ಮುಖ್ಯ ಪುಟ > ಧರ್ಮ > ಹಿಂದೂಧರ್ಮ > ಹೋಳಿ > ಕೇಳಿ... ! ಇದು ಕೆಟ್ಟದ್ದನ್ನು ಸುಟ್ಟುಬಿಡುವ ಹೋಳಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಳಿ... ! ಇದು ಕೆಟ್ಟದ್ದನ್ನು ಸುಟ್ಟುಬಿಡುವ ಹೋಳಿ
ಅವಿನಾಶ್
WD
ಹೋಳಿ... ದಕ್ಷಿಣ ಭಾರತೀಯರಿಗೆ ಟಿವಿಯಲ್ಲಿ, ಸಿನಿಮಾದಲ್ಲಿ ನೋಡಿ ಗೊತ್ತು. ಆದರೆ ಇತ್ತೀಚೆಗೆ ಕಾಲ ಬದಲಾಗುತ್ತಿದ್ದಂತೆ, ಮತ್ತು ಪ್ರತಿ ಪರ್ವವೂ ಪರಿವರ್ತನೆಗೊಳ್ಳುತ್ತಿರುವಂತೆಯೇ, ಹೋಳಿ ಹಬ್ಬ ಕೂಡ ರಂಗು ರಂಗಿನಾಟವಾಗಿ ಮಾರ್ಪಟ್ಟು, ದಕ್ಷಿಣ ಭಾರತೀಯರನ್ನೂ ಸೆಳೆಯತೊಡಗಿದೆ. ಓಕುಳಿಯಾಡುವ ಮೋಜಿಗಾಗಿ ಮತ್ತು ಅದೊಂದು ರೀತಿಯ ಫ್ಯಾಶನ್ ಆಗಿ ಈ ಫಾಲ್ಗುಣದ ಶುಕ್ಲ ಪಕ್ಷದ ಹುಣ್ಣಿಮೆಯಂದು ಬರುವ ಹೋಳಿ ಹಬ್ಬದ ಸುಳಿಗಾಳಿಯು ಜಾತಿ-ಮತಭೇದವಿಲ್ಲದೆ ತೆಂಕಣದಲ್ಲೂ ಬೀಸತೊಡಗಿದೆ.

ಬೇರೆಯವರ ಮುಖಕ್ಕೆ ರಂಗು ಬಳಿಯುವುದು, ಬಣ್ಣದೋಕುಳಿ ಎರಚುವುದು ಇವುಗಳೆಲ್ಲಾ ಈ ಹೋಳಿ ಹಬ್ಬದ ಮೋಜಿನ ಕ್ಷಣಗಳು. ಮೋಜು ಮಾಡಲು, ಮನರಂಜನೆ ಪಡೆಯಲು ಕಾರಣ ಬೇಕೇ? ಹೀಗಾಗಿ ಹೋಳಿಯನ್ನು ಎಲ್ಲರೂ ಅಪ್ಪಿಕೊಂಡುಬಿಟ್ಟಿದ್ದಾರೆ, ಒಪ್ಪಿಕೊಂಡುಬಿಟ್ಟಿದ್ದಾರೆ.

ಈ ರೀತಿಯ ಸಂಸ್ಕೃತಿ ಪ್ರಸರಣೆಯಲ್ಲಿ ಉತ್ತರ ಭಾರತದಿಂದ ವಲಸೆ ಬಂದವರ ಕೊಡುಗೆಯೂ ಸಾಕಷ್ಟಿದೆ ಎಂಬುದು ಅತಿಶಯೋಕ್ತಿಯಲ್ಲ. ಜೊತೆಗೆ ಟಿವಿ, ಸಿನಿಮಾಗಳು ಕೂಡ ಹೋಳಿಯನ್ನು ಮೋಜಿನ ಹಬ್ಬವಾಗಿ ಬಿಂಬಿಸಿ ಜನಮಾನಸದಲ್ಲಿ ಆಸೆಯ ಚಿಗುರೊಡೆಸಿದೆ. ತತ್ಪರಿಣಾಮವಾಗಿ ಹೋಳಿ ಹಬ್ಬದಾಚರಣೆ, ಪಿಚಕಾರಿ ಮೂಲಕ ರಂಗು ಎರಚಾಡುವಿಕೆ, ಕೈಮೈಗಳಿಗೆ ಬಣ್ಣ ಮೆತ್ತುವುದು... ಅಟ್ಟಾಡಿಸಿಕೊಂಡು ಹೋಗಿ ಬಣ್ಣ ಹಚ್ಚಿಯೇಬಿಡುವುದು... ಇವೆಲ್ಲವೂ ನಮ್ಮ ನಾಡಿನ ಪಟ್ಟಣ ಪ್ರದೇಶಗಳಲ್ಲೂ ಸಾಮಾನ್ಯವಾಗಿಬಿಟ್ಟಿದೆ.

ಕಾಮದಹನ: ಇಷ್ಟೆಲ್ಲ ಮನರಂಜನೆ ನೀಡುವ ಹೋಳಿ ಹಬ್ಬದ ಹಿಂದೆ ಒಂದೆರಡು ಪೌರಾಣಿಕ ಕಥೆಗಳೂ ಇವೆ. ಅದರಲ್ಲಿ ಪ್ರಮುಖವಾದದ್ದು ಪುರಾಣದಲ್ಲಿ ಉಲ್ಲೇಖವಿರುವ ಕಾಮ ದಹನ. ತಾರಕಾಸುರನೆಂಬ ರಾಕ್ಷಸ ರಾಜನ ಉಪಟಳ ತಾಳದೆ, ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಆತನಿಂದಾಗಿ ಅನ್ಯಾಯ ಹೆಚ್ಚಾದಾಗ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಶಿವನು ಆ ಸಂದರ್ಭ ಭೋಗಸಮಾಧಿಯಲ್ಲಿದ್ದ ಕಾರಣ, ಪಾರ್ವತಿಯನ್ನು ಕೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ, ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.

ಹೋಲಿಕಾ ದಹನ: ಇನ್ನೊಂದು ಕಥೆ ನಾರದ ಪುರಾಣದಲ್ಲಿ ಬರುತ್ತದೆ. ತಾನೇ ದೇವರು ಎಂದು ಒಪ್ಪಿಕೊಳ್ಳದೆ ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಭಾವಿಸುವ ತನ್ನದೇ ಕರುಳ ಕುಡಿ ಪ್ರಹ್ಲಾದನನ್ನು ಕೊಲ್ಲಲು, ದೈತ್ಯರಾಜ ಹಿರಣ್ಯಕಶ್ಯಪು ನಾನಾ ವಿಧದ ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋಗುತ್ತಾನೆ. ಅಣ್ಣನ ಅನುಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸುತ್ತಾಳೆ. ಆಗ ವಸ್ತ್ರವು ಹಾರಿಹೋಗುತ್ತದೆ, ಹೋಳಿಕಾ ದಹನವಾಗುತ್ತದೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ.

ಸಂಪ್ರದಾಯ ವೈವಿಧ್ಯ: ರಂಗಿನಾಟ ಎಂದಾಗ, 'ಬೇಡ ಕೃಷ್ಣ ರಂಗಿನಾಟ, ಸೀರೆ ನೆನೆವುದು' ಎಂಬ ಹಾಡು ನೆನಪಿಗೆ ಬಾರದಿರಲು ಸಾಧ್ಯವೇ? ಗೋಪಿಕೆಯರೊಂದಿಗೆ ತುಂಟ ಕೃಷ್ಣನ ಚೆಲ್ಲಾಟಗಳು ಮನಃಪಟಲದಲ್ಲಿ ಸುಳಿಯದಿರುವುದು ಸಾಧ್ಯವೇ? ಹೌದು. ಅದಕ್ಕಾಗಿಯೇ ಇರಬೇಕು, ಗೋಪೀಲೋಲ ಮುರಳಿ ಕೃಷ್ಣ ತನ್ನ ಪುಟ್ಟ ಪುಟ್ಟ ಪಾದಗಳಿಂದ ಚುಟುಪುಟು ಅಂತ ಓಡಾಡಿದ್ದ ಮಥುರಾ ಮತ್ತು ಬೃಂದಾವನಗಳಲ್ಲಿನ ಹೋಳಿ ಹಬ್ಬವು ಜಗತ್ಪ್ರಸಿದ್ಧವಾಗಿದೆ. ನವನೀತಚೋರ ಶ್ರೀಕೃಷ್ಣನು ಗೋಪಿಕೆಯರಿಗೆ ಪಿಚಕಾರಿ ಮೂಲಕ ಓಕುಳಿ ಹಾರಿಸುತ್ತಾ, ರಂಗು ರಂಗಾಗಿಸುತ್ತಿದ್ದ ಮತ್ತು ಬೇಕೆಂದೇ ಆತನ ರಂಗಿನೆರಚಾಟಕ್ಕೆ ತುತ್ತಾಗಲು ಹವಣಿಸುತ್ತಿದ್ದ ಗೋಪಿಕೆಯರ ದೃಶ್ಯಗಳು ಕಣ್ಮುಂದೆ ಸುಳಿಯುತ್ತವೆ. ಮಧ್ಯೆಯೇ, ಶ್ರೀಕೃಷ್ಣನ ಜನ್ಮಸ್ಥಾನ ನಂದಗಾಂವ್ ಮತ್ತು ರಾಧೆಯ ಊರಾಗಿರುವ ಬರ್ಸನಾಯ್ ಎಂಬಲ್ಲಿ ಗಂಡಂದಿರಿಗೆ ಕೋಲಿನಿಂದ ಹೊಡೆಯುವ ಒಂದು ಸಂಪ್ರದಾಯವೂ ಇದೆಯಂತೆ!

ಕಾಮದಹನದ ಪ್ರತೀಕವಾಗಿ ಕಾಮ-ರತಿಯರನ್ನು ಐದು ದಿನಗಳ ಕಾಲ ಪ್ರತಿಷ್ಠಾಪಿಸಿ, ಹುಣ್ಣಿಮೆಯಂದು ದಹಿಸುವುದು ಸಂಪ್ರದಾಯ. ಮರುದಿನವೇ ಓಕುಳಿಯಾಟ. ಆದರೆ ಮತ್ತೆ ಕೆಲವು ಕಡೆಗಳಲ್ಲಿ ಹುಣ್ಣಿಮೆಯಂದೇ ಕಾಮ-ರತಿಯರನ್ನು ಪ್ರತಿಷ್ಠಾಪಿಸಿ, ಫಾಲ್ಗುಣ ಬಹುಳ ಚೌತಿಯಂದು ಸುಟ್ಟು, ಐದನೇ ದಿನ ರಂಗು ರಂಗಿನಾಟ ನಡೆಯುತ್ತದೆ. ಇದನ್ನು ರಂಗ ಪಂಚಮಿಯೆಂದೂ ಕರೆಯುತ್ತಾರೆ.

ಈ ಬಾರಿಯ ಹೋಳಿ ಹಬ್ಬಕ್ಕೆ ಮತ್ತೊಂದು ವಿಶೇಷ ಅಂಟಿಕೊಂಡಿದೆ. ಈದ್ ಮಿಲಾದ್ ಹಬ್ಬವೂ ಅದೇ ದಿನ ಬರುತ್ತಿದೆ. ಆದರೆ ಚತುರ್ದಶಿ ಮತ್ತು ಹುಣ್ಣಿಮೆಯ ಸಂಯೋಗದಲ್ಲಿಯೇ ಈ ಬಾರಿ ಅದರ ಹಬ್ಬದ ತಿಥಿ ಕಾಣಿಸಿಕೊಂಡಿರುವುದರಿಂದ ಉದಯಕಾಲದಲ್ಲಿ ಚತುರ್ದಶಿ ಇರುತ್ತದೆ, ಬಳಿಕವಷ್ಟೇ ಪೂರ್ಣಿಮೆ ಬರುತ್ತದೆ.

ಪಂಡಿತರ ಅನುಸಾರ, ಫಾಲ್ಗುಣ ಶುಕ್ಲ ಚತುರ್ದಶಿಯು ಈ ಬಾರಿ ಮಾರ್ಚ್ 10ರ ಬೆಳಿಗ್ಗೆ 10 ಗಂಟೆ ಆಸುಪಾಸಿನವರೆಗೆ ಇರುತ್ತದೆ, ಬಳಿಕ ಫಾಲ್ಗುಣ ಶುಕ್ಲ ಹುಣ್ಣಿಮೆ ಬರುತ್ತದೆ. ಈ ತಿಥಿಯು ಮಾರ್ಚ್ 11ರ ಬೆಳಿಗ್ಗೆ 8 ಗಂಟೆ ಸುಮಾರಿನ ವರೆಗೆ ಇರುತ್ತದೆ. ಇದು ಹೋಳಿ ಪೂಜಾವಿಧಿಗಳಿಗೆ ಪ್ರಶಸ್ತ.

ಹೋಳಿ ಸಂದರ್ಭ ಮೂಲತಃ ಅಕ್ಕಿಹಿಟ್ಟು ಮತ್ತು ಅರಿಶಿಣ ಮಿಶ್ರ ಮಾಡಿದ ಗುಲಾಲು, ಬಿದಿರಿನ ಪಿಚಕಾರಿ ಮೂಲಕ ಬಣ್ಣದ ಕೇಳಿ ನಡೆಯುತ್ತದೆ. ಈ ಬಣ್ಣ ಹಚ್ಚುವ ಆಟದ ಬಳಿಕ ಅಭ್ಯಂಜನ ಸ್ನಾನ ಮಾಡಿ ದೇವರನ್ನು ಅರ್ಚಿಸಿ ವಿಶೇಷ ಖಾದ್ಯಗಳನ್ನು ತಯಾರಿಸುತ್ತಾರೆ.

ರಾಜಕೀಯ ರಂಗು: ಜನರು ಧರ್ಮ ಭೇದ ಮರೆತು ಸಾಮರಸ್ಯದಿಂದ ಆಚರಿಸುತ್ತಿದ್ದ ಈ ಹಬ್ಬ ಇದೀಗ 'ಪಕ್ಷಭೇದ' ಮರೆತು ಆಚರಣೆಯಾಗತೊಡಗಿರುವುದು ಇತ್ತೀಚಿನ ವಿದ್ಯಮಾನ. ರಾಜಕೀಯ ಪಕ್ಷಗಳು ಕೂಡ ಈ ಹಬ್ಬಕ್ಕೆ ರಾಜಕೀಯ ರಂಗು ನೀಡುತ್ತಾ ಆಚರಣೆಯಲ್ಲಿ ತೊಡಗಿವೆ. ಸಾಮುದಾಯಿಕವಾಗಿ ಆಲೋಚಿಸಿದರೆ, ಜನನಾಯಕರು ಅನ್ನಿಸಿಕೊಂಡವರು ಜನರೊಂದಿಗೆ ಬೆರೆಯಲು ಇದು ಸತ್ಸಂಪ್ರದಾಯದ ವೇದಿಕೆ ಒದಗಿಸಿಕೊಡುತ್ತದೆಯಾದರೂ, ಇದರ ಹಿಂದೆ ಎಲ್ಲೋ ಸ್ವಾರ್ಥದ ವಾಸನೆ ಕಂಡುಬರದಿರುವುದಿಲ್ಲ.

ಈ ದಿನಗಳಲ್ಲಿ ಒಂದಲ್ಲ, ನೂರೊಂದು ಹಿರಣ್ಯಕಶ್ಯಪುಗಳು ನಮ್ಮ ಸುತ್ತ ಮುತ್ತ ಇದ್ದಾರೆ. ನಾವು ಸಂವಿಧಾನ, ಕಾನೂನು, ರಾಷ್ಟ್ರಕ್ಕಿಂತ ಮಾತ್ರವಲ್ಲ ನಮ್ಮನ್ನು ಆರಿಸಿ ಕಳುಹಿಸಿದ ಜನರಿಂದಲೂ ನಾವೇ ಮೇಲೆ, ಎಲ್ಲರೂ ನಮಗೆ ಅಧೀನರಾಗಿರಬೇಕು ಎಂದುಕೊಳ್ಳುತ್ತಿರುವವರಿದ್ದಾರೆ. ಇವರೆಲ್ಲರೂ ಜನತೆಯ ಏಕತೆ, ಸದ್ಭಾವನೆ, ಪರಸ್ಪರ ವಿಶ್ವಾಸ, ಪ್ರಜಾಪ್ರಭುತ್ವ ಮೌಲ್ಯಗಳಿಗೆ ಕಂಟಕರಾಗುತ್ತಿದ್ದಾರೆ. ತಂಗಿ ಹೋಲಿಕಾಳಂತಹ ಒಂದು ಮಾಧ್ಯಮದ ನೆರವಿನಿಂದ ಮುಗ್ಧರನ್ನು ಬಲಿತೆಗೆದುಕೊಳ್ಳುತ್ತಾ ಅಧಿಕಾರದಲ್ಲಿ ಮೆರೆಯುತ್ತಾರೆ. ಅಂಥ ಋಣಾತ್ಮಕ ಭಾವನೆಗಳ 'ಹೋಲಿಕಾ' ದಹನ ಮಾಡಬೇಕಿದೆ.

ಮೇಲೆ ಹೇಳಿದ ಎರಡೂ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿಕಾ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಇಂಥದ್ದೊಂದು ಅಮೂಲ್ಯ ಸಂದೇಶ ಸಾರುವ ಮತ್ತು ಆ ಮೂಲಕ ಕೆಡುಕಿಗೆ ಯಾವತ್ತೂ ಸೋಲು ಕಾದಿದೆ ಎಂಬ ಸಂದೇಶ ಸಾರುವ ಹೋಳಿ ಹಬ್ಬ ಯಾ ಕಾಮನ ಹಬ್ಬದ ಆಚರಣೆಯಲ್ಲಿ ಸದುದ್ದೇಶವಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಎಲ್ಲೆಲ್ಲೂ ರಂಗು, ಇದು ಹೋಳಿಯ ಗುಂಗು
ಹೋಳಿ...ಹೋಳಿ...ಬಣ್ಣದೋಕುಳಿ...