ಈ ಬಾರಿಯೂ ನಾವು ಮಧ್ಯಪ್ರದೇಶದ ಮಾಳ್ವಾ ಪ್ರದೇಶದಲ್ಲಿನ ಒಂದು ವಿಚಿತ್ರ ಸಂಪ್ರದಾಯವನ್ನು ಪರಿಚಯಿಸುತ್ತಿದ್ದೇವೆ. ಸಾಮಾನ್ಯವಾಗಿ ದೇಶದ ಎಲ್ಲ ಸ್ಥಳಗಳಲ್ಲಿ ಕೆಂಡ ಹಾಯುವ ಪದ್ಧತಿ ಇದೆ. ಹೋಳಿ ಹುಣ್ಣಿಮೆಯ ಮರುದಿನ ಧುಲಂಡಿ ಎಂದು ಹೇಳಲಾಗುವ ದಿನದಂದು ಮಹಿಳೆಯರು ಮೊದಲು ಆಲದ ಮರವನ್ನು ಮತ್ತು ಗಲ್ ದೇವರನ್ನು ಪೂಜಿಸಿ ತಮ್ಮ ಇಷ್ಟಾರ್ಥ ಸಿದ್ದಿಸುವಂತೆ ಕೇಳಿಕೊಳ್ಳುತ್ತಾರೆ.
ಮಾಳ್ವಾ ಪ್ರದೇಶದಲ್ಲಿ ಹೋಳಿಯ ಸಂದರ್ಭದಲ್ಲಿ ನಡೆಯುವ ಈ ಕೆಂಡ ನಡಿಗೆ ಸಂಪ್ರದಾಯದ ವೈಶಿಷ್ಟ್ಯ ಎಂದರೆ ಕೇವಲ ಮಹಿಳೆಯರು ಮಾತ್ರ ಇಷ್ಟಾರ್ಥ ಸಿದ್ದಿಗೆ ಕೆಂಡದ ಮೇಲೆ ನಡೆಯುತ್ತಾರೆ. ಮಹಿಳೆಯರ ಕೆಂಡದ ನಡಿಗೆಗೆ ಪೌರಾಣಿಕ ಹಿನ್ನೆಲೆಯನ್ನು ಜೋಡಿಸಲಾಗಿದೆ. ದಕ್ಷ ಬ್ರಹ್ಮನಿಂದ ಅವಮಾನಿತಳಾದ ಗಿರಿಜೆ ಯಜ್ಞಕುಂಡಕ್ಕೆ ಹಾರಿ ಆತ್ಮಾರ್ಪಣೆ ಮಾಡಿದ ಕಥೆಯನ್ನು ಇಲ್ಲಿ ನಡೆಯುವ ಈ ಸಂಪ್ರದಾಯಕ್ಕೆ ಸಂಬಂಧ ಕಲ್ಪಿಸಲಾಗಿದೆ. ಈ ಕೆಂಡ ನಡಿಗೆ ಸಂಪ್ರದಾಯವನ್ನು "ಚೂಲ್" ಎಂದು ಇಲ್ಲಿನವರು ಕರೆಯುತ್ತಾರೆ.
ಚೂಲ್ನಲ್ಲಿ ನಡೆಯುವ ಹೆಣ್ಣು ಮಕ್ಕಳು ತಮಗಾಗಿಯೋ ಇಲ್ಲವೇ ತಮ್ಮ ಮನೆಯವರ ಕಲ್ಯಾಣಕ್ಕಾಗಿಯೋ ಬೇಡಿಕೊಂಡಿರುತ್ತಾರೆ. ಹಾಗೆ ಬೇಡಿಕೊಂಡ ನಂತರ ಮತ್ತು ಇಷ್ಟಾರ್ಥ ಸಿದ್ಧಿಸಿದ ಮೇಲೆ ಕನಿಷ್ಠ ಐದು ವರ್ಷಗಳ ಕಾಲ ಚೂಲ್ ಸಂಪ್ರದಾಯವನ್ನು ಪಾಲಿಸಬೇಕಾಗುತ್ತದೆ. ನಾಲ್ಕು ಅಡಿ ಉದ್ದ ಮತ್ತು ಒಂದು ಅಡಿ ಆಳವಾದ ಕೆಂಡದ ಹೊಂಡವನ್ನು ನಿರ್ಮಾಣ ಮಾಡಲಾಗುತ್ತದೆ. ಹೀಗೆ ನಿರ್ಮಾಣ ಮಾಡಿದ ಕೆಂಡದ ಹೊಂಡ ಧಗ ಧಗ ಉರಿಯುವಂತೆ ಮಾಡುವುದಕ್ಕೆ ಮಣಗಟ್ಟಲೇ ತುಪ್ಪ ಸುರಿಯಲಾಗುತ್ತದೆ.
ಮೊದಲನೆ ಬಾರಿ ಚೂಲ್ನಲ್ಲಿ ಕೆಂಡ ಹಾಯತ್ತಿರುವ ಸೋನಾ ಎನ್ನುವ ಹೆಣ್ಣು ಮಗಳು, ತನ್ನ ಮದುವೆ ಮತ್ತು ಹಿರಿಯ ಸಹೋದರನ ಜೀವನ ನೆಲೆ ಕಾಣಲಿ ಎಂದು ಬೇಡಿಕೊಂಡಿದ್ದಳಂತೆ. ಅದರ ಪ್ರಕಾರ ಅವಳಿಗೆ ಮದುವೆಯಾಗಿದೆ ಮತ್ತು ಅಣ್ಣನ ಜೀವನ ಸರಿಯಾಗಿ ನಡೆದುಕೊಂಡು ಹೋಗುತ್ತಿದೆ. ಅಲ್ಲದೇ ಅವನಿಗೂ ಕೂಡ ಒಂದು ಮಗುವಾಗಿದೆ. ಹೀಗಾಗಿ ಹರಕೆ ತೀರಿಸಲು ಬಂದಿದ್ದೇನೆ ಎಂದು ನಮ್ಮೊಂದಿಗೆ ಹೇಳಿದಳು. ಶಾಂತಿ ಬಾಯಿ ಎನ್ನುವ ಮಹಿಳೆ ಕಳೆದ ಮೂರು ವರ್ಷಗಳಿಂದ ಚೂಲ್ ದಾಟುತ್ತಿದ್ದಾಳೆ. ಇಲ್ಲಿಯವರೆಗೆ ಒಂದೇ ಬಾರಿಯೂ ಅವಳಿಗೆ ನೋವು ಆಗಿಲ್ಲವಂತೆ ಎಂದು ಹೇಳುತ್ತಾಳೆ.
ಹರಕೆ ತೀರಿಸುವ ಮಹಿಳೆಯರ ಮೈಯಲ್ಲಿ ಗಿರಿಜೆಯ ಆವಾಹನೆಯಾಗುತ್ತದೆ ಅಂತೆ. ಆವಾಹನೆಯಾಗುತ್ತದೋ ಇಲ್ಲವೋ ಗೊತ್ತಿಲ್ಲ, ಆದರೆ ನಿಮ್ಮ ಅಭಿಪ್ರಾಯಗಳಿಗೆ ನಮ್ಮ ಆಹ್ವಾನವಂತೂ ಇದ್ದೇ ಇದೆ ಈ ನಂಬಿಕೆ, ಮೂಢನಂಬಿಕೆಗಳ ಪಯಣದಲ್ಲಿ...
|