಷ ಇದೆ.
|