ಭಾರತವು ವಿಭಿನ್ನ ನಂಬಿಕೆಗಳು, ಆಚರಣೆಗಳ ನೆಲೆವೀಡು. ಇಲ್ಲಿ ನೆಲೆಸಿದ ಸಾಧು ಸಂತರು, ಮಹಾನ್ ಪುರುಷರು ತಮ್ಮದೇ ವೈವಿಧ್ಯಮಯ ಸರಳ ಜೀವನ ಶೈಲಿಯಿಂದ, ಮಹಾನ್ ಸಾಧನೆಗಳಿಂದ, ಪವಾಡಗಳಿಂದ ಜನಮಾನಸದಲ್ಲಿ ಸ್ಥಾಯಿಯಾಗಿ ವಿರಾಜಮಾನರಾಗಿದ್ದಾರೆ. ಅಂತಹ ಪುಣ್ಯ ಪುರುಷರ ಸಾಲಿನ ಅಗ್ರಗಣ್ಯರಲ್ಲೊಬ್ಬರು ಶ್ರೀ ಶಿರಡಿ ಸಾಯಿ ಬಾಬಾ.
ಗೋದಾವರಿ ತಟದ ಅಹಮದ್ ನಗರವು ಹಲವಾರು ಪುಣ್ಯ ಪುರುಷರಿಗೆ ಆಶ್ರಯಸ್ಥಾನವಾಗಿ ಪುಣ್ಯ ಸಂಪಾದಿಸಿದೆ. ಸಾಧು ಸಂತರು ಈ ಪ್ರದೇಶದಲ್ಲಿ ಅವತಾರವೆತ್ತಿ ಈ ಸ್ಥಳವನ್ನು ಪಾವನವಾಗಿಸಿದ್ದಾರೆ. ಅಹಮದ್ ನಗರ ಜಿಲ್ಲೆಯ ಕೋಪರ್ಗಾಂವ್ ತಾಲೂಕಿನಲ್ಲಿದೆ ಶಿರಡಿ. ಗೋದಾವರಿ ನದಿ ದಾಟಿದ ತಕ್ಷಣವೇ ಮಾರ್ಗವು ನಮ್ಮನ್ನು ಶಿರಡಿ ಕ್ಷೇತ್ರಕ್ಕೆ ಕರೆದೊಯ್ಯುತ್ತದೆ. ಎಂಟು ಮೈಲು ಸಾಗಿದರೆ ನಾವು ನೀಮ್ಗಾಂವ್ ತಲುಪುತ್ತೇವೆ. ಅಲ್ಲಿಂದ ಶಿರಡಿಯ ವೈಭವವನ್ನು ಕಣ್ಣಾರೆ ಕಾಣಬಹುದಾಗಿದೆ. ಕೃಷ್ಣಾ ನದಿ ತಟದಲ್ಲಿ ಶಿರಡಿಯಂತೆಯೇ ಗಾಣಗಾಪುರ, ನರಸಿಂಹವಾಡಿ ಮತ್ತು ಔದುಂಬರ ಮೊದಲಾದ ಇತರ ತೀರ್ಥ ಕ್ಷೇತ್ರಗಳೂ ಇವೆ.
ದಾಮಾಜಿಯವರು ಮಂಗಳವೇಡಾವನ್ನು, ಸಮರ್ಥ ರಾಮದಾಸರು ಸಜ್ಜನಗಢವನ್ನು, ದತ್ತಾವತಾರ ಶ್ರೀ ನರಸಿಂಹ ಸರಸ್ವತಿಯವರು ವಾಡಿ ಕ್ಷೇತ್ರವನ್ನು ಯಾವ ರೀತಿಯಲ್ಲಿ ಪವಿತ್ರವಾಗಿಸಿದ್ದಾರೋ, ಅದೇ ರೀತಿ ಶಿರಡಿಯು ಶ್ರೀ ಸಾಯಿಬಾಬಾ ಅವರಿಂದ ಪಾವನವಾಗಿದೆ.
ಶ್ರೀ ಸಾಯಿಬಾಬಾ ಅವರ ಜನ್ಮತಿಥಿ, ಜನ್ಮಸ್ಥಾನ ಮತ್ತು ಅವರ ಹೆತ್ತವರ ಬಗ್ಗೆ ಯಾರಿಗೂ ತಿಳಿದಿಲ್ಲ. ಈ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ. ಬಾಬಾರಿಂದ ಮತ್ತು ಅವರ ಸಮೀಪವರ್ತಿಗಳಲ್ಲಿ ಈ ಕುರಿತು ಕೇಳಲಾಗಿತ್ತಾದರೂ, ಯಾವುದೇ ಫಲಪ್ರದ ಉತ್ತರ ದೊರೆತಿರಲಿಲ್ಲ. ಅದೇ ರೀತಿ ಸಾಯಿಬಾಬಾರನ್ನು ಸಂತ ಕಬೀರರ ಅವತಾರ ಎಂದೂ ಹೇಳುವವರಿದ್ದಾರೆ.
ಶ್ರೀ ಸಾಯಿಬಾಬಾ ಅವರ ಏಕೈಕ ಲಭ್ಯ ಜೀವನ ಚರಿತ್ರೆ "ಶ್ರೀ ಸಾಯಿ ಸತ್ಚರಿತೆ"ಯನ್ನು 1914ರಲ್ಲಿ ಶ್ರೀ ಅನ್ನಾ ಸಾಹೇಬ್ ಧಾಬೋಲ್ಕರ್ ಎಂಬವರು ಬರಹರೂಪಕ್ಕಿಳಿಸಿದ್ದರು.
ಒಂದು ನಂಬಿಕೆಯ ಪ್ರಕಾರ, ಮಹಾರಾಷ್ಟ್ರದ ಪರ್ಭನಿ ಜಿಲ್ಲೆಯ ಪಾಥರಿ ಎಂಬ ಗ್ರಾಮದಲ್ಲಿ ಸಾಯಿಬಾಬಾ ಅವರ ಜನನವು 1835ರಲ್ಲಿ ಆಯಿತು. (ಶಿರಡಿ ಸಾಯಿಬಾಬಾ ಅವರ ಜನನವು ಪಾಥರಿ ಗ್ರಾಮದಲ್ಲಿ 1830ರ ಡಿಸೆಂಬರ್ 27ರಂದು ಆಗಿತ್ತು ಎಂದು ಸತ್ಯ ಸಾಯಿಬಾಬಾ ಅವರು ಹೇಳಿದ್ದಾರೆ.)
1835ರಿಂದ 1846ರವರೆಗಿನ 12 ವರ್ಷ ಪೂರ್ತಿ ಸಾಯಿಬಾಬಾ ಅವರು ತಮ್ಮ ಮೊದಲ ಗುರು ರೋಶನ್ಷಾ ಫಕೀರರ ನಿವಾಸದಲ್ಲೇ ಇದ್ದರು ಎಂದು ಹೇಳಲಾಗುತ್ತಿದೆ. ತದನಂತರ 1854ರವರೆಗೆ ಬಾಬಾ ಅವರು ಬೇಂಕುಷ್ ಆಶ್ರಮದಲ್ಲಿದ್ದರು ಎನ್ನಲಾಗುತ್ತಿದೆ.
1858ರಿಂದ 1918ರ ಅಕ್ಟೋಬರ್ 15ರಂದು ದೇಹತ್ಯಾಗ ಮಾಡುವವರೆಗೂ ಬಾಬಾ ಅವರು ಶಿರಡಿಯಲ್ಲಿ ನೆಲೆನಿಂತು ತಮ್ಮ ಲೀಲೆಗಳಿಂದ ಭಗವದ್ಭಕ್ತರನ್ನು ಹರಸುತ್ತಿದ್ದರು.
ದೇವರಿದ್ದಾನೆ ಎಂದು ಜನತೆಗೆ ಮನವರಿಕೆ ಮಾಡುವ ನಿಟ್ಟಿನಲ್ಲಿ ಬಾಬಾ ಅವರು ಹಲವಾರು ಪವಾಡಗಳನ್ನು ಮಾಡಿದರು. ರೋಗ ಶಮನಗೊಳಿಸಿದರು. ತಮ್ಮ ಭಕ್ತರಿಗೆ ನೈತಿಕ ಆತ್ಮಬಲ ಮತ್ತು ಭೌತಿಕ ಬಲವನ್ನು ಒದಗಿಸಿದರು. ಎಲ್ಲಾ ಸಮುದಾಯಗಳಲ್ಲಿ ಏಕತೆ ಮತ್ತು ಸೌಹಾರ್ದತೆ ಮೂಡಿಸಲು ಶ್ರಮಿಸಿದರು. ದೇವರೊಬ್ಬನೇ, ನಾಮ ಹಲವು ಎಂಬುದನ್ನ ಜನರಿಗೆ ಮನವರಿಕೆ ಮಾಡಿಸಲು ಪ್ರಯತ್ನಿಸಿದರು. ನಿಮ್ಮದೇ ಧರ್ಮ ಅನುಸರಿಸಿ, ಸತ್ಯ ದರ್ಶನವಾಗುತ್ತದೆ ಎಂದು ಬೋಧಿಸಿದರು.
ಸಾಯಿಬಾಬಾ ಅವರ ಬೋಧನೆಗಳು, ಜೀವನ ಇಂದಿಗೂ ಪ್ರಸ್ತುತ. ಅವರ ಜೀವನಚರಿತ್ರೆ 'ಶ್ರೀ ಸಾಯಿ ಸತ್ಚರಿತೆ'ಯು ಹಲವಾರು ಭಾಷೆಗಳಿಗೆ ಅನುವಾದಗೊಂಡಿವೆ.
|