ಐಪಿಎಲ್ನಲ್ಲಿ ಎರಡು ಬಾರಿ ಆಡಿದ ನಂತರ ಭಾರತೀಯ ಸಂಸ್ಕೃತಿಗೆ ಸಂಪೂರ್ಣ ಬೌಲ್ಡ್ ಆಗಿರುವ ಆಸ್ಟ್ರೇಲಿಯಾದ ಸ್ಪಿನ್ ಮಾಂತ್ರಿಕ ಹಾಗೂ ರಾಜಸ್ತಾನ್ ರಾಯಲ್ಸ್ ತಂಡದ ನಾಯಕ ಶೇನ್ ವಾರ್ನೆ, ಭಾರತದ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಸೇರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಬಿಸಿಸಿಐ ಕೋಚ್ ಆಗಿ ಭಾರತಕ್ಕೆ ಸೇರಲು ಆಹ್ವಾನ ನೀಡಿದರೆ ಖಂಡಿತವಾಗಿಯೂ ಭಾರತಕ್ಕೆ ಬರಲು ಹರ್ಷಿಸುತ್ತೇನೆ ಎಂದು ವಾರ್ನೆ ಹೇಳಿದ್ದಾರೆ.ನನಗೆ ಭಾರತದ ಸಂಸ್ಕೃತಿ, ಸಂಪ್ರದಾಯ ಎಲ್ಲವೂ ತುಂಬ ಇಷ್ಟವಾಗಿದೆ. ಭಾರತದ ಸಂಸ್ಕೃತಿಯ ಬಗ್ಗೆ ಅಚ್ಚರಿಯ ಜತೆಗೆ ಗೌರವವೂ ಮೂಡುತ್ತದೆ. ಆದರೂ ನನಗೆ ಅಲ್ಲಿನ ಸಂಸ್ಕೃತಿ ಅರ್ಥವಾಗಲೂ ಇನ್ನೂ ಸಮಯ ಹಿಡಿಯಬಹುದು. ನಾನಿನ್ನು ಹಲವು ಬಾರಿ ಭಾರತದಲ್ಲಿ ಪ್ರವಾಸ ಮಾಡಬೇಕೆಂದು ಬಯಸಿದ್ದೇನೆ. ಭಾರತದಿಂದ ಕ್ರಿಕೆಟ್ ತಂಡಕ್ಕೆ ಕೋಚ್ ಆಗಿ ಆಹ್ವಾನ ಬಂದರಂತೂ ನನ್ನ ಸತೋಷ ಇಮ್ಮಡಿಯಾಗುತ್ತದೆ ಎಂದು ವಾರ್ನೆ ವಿವರಿಸಿದ್ದಾರೆ.ಬಿಸಿಸಿಐಗೆ ಸಂಬಂಧಿಸಿದಂತೆ ಹೇಳುವುದಾದರೆ, ನನಗೆ ಭಾರತದ ಬೌಲರುಗಳ ಜತೆಗೆ ಕೆಲಸ ಮಾಡಲು ಇಚ್ಛೆಯಿದೆ. ಭಾರತದ ಬೌಲರುಗಳಾದ ಯೂಸುಫ್ ಪಠಾಣ್, ರವೀಂದ್ರ ಜಡೇಜಾ ಜತೆಗೆ ತಂಡ ಹಂಚಿಕೊಂಡ ಅನುಭವವೂ ನನಗಿದೆ. ಕಳೆದ ಬಾರಿಯೂ ಉತ್ತಮವಾಗಿ ಆಡಿದ ಅವರು ಈ ಬಾರಿಯೂ ಒಳ್ಳೆಯ ಪರಿಶ್ರಮ ತೋರಿದ್ದಾರೆ ಎಂದರು.ಎರಡು ವರ್ಷದ ಐಪಿಎಲ್ ಪಂದ್ಯ ನನ್ನ ಜೀವನದ ಅತ್ಯುತ್ತಮ ಘಳಿಗೆ ಹಾಗೂ ಮರೆಯಲಾಗದ ಅನುಭವ ಕೂಡಾ ಎಂದರು. ಐಪಿಎಲ್ನಂತಹ ಮ್ಯಾಚ್ಗಳಿಂದ ಬೇರೆ ಬೇರೆ ದೇಶದ ಮಂದಿ ಒಂದೇ ತಂಡದಲ್ಲಿ ಆಡಲು ಅವಕಾಶ ಸಿಗುತ್ತದೆ. ಇದರಿಂದ ವೃತ್ತಿ ಜತೆಗೆ ಖಾಸಗಿ ಗೆಳೆತನ, ಸಂಪರ್ಕ ಬೆಳೆಯುತ್ತದೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.ಬೇರೆ ಬೇರೆ ಭಾಷೆಯ ಮಂದ ಒಂದೇ ತಂಡದಲ್ಲಿರುವುದರಿಂದ ಕೆಲವೊಮ್ಮೆ ಸಂವಹನ ಕೊರತೆಯಾದರೂ, ಅದು ದೊಡ್ಡ ಸಮಸ್ಯೆಯೇ ಇಲ್ಲ. ಒಂದು ತಂಡ ಎಂದಾಗ ಅಲ್ಲಿ ನಾವೆಲ್ಲ (ರಾಜಸ್ತಾನ್ ರಾಯಲ್ಸ್) ಜತೆಯಾಗಿ ಪ್ರತಿಯೊಂದು ಕೆಲಸವನ್ನೂ ಮಾಡಿದ್ದವೆ. ಆಟಗಾರರೊಂದಿಗೆ ಫ್ರಾಂಚೈಸಿಗಳೂ ಬೆರೆಯುವುದರಿಂದ ತಂಡದಲ್ಲಿ ಯಾವುದೇ ಮುಚ್ಚುಮರೆ ಇರುವುದಿಲ್ಲ. ಇದರಿಂದಾಗಿಯೇ ಐಪಿಎಲ್ ಎಂಬ ಪಂದ್ಯಾವಳಿಗೆ ಒಂದು ದೊಡ್ಡ ಯಶಸ್ಸು ದೊರೆತಿದೆ ಎಂದು ಹೇಳಿದರು. |