ಪ್ರತಿ ವರ್ಷ ಪುಷ್ಯ ಬಹುಳ ಪಂಚಮಿ ತಿಥಿಯಂದು ವಿಶ್ವದ ಎಲ್ಲಾ ಕರ್ನಾಟಕ ಸಂಗೀತ ವಿದ್ವಾಂಸರು ಈ ಪ್ರದೇಶಕ್ಕೆ ಆಗಮಿಸಿ, ಶ್ರೀರಾಮನ ಭಕ್ತ ಶ್ರೇಷ್ಠರೊಬ್ಬರು ಬರೆದು ಹಾಡಿರುವ ಪಂಚ ರತ್ನ ಕೀರ್ತನೆಯನ್ನು ಹಾಡುತ್ತಾರೆ. ಐದು ದಿನಗಳ ಈ ಸಂಗೀತ ಉತ್ಸವವು ತಮಿಳುನಾಡಿನಲ್ಲಿ ಅತ್ಯಂತ ಆಕರ್ಷಣೆಯಾಗಿದೆ.
ತಮಿಳುನಾಡಿನ ತಿರುವೈಯೂರ್ ಪ್ರದೇಶದಲ್ಲಿರುವ ಕಾವೇರಿ ನದಿ ತಟದ ಪ್ರಕೃತಿರಮಣೀಯ ವಾತಾವರಣದಲ್ಲಿದೆ ಈ ಕ್ಷೇತ್ರ. ಪಂಚನದಿಗಳ ಬೀಡಾದ ತಿರುವಯ್ಯೂರು ಕ್ಷೇತ್ರದಲ್ಲಿರುವುದು ಶ್ರೀ ತ್ಯಾಗರಾಜರ ಸಮಾಧಿ ಹಾಗೂ ಅದರ ಬಳಿಯೇ ಇರುವ ಶ್ರೀರಾಮ ಮಂದಿರ.
ಇಲ್ಲಿ ಪ್ರತಿವರ್ಷ, ವಿವಿಧ ಕಡೆಗಳಿಂದ ಆಗಮಿಸುವ ಗಾನಕೋಗಿಲೆಗಳು ತಮ್ಮ ಮಧುರ ಕಂಠದಿಂದ ಪ್ರಸಿದ್ಧ ಕರ್ನಾಟಕ ಸಂಗೀತಗಾರ ಮತ್ತು ರಾಮಭಕ್ತ ತ್ಯಾಗರಾಜ ಸ್ವಾಮಿ ಅವರ ಕೀರ್ತನೆಯನ್ನು ಐದು ದಿನಗಳ ಕಾಲ ನಡೆಯುವ ಸಂಗೀತ ಉತ್ಸವದಲ್ಲಿ ಸುಶ್ರಾವ್ಯವಾಗಿ ಹಾಡುತ್ತಾರೆ.
ತ್ಯಾಗಬ್ರಹ್ಮ ಎಂದು ಗೌರವಯುತವಾಗಿ ಕರೆಯಲ್ಪಡುವ ತ್ಯಾಗರಾಜರು, ತಮ್ಮ ಶಿಷ್ಯರೊಂದಿಗೆ ಇದೇ ಪ್ರದೇಶದಲ್ಲಿ ಸುಮಾರು 24,000 ಶ್ರೀರಾಮನ ಕೃತಿಗಳನ್ನು ರಚಿಸಿ ಹಾಡಿದ್ದರು. ಈ ಮೂಲಕ ಶ್ರೀರಾಮನ ಆಶೀರ್ವಾದದೊಂದಿಗೆ ಮನಃಶಾಂತಿಯನ್ನು ಪಡೆದುಕೊಂಡಿದ್ದರು.
ತ್ಯಾಗರಾಜರು ಹಾಡಿದ ಕೀರ್ತನೆಗಳು ಕರ್ನಾಟಕ ಸಂಗೀತದಲ್ಲಿ ಪರಮೋಚ್ಚವಾಗಿದೆ. ಚೆನ್ನೈನಲ್ಲಿ ನಡೆಯುವ ಎಲ್ಲಾ ಸಂಗೀತ ಕಚೇರಿಗಳಲ್ಲಿ ಪ್ರತಿ ಕರ್ನಾಟಕ ಸಂಗೀತ ಹಾಡುಗಾರರು ಮತ್ತು ಪಕ್ಕವಾದ್ಯ ಕಲಾವಿದರು ಕನಿಷ್ಠ ಮೂರರಿಂದ ನಾಲ್ಕು ತ್ಯಾಗರಾಜರ ಕೀರ್ತನೆಯನ್ನು ಹಾಡಿಯೇ ಹಾಡುತ್ತಾರೆ. ಶ್ರೀ ತ್ಯಾಗರಾಜರ ಕೀರ್ತನೆಯಲ್ಲಿ ಅಷ್ಟೊಂದು ರಾಗವಿದೆ ಮತ್ತು ಭಕ್ತಿಯಿದೆ.
|