ಈ ಬಾರಿಯ ನಮ್ಮ ನಂಬಿಕೆ ಮೂಢನಂಬಿಕೆಗಳ ಪಯಣದಲ್ಲಿ ಈ ಬಾರಿ ನಾವು ಪರಿಚಯಿಸುತ್ತಿರುವುದು ಬಾಲಾ ಪೀರ್ ಬಾಬಾನ ಕಥೆಯನ್ನು. ಬಾಲಾ ಪೀರ್ ಬಾಬಾನ ಬಳಿ ಹರಕೆ ಹೊತ್ತಲ್ಲಿ ಸರಿಯಾದ ಸಮಯದಲ್ಲಿ ಇಷ್ಟಾರ್ಥ ಸಿದ್ಧಿಸುತ್ತದೆ.
ಸಮಯದ ಮಾಲಿಕನಾಗಿರುವ ಬಾಬಾನಿಗೆ ಇಷ್ಟಾರ್ಥ ಸಿದ್ಧಿಸಿದ ನಂತರ ಕಾಣಿಕೆಯಾಗಿ ನೀಡುವುದು ಪ್ರತಿಕ್ಷಣವೂ ನಮಗೆ ಸಮಯ ತೋರಿಸುವ ಗಡಿಯಾರುಗಳನ್ನೇ ಎಂದರೆ ನಂಬುತ್ತಿರಾ ? ನಂಬಲೇ ಬೇಕು ಈ ರೀತಿ ಇಷ್ಟಾರ್ಥ ಸಿದ್ಧಿಸಿದವರು ಬಾಬಾನಿಗೆ ಕಾಣಿಕೆ ರೂಪದಲ್ಲಿ ಗಡಿಯಾರ ನೀಡುತ್ತಾರೆ ಎಂದು ಕೇಳಿದ ನಂತರ ನಾವು ಹೋರಟಿದ್ದು ಬಾಲಾ ಪೀರ್ನ ದರ್ಗಾ ಇರುವ ನಂದ್ಸೇರಿ ಹಳ್ಳಿಗೆ.ನಂದ್ಸೇರಿ ಇರುವುದು ಮುಂಬೈ- ಅಹ್ಮದಾಬಾದ್ ರಾಷ್ಟ್ರೀಯ ಹೆದ್ದಾರಿ ನಂ 8ಕ್ಕೆ ಹೊಂದಿಕೊಂಡಂತೆ ಇದೆ. ನಾವು ನಂದ್ಸೇರಿಯ ದರ್ಗಾ ಮುಟ್ಟಿದ ನಂತರ ನಾವು ಕಂಡಿದ್ದು ಕೈಯಲ್ಲಿ ಗಡಿಯಾರ. ವಾಚುಗಳನ್ನು ಹಿಡಿದುಕೊಂಡು ಬರುತ್ತಿರುವ ಭಕ್ತರ ಸಾಲುಗಳನ್ನು. ಬಾಬಾ ಅವರ ಇಷ್ಟಾರ್ಥಗಳನ್ನು ಈಡೇರಿಸಿರುವುದರಿಂದ ವಾಚುಗಳನ್ನು ಕಾಣಿಕೆ ರೂಪದಲ್ಲಿ ಸಲ್ಲಿಸಲು ಬರುತ್ತಿದ್ದಾರೆ ಎಂಬುದು ನಂತರ ತಿಳಿಯಿತು.
ವಿಚಿತ್ರ ಎಂದರೆ ಈ ಕ್ಷೇತ್ರದ ಮೇಲ್ವಿಚಾರಣೆ ನೋಡಿಕೊಳ್ಳುತ್ತಿರುವುದು ಹಿಂದೂ ಕುಟುಂಬ ಆದರೂ ಮುಸ್ಲೀಂ ಭಕ್ತಾದಿಗಳಿಗೆ ಕೊರತೆ ಇಲ್ಲ. ಅದರಂತೆ ಹಿಂದುಗಳು ಬಾಲಾ ಪೀರ್ ಬಾಬಾನಲ್ಲಿ ಬಂದು ಬೇಡಿಕೊಳ್ಳುತ್ತಾರೆ. ರಾಷ್ಟ್ರೀಯ ಹೆದ್ದಾರಿ ಬಳಿ ಇರುವುದರಿಂದ ಇಲ್ಲಿಗೆ ಟ್ರಕ್ ಡ್ರೈವರುಗಳು ಬರುವುದು ವಾಡಿಕೆ.
ಕಾಣಿಕೆಯಾಗಿ ಬಂದ ಗಡಿಯಾರ ಮತ್ತು ವಾಚುಗಳನ್ನು ಶಾಲೆ ಮತ್ತು ಮದುವೆ ಸಮಾರಂಭಗಳಲ್ಲಿ ವಿತರಿಸುತ್ತೇವೆ ಈ ಮೂಲಕವಾದರೂ ಅವರಿಗೆ ಬಾಬಾನ ಆಶೀರ್ವಾದ ದೊರೆಯುತ್ತದೆ ಎಂದು ಕ್ಷೇತ್ರದ ಮೇಲ್ವಿಚಾರಣೆ ನೋಡಿಕೊಳ್ಳುವ ಕುಟುಂಬದ ಲತಾ ಬಾಯಿ ಹೇಳುತ್ತಾಳೆ. ಜನರು ಕನಿಷ್ಠ ಈ ಮೂಲಕವಾದರೂ ಸಮಯ ಪರಿಪಾಲನೆ ಮಾಡುತ್ತಿರುವುದು ಸಂತಸ ತರುವ ವಿಚಾರವೇ. ಆದರೆ ಬಾಬಾನಲ್ಲಿ ಹರಕೆ ಹೊತ್ತು ಕೊಳ್ಳವುದು ಮತ್ತು ಇಷ್ಟಾರ್ಥ ಸಿದ್ಧಿಸಿದ ನಂತರ ಗಡಿಯಾರ ಮತ್ತು ವಾಚುಗಳನ್ನು ನೀಡಿಬಿಟ್ಟರೆ ಸಮಯ ಪರಿಪಾಲನೆ ಮಾಡಿದಂತಾಗುತ್ತದೆಯೇ ನೀವೇ ಹೇಳಿ?
|