ಪ್ರಮುಖರೇ ತುಂಬಿರುವ ಭಾರತೀಯ ಅಗ್ರ ಬ್ಯಾಟಿಂಗ್ ಕ್ರಮಾಂಕದಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಜಾಗವಿಲ್ಲ ಎಂದು ಹೇಳುವ ಮೂಲಕ ಟೀಮ್ ಇಂಡಿಯಾ ಮಾಜಿ ಕಪ್ತಾನ ಸುನಿಲ್ ಗವಾಸ್ಕರ್ ಕೂಡ ಈ ಕುರಿತಾದ ಚರ್ಚೆಗೆ ಸೇರಿಕೊಂಡಿದ್ದಾರೆ.
ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್ ಮತ್ತು ಯುವರಾಜ್ ಸಿಂಗ್ರಂತಹ ದಾಂಡಿಗರು ಅಗ್ರ ಕ್ರಮಾಂಕದಲ್ಲಿರುವಾಗ ತಾನು ಐದನೇ ಕ್ರಮಾಂಕದಲ್ಲಿರುವುದು ಅನಿವಾರ್ಯ ಎಂದು ಧೋನಿ ನೀಡಿದ್ದ ಹೇಳಿಕೆಗೆ ಗವಾಸ್ಕರ್ ಕೂಡ ಬೆಂಬಲ ವ್ಯಕ್ತಪಡಿಸಿದರು.
ನನ್ನ ಪ್ರಕಾರ ಅಗ್ರ ಕ್ರಮಾಂಕದಲ್ಲಿ ಧೋನಿಗೆ ಅವಕಾಶವಿಲ್ಲ. ವೀರೇಂದ್ರ ಸೆಹ್ವಾಗ್ ಮತ್ತು ಸಚಿನ್ ತೆಂಡೂಲ್ಕರ್ ಅಗ್ರ ಸ್ಥಾನದಲ್ಲಿದ್ದರೆ ಅವರ ನಂತರ ಗೌತಮ್ ಗಂಭೀರ್ ಇದ್ದಾರೆ. ನಾಲ್ಕನೇ ಕ್ರಮಾಂಕ ಯುವರಾಜ್ ಸಿಂಗ್ಗೆ ಹೇಳಿ ಮಾಡಿಸಿದುದಾಗಿದೆ. ಆ ನಂತರದ ಸ್ಥಾನ ಧೋನಿಯವರದ್ದು ಎಂದು ಗವಾಸ್ಕರ್ ಶುಕ್ರವಾರ ತಿಳಿಸಿದ್ದಾರೆ.
ಕಳೆದ ಕೆಲ ಸಮಯದಿಂದ ಅವರು ಬಂದು ಹೋಗುತ್ತಿರುವುದರಿಂದ ಆಟಗಾರರು ಹೆಚ್ಚು ಓವರುಗಳನ್ನು ಎದುರಿಸುವಂತಾಗಬೇಕು ಎಂಬ ಪ್ರಮುಖ ಚರ್ಚೆ ನಡೆಯುತ್ತಿರುವುದು ಉತ್ತಮ ಬೆಳವಣಿಗೆ. ನನ್ನ ಪ್ರಕಾರ ಅವರು ಪರಿಸ್ಥಿತಿಗೆ ಹೊಂದಿಕೊಂಡು ಬ್ಯಾಟಿಂಗ್ ಮಾಡಬೇಕಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ನಾಯಕತ್ವ ಶೃಂಗಸಭೆಯ ಬಳಿಕ ಸಲಹೆ ನೀಡಿದರು.
ದ್ರಾವಿಡ್ ಕೈ ಬಿಟ್ಟದ್ದು.. ಚಾಂಪಿಯನ್ಸ್ ಟ್ರೋಫಿಯಲ್ಲಿ ಸೆಹ್ವಾಗ್ರ ಅನುಪಸ್ಥಿತಿಯನ್ನು ತುಂಬಲು ಬದಲಿಯಾಗಿ ಹಿರಿಯ ಆಟಗಾರರನ್ನು ಆಯ್ಕೆಗಾರರು ಬಯಸಿದ ಕಾರಣ ರಾಹುಲ್ ದ್ರಾವಿಡ್ರನ್ನು ತಂಡಕ್ಕೆ ಸೇರ್ಪಡೆಗೊಳಿಸಲಾಯಿತು. ಸೆಹ್ವಾಗ್ ಚೇತರಿಸಿಕೊಂಡ ಬಳಿಕ ಅವರನ್ನು ಕೈ ಬಿಡಲಾಯಿತು. ಅಲ್ಲದೆ ಯುವರಾಜ್ ಕೂಡ ಚಾಂಪಿಯನ್ಸ್ ಟ್ರೋಫಿಗೆ ಮೊದಲು ಗಾಯಗೊಂಡಿದ್ದರು. ಈಗ ಅವರು ಕೂಡ ಸುಧಾರಿಸಿಕೊಂಡಿದ್ದಾರೆ. ಹಾಗಾಗಿ ತಂಡದಲ್ಲಿ ದ್ರಾವಿಡ್ರಿಗೆ ಜಾಗವಿಲ್ಲ ಎಂದರು.
ಸಚಿನ್ ಗ್ರೇಟ್... ಅದೇ ಹೊತ್ತಿಗೆ ಮುಂದಿನ ತಿಂಗಳು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 20 ವರ್ಷಗಳನ್ನು ಪೂರ್ಣಗೊಳಿಸಲಿರುವ ಸಚಿನ್ರ ಕ್ರೀಡೆಯೆಡೆಗಿನ ಬದ್ಧತೆಯ ಕುರಿತು ಗವಾಸ್ಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
20 ವರ್ಷಗಳ ಕಾಲ ಸ್ಥಿರವಾಗಿ ಆಡುವ ಮೂಲಕ ಅವರು ಅದ್ಭುತ ಸಾಧನೆ ಮಾಡಿದ್ದಾರೆ. 20 ವರ್ಷಗಳ ನಂತರವೂ ಅವರು ಯುವ ಹೃದಯಿಯಾಗಿರುವುದು ವಿಶೇಷ. ಇನ್ನೂ ಹಲವು ವರ್ಷಗಳ ಕಾಲ ಕ್ರಿಕೆಟ್ ಆಡುವ ಹಸಿವು ಅವರಲ್ಲಿದೆ ಎಂದರು.