ದೀಪಸ್ತಂಭದ ಪಶ್ಚಿಮಕ್ಕೆ ಸರಸ್ವತಿ ಮಂಟಪ ಇದ್ದು, ಪ್ರತಿನಿತ್ಯ ದೇವಿಗೆ ಅಷ್ಟಾವಧಾನ ಸೇವೆ ಇಲ್ಲಿ ನಡೆಯುತ್ತದೆ. ಎಳೆಯ ಮಕ್ಕಳಿಗೆ ವಿದ್ಯಾರಂಭವನ್ನು ಇಲ್ಲೇ ಮಾಡುತ್ತಾರೆ. ಇನ್ನು ವಿಶೇಷವಾಗಿ ಸಂಗೀತ, ಭರತನಾಟ್ಯಗಳ ಪ್ರದರ್ಶನವನ್ನು ಇಲ್ಲಿ ಏರ್ಪಡಿಸುತ್ತಾರೆ. ದೇವಸ್ಥಾನದ ಎಡಭಾಗದ ರಸ್ತೆಯಲ್ಲಿ ಸಾಗಿದರೆ ಆನೆ ಬಾಗಿಲು, ಹೆಸರೇ ಹೇಳುವಂತೆ ಉತ್ಸವಗಳಲ್ಲಿ ಭಾಗವಹಿಸಲು ಆನೆಯನ್ನು ಈ ಬಾಗಿಲಿನಲ್ಲಿ ಕರೆ ತರುತ್ತಾರೆ. ಈಗ ದೇವಾಲಯದಲ್ಲಿ ಎರಡು ಆನೆಗಳಿವೆ. ಆನೆ ಬಾಗಿಲಿನ ಎತ್ತರದ ಮೆಟ್ಟಿಲಿನಲ್ಲಿ ನಿಂತು ಪೂರ್ವಕ್ಕೆ ನೋಡಿದರೆ ಗರ್ಭಗುಡಿಯ ಸುವರ್ಣ ಶಿಖರ, ಪೂರ್ವದಲ್ಲಿ ಗಗನಚುಂಬಿ ಹಚ್ಚಹಸಿರಿನ ಕುಟಚಾದ್ರಿ ಕಾಣಿಸುತ್ತದೆ. ದೇವಿಗೆ ಅಭಿಮುಖವಾಗಿರುವ ಚಿತ್ರಮೂಲ ಭಾಗದ ರಮಣೀಯ ದೃಶ್ಯವನ್ನು ಕಾಣಬಹುದು. ಪಶ್ಚಿಮದ ಹೆಬ್ಬಾಗಿಲಿನ ಉತ್ತರದಲ್ಲಿ ಶ್ರೀ ಆಂಜನೇಯನ ಮಾನವ ಗಾತ್ರದ ಶಿಲಾ ವಿಗ್ರಹ ಇದೆ. ವೀರಭದ್ರನ ಅಭಿಮುಖವಾಗಿ ವಾಯುವ್ಯದಲ್ಲಿ ಶ್ರೀ ವಿಷ್ಣುಮೂರ್ತಿ ಗುಡಿ. ಸುಮಾರು ಎರಡು ಅಡಿ ಎತ್ತರದ ಸುಂದರ ಶಿಲಾಮೂರ್ತಿ ವಿಜಯನಗರ ಶೈಲಿಯಲ್ಲಿದೆ.
ಉತ್ತರದ ಬಾಗಿಲಿನಿಂದ ಹೊರಬಂದರೆ ಶ್ರೀ ದೇವಿ ಪ್ರಸಾದ ನಿಲಯ, ಭೋಜನ ಶಾಲೆ ಇದೆ. ಪ್ರತಿದಿನ ಸಾವಿರಾರು ಭಕ್ತರಿಗೆ, ನೂರಾರು ಶಾಲಾ ಮಕ್ಕಳಿಗೆ ಅನ್ನದಾನ ನಡೆಯುತ್ತದೆ. ಅದರ ಸಮೀಪದಲ್ಲೇ ಯಾತ್ರಿಗಳ ವಸತಿಗೃಹವಿದೆ. ದೇವಸ್ಥಾನದ ಪಶ್ಚಿಮ ಬೀದಿಯಲ್ಲಿ ತ್ರ್ಯಂಬಕೇಶ್ವರ, ಶೃಂಗೇರಿ ಮಠದ ಈಶ್ವರ ಗುಡಿ, ಮಾರಿಯಮ್ಮನ ಗುಡಿಗಳಿವೆ. ಶ್ರೀಮೂಕಾಂಬಿಕಾ ಕ್ಷೇತ್ರದಲ್ಲಿ ಅಧ್ಯಯನ, ಸಾಧನೆಗಳಿಗೆ ಸಂಬಂಧಿಸಿದ ಆಧ್ಯಾತ್ಮಿಕ ಕೇಂದ್ರಗಳಿವೆ. ಕಂಚಿ ಕಾಮಕೋಟಿ ಪೀಠದಿಂದ ನಡೆಯುವ ಶ್ರೀಜಯೇಂದ್ರ ಸರಸ್ವತೀ ವೇದಪಾಠ ಶಾಲೆಯಲ್ಲಿ ವಟುಗಳಿಗೆ ಉಚಿತವಾಗಿ ವೇದಾಧ್ಯಯನ ಮಾಡಲು ವಸತಿ ಶಿಕ್ಷಣ ಸೌಲಭ್ಯವಿದೆ.
ಐತಿಹ್ಯ:
ಕೋಲ ಮಹರ್ಷಿಯು ತಪಸ್ಸು ಮಾಡಿ ಮಹಾಲಕ್ಷ್ಮಿಯನ್ನು ಒಲಿಸಿಕೊಂಡ ಈ ಸಿದ್ಧ ಕ್ಷೇತ್ರವೇ ಕೋಲಾ(ಕೊಲ್ಲೂರು)ಪುರ ಎನಿಸಿಕೊಂಡಿದೆ. ಅದೇ ಸಮಯದಲ್ಲಿ ಕಂಹಾಸುರನೆಂಬ ರಾಕ್ಷಸ ಭೈರವಿ ದೇವಿಯನ್ನು ಪೂಜಿಸಿ ಹರಿಹರಾದಿಗಳಿಂದ ಮರಣ ಹೊಂದದ ವರ ಪಡೆದು ತುಂಬಾ ಅಹಂಕಾರಿಯಾಗಿ ಮೆರೆಯುತ್ತಿದ್ದ.
ಅಹಂಕಾರದಿಂದ ಬೀಗಿದ ಕಂಹಾಸುರ ಋಷಿ, ಮುನಿಗಳಿಗೆ ಉಪದ್ರವಕಾರಿಯಾದಾಗ ಕೋಲ ಮಹರ್ಷಿಯು ಶ್ರೀ ಮಹಾಲಕ್ಷ್ಮಿಯನ್ನು ಸ್ತುತಿಸಿದನು, ಆಗ ಶ್ರೀದೇವಿಯು ಪ್ರತ್ಯಕ್ಷಳಾಗಿ ಕಂಹಾಸುರನ ಸಂಹಾರಕ್ಕೆ ಸಿದ್ಧಳಾದಳು. ಆಗ ಕಂಹಾಸುರನು ಬೆದರಿ ಋಷ್ಯಮೂಕ ಪರ್ವತವನ್ನು ಸೇರಿ, ಅಲ್ಲಿ ಘೋರ ತಪಸ್ಸಿಗೆ ಆರಂಭಿಸಿದನು.
|