ಭಾರತ ಎಂದರೆ ಅದು ವಿಶಿಷ್ಟ ಸಂಪ್ರದಾಯಗಳ ನೆಲೆವಿಡು. ಇಲ್ಲಿನವರ ಎಲ್ಲ ಜೀವನದ ಸುಖ ದುಃಖಗಳು ಧರ್ಮ ಮತ್ತು ಧಾರ್ಮಿಕ ಆಚರಣೆಯೊಂದಿಗೆ ಸಮ್ಮಿಳಿತವಾಗಿವೆ. ಈ ಬಾರಿಯ ನಂಬಿಕೆ, ಮೂಢನಂಬಿಕೆಗಳ ಕಥಾನಕದಲ್ಲಿ ಮಧ್ಯಪ್ರದೇಶದ ಪಂಜಾಪುರ್ ಬಳಿ ಇರುವ ಬುಡಕಟ್ಟು ಜನಾಂಗ ಆಚರಿಸುವ ಗಂಗೌರ್ ಹಬ್ಬದ ಕುರಿತು ಮಾಹಿತಿ ನೀಡುತ್ತಿದ್ದೇವೆ. ಇದೊಂದು ರೀತಿಯಲ್ಲಿ ವಿಶಿಷ್ಟ ಆಚರಣೆ. ವರ್ಷಕ್ಕೊಂದು ಬಾರಿ ನಡೆಯುವ ಈ ಜಾತ್ರೆಯಲ್ಲಿ ಗಂಡಸರು ತಮ್ಮ ಪತ್ನಿಯರಿಂದ ಹೊಡೆತ ತಿನ್ನುತ್ತಾರೆ ಹೇಗಿದೆ ಕಥೆ....
ಗಂಗೌರ್ ಹಬ್ಬ ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸಿಮೀತವಾಗಿಲ್ಲ. ಇಲ್ಲಿ ನಗು ಇದೆ. ಸಿಟ್ಟು ತೀರಿಸಿಕೊಳ್ಳಲು ಹೆಂಗಸರಿಗೆ ಒಂದು ಅಪೂರ್ವ ಅವಕಾಶವೂ ಇದೆ. ಆಚರಣೆಯ ಪ್ರಕಾರ ಒಂದು ದೊಡ್ಡ ಕಂಬಕ್ಕೆ ಬೆಲ್ಲ ತುಂಬಿದ ಚೀಲವನ್ನು ಕಟ್ಟಲಾಗುತ್ತದೆ. ಈ ಕಂಬದ ಸುತ್ತ ಕೈಯಲ್ಲಿ ಮರದ ರೆಂಬೆ ಹಿಡಿದುಕೊಂಡ ಮಹಿಳಾ ಮಣಿಗಳು ನಿಂತಿರುತ್ತಾರೆ. ಈಗ ಏನಪ್ಪಾ ಅಂದರೆ. ಗಂಡಸರು ಕಂಬಕ್ಕೆ ಕಟ್ಟಿದ ಬೆಲ್ಲದ ಚೀಲ ಬಿಡಿಸಿಕೊಂಡು ಬರಬೇಕು. ಅದು ಅಷ್ಟು ಸುಲಭವೂ ಅಲ್ಲ ಏಕೆಂದರೆ ಕೈಯಲ್ಲಿ ಕಟ್ಟಿಗೆ ಹಿಡಿದುಕೊಂಡು ನಿಂತ ಮಹಿಳಾ ಮಣಿಗಳು ಬೆಲ್ಲದ ಚೀಲ ಕಿತ್ತುಕೊಳ್ಳುವ ಗಂಡಸರನ್ನು ಚೆನ್ನಾಗಿ ಹಿಡಿದು ಬಾರಿಸುತ್ತಾರೆ. ಬೆಲ್ಲದ ಚೀಲ ಕಿತ್ತುಕೊಳ್ಳಲು ಗಂಡಸರಿಗೆ ಒಟ್ಟು ಏಳು ಅವಕಾಶ ನೀಡಲಾಗುತ್ತದೆ. ಇದು ಸಪ್ತಪದಿಯನ್ನು ನೆನಪಿಗೆ ತರುತ್ತದೆ. ಬೆಲ್ಲದ ಚೀಲ ಕಿತ್ತುಕೊಳ್ಳುವ ಭರದಲ್ಲಿ ಗಂಡಸರಿಗೆ ಚೆನ್ನಾಗಿ ಏಟುಗಳು ಬಿಳುತ್ತವೆ. ಈ ಏಟಿನಿಂದ ತಪ್ಪಿಸಿಕೊಳ್ಳಲು ಗಂಡಸರು ಅಡ್ಡಲಾಗಿ ಕೋಲು ಹಿಡಿಯಬಹುದು. ಆದರೆ ತಿರುಗಿ ಹೊಡೆಯುವ ಹಾಗಿಲ್ಲ. ಕೊನೆಗೂ ಗಂಡಸರು ಕಂಬ ಕಿತ್ತು ಬೆಲ್ಲದ ಚೀಲ ತಮ್ಮದಾಗಿಸಿಕೊಳ್ಳುತ್ತಾರೆ. ನಂತರ ನಗೆ ಕುಣಿತ ಮುಂದುವರಿಯುತ್ತದೆ. ಏಟಿನಾಟ ಮುಗಿದ ನಂತರ ದೇವಿಯ ಮೂರ್ತಿಯು ಪ್ರತಿಯೊಬ್ಬರ ಮನೆಗೂ ಹೋಗುತ್ತದೆ. ಗೋದಿ ಭರಾಯಿ ಎಂದು ಹೇಳುವ ಪುತ್ರಕಾಮೇಷ್ಟಿ ಪ್ರಾರ್ಥನೆಯನ್ನು ಆಯಾ ಮನೆಗಳವರು ಮಾಡುತ್ತಾರೆ. ಊರಿನ ಹಿರಿಯರ ಪ್ರಕಾರ ವರ್ಷವೆಲ್ಲ ಗಂಡಂದಿರಿಂದ ಬೈಸಿ ಬಡಿಸಿಕೊಂಡ ಹೆಂಗಸರು ತಮ್ಮ ಸಿಟ್ಟು ವ್ಯಕ್ತಪಡಿಸಲು ಅವಕಾಶವಾಗಿ ಬಳಸಿಕೊಳ್ಳುತ್ತಾರೆ.
ಅಂತಿಮವಾಗಿ ತಮ್ಮ ಗಂಡರ ಕಲ್ಯಾಣಕ್ಕೆ ಮತ್ತು ತಮ್ಮ ಸೌಭಾಗ್ಯದ ರಕ್ಷಣೆಗೆ ಮಹಿಳೆಯರು ಗಂಗೌರ್ ಪೂಜೆಯನ್ನು ಮಾಡುತ್ತಾರೆ. ಈ ಜಾತ್ರೆಯ ಸಂದರ್ಭದಲ್ಲಿ ಸುತ್ತಲಿನ ಗ್ರಾಮದವರು ಬರುತ್ತಾರೆ. ಈ ರೀತಿಯ ಸಂಪ್ರದಾಯವು ದೈವಿ ಸ್ವರೂಪಿ ಎಂದು ಹೇಳುವ ಮಹಿಳೆಯನ್ನು ಪುರುಷರು ಶೋಷಿಸಬಾರದು ಎಂದು ಹೇಳುತ್ತದೆ.
|