ಪಾರ್ವತಿ ಪುತ್ರ ಗಣೇಶ, ಈ ಲೋಕದಲ್ಲಿ ಅತ್ಯಂತ ಹೆಚ್ಚು ಆರಾಧಿಸಲ್ಪಡುತ್ತಿರುವ ದೇವರು. ಅವನನ್ನು ವಿವಿಧ ರೂಪಗಳಲ್ಲಿ ವಿವಿಧ ರೀತಿಗಳಲ್ಲಿ ಆರಾಧಿಸುತ್ತಾರೆ ಭಕ್ತಜನ. ಮುಂಬಯಿಯ ಹೃದಯಭಾಗದಲ್ಲಿ ನೆಲೆಯಾಗಿರುವ ಸಿದ್ಧಿವಿನಾಯಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವೀ ದೇವರುಗಳಲ್ಲೊಬ್ಬನಾಗಿ ರಾರಾಜಿಸುತ್ತಿದ್ದಾನೆ.
ಈ ಕ್ಷೇತ್ರದಲ್ಲಿ ಏಕ ಶಿಲೆಯಿಂದ ಕಡೆಯಲಾಗಿರುವ ಸಿದ್ಧಿವಿನಾಯಕನ ಮೂರ್ತಿ 2'6'' (750 ಎಂಎಂ) ಎತ್ತರ ಹಾಗೂ 2 ' (600ಎಂಎಂ) ಅಗಲವಿದೆ. ಬಲಮುರಿ ಸೊಂಡಿಲು ಹೊಂದಿರುವುದರಿಂದ ಹೆಚ್ಚು ಕಾರಣಿಕವುಳ್ಳದ್ದು. ಆದರೆ ಸಿದ್ಧಿವಿನಾಯಕನ ಮೂರ್ತಿ ಅಪರೂಪದ ವಿನ್ಯಾಸ ಹೊಂದಿದೆ. ಮೇಲಿನ ಬಲ ಮತ್ತು ಎಡ ಕೈಗಳು ಅನುಕ್ರಮವಾಗಿ ಪದ್ಮ ಮತ್ತು ಅಂಕುಶವನ್ನು ಹೊಂದಿದೆ. ಕೆಳಗಿನ ಬಲ, ಎಡ ಕೈಗಳು ಅನುಕ್ರಮವಾಗಿ ಜಪಮಾಲೆ ಮತ್ತು ಮೋದಕ ತುಂಬಿದ ಪುಟ್ಟ ಬೋಗುಣಿಯನ್ನು ಹೊಂದಿವೆ.
ಯಜ್ಞೋಪವೀತ (ಜನಿವಾರ) ರೂಪದಲ್ಲಿ ಹಾವು ಸುತ್ತಿಕೊಂಡಿದೆ. ವಿಗ್ರಹದ ಹಣೆಯಲ್ಲೊಂದು ಕಣ್ಣು ಇದ್ದು, ಇದು ತ್ರಿನೇತ್ರ ಶಿವನ ಹಣೆಗಣ್ಣಿನಂತೆಯೇ ಗೋಚರಿಸುತ್ತದೆ. ಗಣೇಶ ವಿಗ್ರಹದ ಎರಡೂ ಪಾರ್ಶ್ವಗಳಲ್ಲಿ ಋದ್ಧಿ ಮತ್ತು ಸಿದ್ಧಿಯರ ಪ್ರತಿಮೆಗಳಿದ್ದು, ಗಣೇಶನ ಹಿಂದಿನಿಂದ ಇಣುಕುತ್ತಿರುವ ಮಾದರಿಯಲ್ಲಿವೆ. ಋದ್ಧಿ-ಸಿದ್ಧಿಯರು ಇರುವುದರಿಂದಾಗಿಯೇ ಈ ಕ್ಷೇತ್ರವು ಸಿದ್ಧಿವಿನಾಯಕ ಕ್ಷೇತ್ರವಾಗಿ ಮೆರೆಯುತ್ತಿದೆ.
ಬಲಮುರಿ ಗಣೇಶನ ವಿಗ್ರಹಗಳು ಅತ್ಯಂತ ಅಪರೂಪ. ತೀರಾ ಇತ್ತೀಚೆಗಷ್ಟೇ ಸಿದ್ಧಿವಿನಾಯಕ ಮಂದಿರದ ಪುನರ್ಪ್ರತಿಷ್ಠಾ ಕಾರ್ಯಗಳು ಪೂರ್ಣಗೊಂಡಿದ್ದು, ಈ ಮಂದಿರವನ್ನು 1801ರ ನವೆಂಬರ್ 19, ಗುರುವಾರ ಪ್ರತಿಷ್ಠಾಪಿಸಲಾಗಿತ್ತು.
ಹಿಂದೂ ಕ್ಯಾಲೆಂಡರ್ ಪ್ರಕಾರ ಅದು ಕಾರ್ತಿಕ ಶುದ್ಧ ಚತುರ್ದಶಿ, ಶಕೆ 1723, ದುರ್ಮುಖ ನಾಮ ಸಂವತ್ಸರ. ಇದರ ಗರ್ಭಗುಡಿ ಪ್ರದೇಶ 3.6x3.6 ಚದರ ಮೀಟರ್. 450 ಎಂಎಂ ದಪ್ಪದ ಇಟ್ಟಿಗೆ ಗೋಡೆ ಮತ್ತು ಹಳೆಯ ಕಾಲದ ಪುಟ್ಟ ಗೋಪುರ, ಅದರ ಮೇಲೊಂದು ಕಲಶ. ಪುಟ್ಟ ಗೋಪುರದ ಸುತ್ತ ಪುಟ್ಟಗೋಡೆ, ಗ್ರಿಲ್- ಇದು ಮಂದಿರದ ಪೂರ್ಣ ರೂಪ. ಮಂದಿರದ ನೆಲದ ಮಟ್ಟ ಮತ್ತು ರಸ್ತೆಯ ಮಟ್ಟ- ಎರಡೂ ಒಂದೇ.
ಸಿದ್ದಿ ವಿನಾಯಕ ಮಂದಿರದ ಫೋಟೊ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ
|