ಮಹಾಕಾಲ ದೇವರ ನಗರವಾದ ಉಜ್ಜಯನಿಯನ್ನು ಮಂದಿರಗಳ ನಗರವೆಂದು ಕರೆಯಲಾಗುತ್ತದೆ.ನಗರದ ಪ್ರತಿ ಬಡಾವಣೆಯಲ್ಲಿ ಸಾಮಾನ್ಯವಾಗಿ ಮಂದಿರಗಳನ್ನು ಕಾಣಬಹುದು.
ಆದರೆ ನಾಗಚಂದ್ರೇಶ್ವರ ಮಂದಿರ ತನ್ನ ವೈಶಿಷ್ಠತೆಗಾಗಿ ಹೆಸರುವಾಸಿಯಾಗಿ ಭಕ್ತ ಸಮೂಹವನ್ನು ತನ್ನತ್ತ ಸೆಳೆಯುತ್ತಿದೆ. ಮಹಾಕಾಳೇಶ್ವರದ ಮಂದಿರದ ತುತ್ತ ತುದಿಯಲ್ಲಿ ಮಂದಿರವನ್ನು ನಿರ್ಮಾಣ ಮಾಡಲಾಗಿದೆ.
ವರ್ಷಕೊಂದು ಬಾರಿ, ನಾಗರಪಂಚಮಿ ಹಬ್ಬದಂದು ಮಾತ್ರ ಮಂದಿರದ ಬಾಗಿಲನ್ನು ತೆರೆಯಲಾಗುತ್ತದೆ. ನಾಗರಪಂಚಮಿಯಂದು ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹಾವುಗಳ ರಾಜ ತಕ್ಷಕ ದೇವರನ್ನು ಪೂಜಿಸುತ್ತಾರೆ.
ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
ದೇಶದ ಎಲ್ಲೆಡೆಯಿಂದ ಭಕ್ತ ಸಮೂಹ ಮಂದಿರಕ್ಕೆ ಭೇಟಿ ನೀಡಿ ತಮ್ಮ ಪೂಜೆಯನ್ನು ಸಲ್ಲಿಸುತ್ತಾರೆ. ಸುಮಾರು ಒಂದರಿಂದ ಎರಡು ಲಕ್ಷ ಭಕ್ತರು ಒಂದು ದಿನದಲ್ಲಿ ತಕ್ಷಕನ ದರ್ಶನವನ್ನು ಪಡೆಯುತ್ತಾರೆ.
ಸರ್ಪರಾಜ ತಕ್ಷಕನ ತಪಸ್ಸಿಗೆ ಮೆಚ್ಚಿ ಅಮರತ್ವದ ಆಶಿರ್ವಾದ ನೀಡಿದನು ಅಂದಿನಿಂದ ತಕ್ಷಕನು ಶಿವನೊಂದಿಗೆ ಇದ್ದಾನೆ ಎಂದು ನಂಬಿಕೆ.ಮಂದಿರದ ಒಳಗಡೆ ಈಶ್ವರ ಪಾರ್ವತಿ ಮತ್ತು ಗಣೇಶ ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.
ಶಿವನ ಮೂರ್ತಿಯನ್ನು ಹಾವಿನ ಹಾಸಿಗೆಯ ಮೇಲೆ ಪ್ರತಿಷ್ಠಾಪಿಸಲಾಗಿದೆ. ಸರ್ಪದ ಮೇಲೆ ಕುಳಿತ ಏಕೈಕ ಮಂದಿರ ಇದು.
ಪೌರಾಣಿಕ ಹಿನ್ನಲೆ: ಪೌರಾಣಿಕ ಹಿನ್ನಲೆಯಿರುವ ತಕ್ಷಕನ ದರ್ಶನ ಪಡೆದಲ್ಲಿ ಎಲ್ಲ ರೀತಿಯ ಸರ್ಪದೋಷಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. 1050ರಲ್ಲಿ ಪರಮಾರ ವಂಶದ ರಾಜಾಭೋಜನು ದೇವಸ್ಥಾನದ ಜೀರ್ಣೋದ್ಧಾರ ಕೈಗೊಂಡಿದ್ದಾನೆ ಎಂದು ಇತಿಹಾಸದಿಂದ ತಿಳಿದುಬರುತ್ತದೆ.
ಅಂದರೆ ಮಂದಿರದ ಸ್ಥಾಪನೆ ರಾಜಾ ಭೋಜನ ಕಾಲಕ್ಕಿಂತ ಮೊದಲು ಆಗಿರಬೇಕು ಎಂದು ನಂಬಿಕೆ.
ಮತ್ತೆ 1732 ರಲ್ಲಿ ಮರಾಠಾ ಸಾಮ್ರಾಜ್ಯದ ಮಾಂಡಲಿಕ ರಾಣಾಜಿ ಸಿಂಧಿಯಾ, ಉಜ್ಜೈನಿಯ ಮಹಾಕಾಲ ಮಂದಿರದ ಜೀರ್ಣೋದ್ಧಾರದ ಜೊತೆಗೆ ತಕ್ಷಕ ಮಂದಿರಕ್ಕೆ ಕಾಯಕಲ್ಪ ನೀಡಿದನು ಎಂದು ಇತಿಹಾಸದಲ್ಲಿ ತಿಳಿಸಲಾಗಿದೆ.
|