ಟೀಮ್ ಇಂಡಿಯಾ ಕಪ್ತಾನ ಮಹೇಂದ್ರ ಸಿಂಗ್ ಧೋನಿ, ಯುವರಾಜ್ ಸಿಂಗ್ ಮತ್ತು ಹರಭಜನ್ ಸಿಂಗ್ ಪೊಲೀಸ್ ಭದ್ರತೆಯಿಲ್ಲದೆ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ತಿರುಗುತ್ತಿದ್ದಾರೆ ಎಂದು ಪೊಲೀಸರು ಕ್ರಿಕೆಟ್ ಮಂಡಳಿಗೆ ದೂರು ನೀಡಿದ್ದಾರೆ.
ನಾಲ್ಕನೇ ಏಕದಿನ ಪಂದ್ಯಕ್ಕಾಗಿ ಮೊಹಾಲಿಗೆ ಆಗಮಿಸಿರುವ ಕ್ರಿಕೆಟ್ ತಂಡಕ್ಕೆ ಭಾರೀ ಭದ್ರತೆ ಏರ್ಪಡಿಸಲಾಗಿದೆ. ಆದರೆ ಆಟಗಾರರು ತಾವು ಉಳಿದುಕೊಂಡಿರುವ ಹೊಟೇಲಿನಿಂದ ಯಾವುದೇ ಪೂರ್ವ ಮಾಹಿತಿ ನೀಡದೆ ಗೆಳೆಯರೊಂದಿಗೆ ಹೊರಗೆ ತಿರುಗಾಡಲು ಹೋಗುತ್ತಿದ್ದಾರೆ ಎನ್ನುವುದು ಪೊಲೀಸರ ಅಳಲು. ಈ ಬಗ್ಗೆ ಅವರು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ಗೆ ದೂರು ಕೂಡ ನೀಡಿದ್ದಾರೆ.
ಎಲ್ಲಾ ಸುರಕ್ಷತಾ ಕ್ರಮಗಳಿಂದ ಮುಕ್ತರಾದ ಯುವರಾಜ್ ಸಿಂಗ್ ಸಂಜೆ 7.30ಕ್ಕೆ ತಾಜ್ ಹೊಟೇಲಿನಿಂದ ತನ್ನ ಗೆಳೆಯನ ಕಾರಿನಲ್ಲಿ ಹೊರಗೆ ಹೋಗಿದ್ದಾರೆ. ಸ್ವಲ್ಪ ಸಮಯದ ನಂತರ ಧೋನಿ ಮತ್ತು ಹರಭಜನ್ ಕೂಡ ಯಾರಿಗೂ ಯಾವುದೇ ಮಾಹಿತಿಯನ್ನೂ ನೀಡದೆ ಹೊಟೇಲಿನಿಂದ ಹೊರಗೆ ಹೋಗಿದ್ದಾರೆ ಎಂದು ಪೊಲೀಸ್ ಅಧೀಕ್ಷಕ ಎಚ್.ಎಸ್. ದೂನ್ ತಿಳಿಸಿದ್ದಾರೆ.
ಆಟಗಾರರ ಸುರಕ್ಷತೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಉಪ ಪೊಲೀಸ್ ಅಧೀಕ್ಷಕ ರೋಷನ್ ಲಾಲ್ರಿಂದ ಈ ಬಗ್ಗೆ ವರದಿಯನ್ನು ತರಿಸಿಕೊಂಡಿದ್ದೇನೆ. ಇದರ ಆಧಾರದಲ್ಲಿ ಆಟಗಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ನಾನು ಪಂಜಾಬ್ ಕ್ರಿಕೆಟ್ ಮಂಡಳಿ ಅಧ್ಯಕ್ಷರಿಗೆ ಲಿಖಿತ ದೂರು ನೀಡಿದ್ದೇನೆ ಎಂದರು.
ಯುವರಾಜ್ ನಗರದಲ್ಲೇ ನೆಲೆಸಿರುವ ತನ್ನ ತಂದೆ ಯೋಗರಾಜ್ ಸಿಂಗ್ರನ್ನು ಭೇಟಿ ಮಾಡಲು ಗೆಳೆಯನ ಜತೆ ಹೋಗಿದ್ದಾರೆ ಎಂದು ಹೊಟೇಲ್ ಸಿಬ್ಬಂದಿ ತಿಳಿಸಿದ್ದಾರೆ.