ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಆರು ರನ್ಗಳಿಂದ ಮಣಿಸಿದ ಡೆಕ್ಕನ್ ಚಾರ್ಜರ್ಸ್ ಹೈದರಾಬಾದ್ ಚಾಂಪಿಯನ್ ಆದರು. ಗೆಲುವಿಗಾಗಿ 144 ಗುರಿಯನ್ನು ಬೆನ್ನತ್ತಿದ ಬೆಂಗಳೂರು ತಂಡ ನಿಗದಿತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 137ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಐಪಿಎಲ್ ಕ್ರಿಕೆಟ್ ಮತ್ತೊಮ್ಮೆ ಅಚ್ಚರಿ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದು, ಕಳೆದ ಸಾಲಿನ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿದ್ದ ಹೈದರಾಬಾದ್ ಈ ಬಾರಿಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು. ಟಾಸ್ ಗೆದ್ದ ಬೆಂಗಳೂರು ತಂಡದ ನಾಯಕ ಅನಿಲ್ ಕುಂಬ್ಳೆ ಮೊದಲು ಪೀಲ್ಡಿಂಗ್ ಆಯ್ಕೆ ಮಾಡಿದರು. ಮೊದಲ ಓವರ್ನ ಮೂರನೇ ಎಸೆತದಲ್ಲಿ ಗಿಲ್ಲಿಯನ್ನು ಶೂನ್ಯಕ್ಕೆ ಮರಳಿಸಿದ ಜಂಬೋ ಪಡೆ ಪಂದ್ಯದಲ್ಲಿ ಪೂರ್ಣ ಹಿಡಿತವನ್ನು ಸಾಧಿಸಿದರು. ಒನ್ ಡೌನ್ ಬ್ಯಾಟ್ಸ್ಮಾನ್ ಸುಮನ್ ಸಹ ಕೇವಲ 10ರನ್ ಗಳಿಸಿ ವಿನಯ್ ಕುಮಾರ್ಗೆ ಬಲಿಯಾದರು.ನಂತರ ಬಂದ ಸೈಮಂಡ್ಸ್ ಸ್ಫೋಟಕ ಬ್ಯಾಟಿಂಗ್ನ ಮೂಲಕ 21 ಎಸೆತಗಳಲ್ಲಿ 33ರನ್ ಚಚ್ಚಿದರು. ಇದರಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಒಳಗೊಂಡಿದ್ದವು. ರೋಹಿತ್ ಶರ್ಮಾ(24ರನ್, 23ಎಸೆತ) ಸಹ ಉತ್ತಮ ಆರಂಭ ಪಡೆದರೂ ದೊಡ್ಡ ಹೊಡೆತಕ್ಕೆ ಕೈ ಹಾಕಿ ಕುಂಬ್ಳೆಗೆ ಎರಡನೇ ಬಲಿಯಾದರು. ವೇಣು ಗೋಪಾಲ್ ರಾವ್ ಶೂನ್ಯ ಸಂಪಾದಿಸಿದರೆ ಅಜರ್ ಬಿಲಾಕಿಯ 6 ಹಾಗೂ ಹ್ಯಾರಿಸ್ ಅಜೇಯ 9ರನ್ ಗಳಿಸಿದರು.ಆದರೆ ಮತ್ತೊಂದು ತುದಿಯಿಂದ ಬಂಡೆ ಕಲ್ಲಿನಂತೆ ನಿಂತ ಆರಂಭಿಕ ಆಟಗಾರ ಹರ್ಷಲ್ ಗಿಬ್ಸ್ ಅಜೇಯ 53ರನ್ ಬಾರಿಸಿದರು. 48 ಎಸೆತಗಳನ್ನು ಎದುರಿಸಿದ ಗಿಬ್ಸ್ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಬಾರಿಸಿದ್ದರು. ಒಟ್ಟಾರೆ 20 ಓವರ್ಗಳಲ್ಲಿ ಡೆಕ್ಕನ್ ಆರು ವಿಕೆಟ್ಗೆ 143ರನ್ ಗಳಿಸಿತು. ಅನಿಲ್ ಕುಂಬ್ಳೆ ನಾಲ್ಕು ಓವರ್ನಲ್ಲಿ ಕೇವಲ 16ರನ್ ನೀಡಿ ನಾಲ್ಕು ವಿಕೆಟ್ ಕಬಳಿಸಿದರು. ವಿನಯ್ ಕುಮಾರ್ ಸಹ ಎರಡು ವಿಕೆಟ್ ಪಡೆದರು. ಆದರೆ ದುಬಾರಿಯಾದ ಪ್ರವೀಣ್ ಕುಮಾರ್ ನಾಲ್ಕು ಓವರ್ನಲ್ಲಿ 43ರನ್ ನೀಡಿದರು. 144 ರ ಗುರಿಯನ್ನು ಬೆನ್ನತ್ತಿದ್ದ ಬೆಂಗಳೂರು ತಂಡದ ಆರಂಭ ಉತ್ತಮವಾಗಿದ್ದರೂ ಅದು ಹೆಚ್ಚು ಹೊತ್ತು ಸಾಗಲಿಲ್ಲ. ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್ಗಳ ಸರದಾರ ಆರ್ ಪಿ ಸಿಂಗ್ ಎಸೆತದಲ್ಲಿ ಕ್ಯಾಲಿಸ್(16ರನ್, 17ಎಸೆತ) ಬೌಲ್ಡ್ ಆದಾಗ ತಂಡದ ಮೊತ್ತ 20. ಸೆಮಿಫೈನಲ್ ಹೀರೊ ಮನೀಶ್ ಪಾಂಡೆ(4ರನ್, 8ಎಸೆತ) ಸಹ ಹೆಚ್ಚು ಹೊತ್ತು ನಿಲ್ಲಲಿಲ್ಲ. ನಂತರ ಬಂದ ಡ್ರಾವಿಡ್ 9ರನ್ ಗಳಿಸಿ ಹರ್ಮಿತ್ಗೆ ಬಲಿಯಾದರು. ವಾನ್ ಡೆರ್ ಮೆರ್ವೆ ಸ್ವಲ್ವ ಹೊತ್ತು ಪ್ರತಿರೋಧ ತೋರಿ 21 ಎಸೆತಗಳಲ್ಲಿ 32ರನ್ ಬಾರಿಸಿದರು. ಇದರಲ್ಲಿ ಒಂದು ಬೌಂಡರಿ ಹಾಗೂ 3 ಸಿಕ್ಸರ್ ಸೇರಿದ್ದವು. ರೋಸ್ ಟೇಲರ್ 20 ಎಸೆತಗಳಲ್ಲಿ 27ರನ್ ಗಳಿಸಿದರು. ವಿರಾಟ್ ಕೊಹ್ಲಿ(7), ಬೌಚರ್(5), ಪ್ರವೀಣ್ ಕುಮಾರ್(2), ವಿನಯ್ ಕುಮಾರ್(8) ಅಲ್ಪ ಮೊತ್ತಕ್ಕೆ ಬಲಿಯಾದರು.ಕೊನೆಯ ಓವರ್ನಲ್ಲಿ ಬೆಂಗಳೂರು ತಂಡಕ್ಕೆ ಗೆಲುವಿಗೆ ಅವಶ್ಯಕತೆಯಿದ್ದ ರನ್ 15. ಆದರೆ ರಾಬಿನ್ ಉತ್ತಪ್ಪ ಹಾಗೂ ಕಪ್ತಾನ ಅನಿಲ್ ಕುಂಬ್ಳೆ ಗುರಿ ತಲುಪಿಸುವಲ್ಲಿ ವಿಫಲರಾದರು. ಉತ್ತಪ್ಪ ಅಜೇಯ 17ರನ್ ಗಳಿಸಿದರೆ ಕುಂಬ್ಳೆ ಅಜೇಯ 1ರನ್ ಗಳಿಸಿದರು.ಕೊನೆಯದಾಗಿ ಬೆಂಗಳೂರು ತಂಡ ನಿಗದಿತ ಓವರ್ನಲ್ಲಿ 9ವಿಕೆಟ್ಗೆ 137ರನ್ ಗಳಿಸಲಷ್ಟೇ ಸಾಧ್ಯವಾಯಿತು. ಉತ್ತಮ ದಾಳಿ ಸಂಘಟಿಸಿದ ಆರ್ ಪಿ ಸಿಂಗ್(4-0-16-1), ಸೈಮಂಡ್ಸ್(3-0-18-2), ಪ್ರಗ್ಯಾನ್ ಓಜಾ(4-0-28-3), ಹರ್ಮಿತ್ ಸಿಂಗ್(4-0-23-2-) ಡೆಕ್ಕನ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.ಆದರೆ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಬೆಂಗಳೂರು ತಂಡದ ನಾಯಕ ಅನಿಲ್ ಕುಂಬ್ಳೆ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಅರ್ಹನಾದರೆ, ಡೆಕ್ಕನ್ ನಾಯಕ ಆಡಂ ಗಿಲ್ಕ್ರಿಸ್ಟ್ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. |