ಗಾಯಾಳುಗಳಿಂದ ಬಸವಳಿದಿರುವ ಆಸ್ಟ್ರೇಲಿಯಾಕ್ಕೆ ಮುಕ್ತಿ ದೊರಕುವ ಯಾವುದೇ ಸಾಧ್ಯತೆಗಳು ಕಾಣುತ್ತಿಲ್ಲ. ನಿನ್ನೆಯಷ್ಟೇ ವೇಗಿ ಪೀಟರ್ ಸಿದ್ಲೇ ಗಾಯಾಳುವಾಗಿ ತವರಿಗೆ ಮರಳಿದ ಸುದ್ದಿ ಬಂದ ನಂತರ ಇದೀಗ ಸ್ನಾಯುಸೆಳೆತಕ್ಕೊಳಗಾಗಿರುವ ಮೊಯೆಸೆಸ್ ಹೆನ್ರಿಕ್ಸ್ ಐದನೇ ಏಕದಿನ ಪಂದ್ಯಕ್ಕೆ ಲಭ್ಯರಿಲ್ಲ ಎಂಬ ಮತ್ತೊಂದು ಸುದ್ದಿ ಬಂದಿದೆ.
ಗಾಯಾಳು ಜೇಮ್ಸ್ ಹೋಪ್ಸ್ ಬದಲಿಗೆ ಬಂದಿದ್ದ ಹೆನ್ರಿಕ್ಸ್ ಸೋಮವಾರ ಮೊಹಾಲಿಯಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಬಲ ಮಂಡಿಯ ಸ್ನಾಯುಸೆಳೆತಕ್ಕೊಳಗಾಗಿದ್ದರು.
ಈಗಾಗಲೇ ವೇಗಿಗಳಾದ ಪೀಟರ್ ಸಿದ್ಲೇ, ಬ್ರೆಟ್ ಲೀ ಮತ್ತು ವಿಕೆಟ್ ಕೀಪರ್ ಟಿಮ್ ಪಾಯ್ನೆ, ಜೇಮ್ಸ್ ಹೋಪ್ಸ್ರನ್ನು ತವರಿಗೆ ಕಳುಹಿಸಿರುವ ಆಸ್ಟ್ರೇಲಿಯಾ ಏಳು ಏಕದಿನ ಪಂದ್ಯಗಳ ಸರಣಿಯಲ್ಲಿ ಭಾರತ ವಿರುದ್ಧ 2-2ರ ಸಮಬಲ ಸಾಧಿಸಿದೆ.
ಏಕದಿನದ ಖಾಯಂ ಸ್ಥಾನಿಗಳಾದ ಮೈಕೆಲ್ ಕ್ಲಾರ್ಕೆ, ಬ್ರಾಡ್ ಹಡ್ಡಿನ್, ಕಾಲಮ್ ಫೆರ್ಗುಸನ್ ಮತ್ತು ನಥಾನ್ ಬ್ರಾಕನ್ರನ್ನು ಗಾಯಾಳುಗಳಾಗಿದ್ದ ಕಾರಣ ಬಿಟ್ಟು ಬಂದಿದ್ದ ವಿಶ್ವ ಚಾಂಪಿಯನ್ನರು ಭಾರತದಲ್ಲಿ ದಿನಕ್ಕೊಬ್ಬರಂತೆ ಗಾಯಾಳುಗಳಾಗುತ್ತಿದ್ದಾರೆ.
ಗುರುವಾರ ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯಕ್ಕೀಗ ಆಸ್ಟ್ರೇಲಿಯಾ ತಂಡದಲ್ಲಿ ಲಭ್ಯರಿರುವುದು ಕೇವಲ 13 ಆಟಗಾರರು ಮಾತ್ರ. ಅವರಿಂದಲೇ ಅಂತಿಮ 11 ಮಂದಿಯನ್ನು ಆಯ್ಕೆ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ ನಾಯಕ ರಿಕಿ ಪಾಂಟಿಂಗ್.
ನಮ್ಮ ಹುಡುಗರು ಗಾಯಾಳುಗಳಾಗುತ್ತಿರುವುದು ನನಗೆ ನಿಜಕ್ಕೂ ನಿರಾಸೆ ತಂದಿದೆ. ಅವರು ಆಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ತೀರಾ ಉತ್ಸುಕರಾಗಿದ್ದರೂ ಸಾಧ್ಯವಾಗುತ್ತಿಲ್ಲ. ಅವರು ಸರಣಿಯಿಂದ ಹೊರಗುಳಿಯುತ್ತಿದ್ದಾರೆ. ಪ್ರತೀ ಪಂದ್ಯದ ಗೆಲುವಿಗೆ ಅವರು ಸಾಕಷ್ಟು ಶ್ರಮವಹಿಸಿದ್ದರು ಎಂದು ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ.
ಈಗ ತವರಿಗೆ ಗಾಯಾಳುಗಳಾಗಿ ಮರಳಿರುವ ಪ್ರತಿಯೊಬ್ಬರೂ ತಂಡದೊಂದಿಗಿದ್ದು ಸರಣಿಯನ್ನು ಗೆದ್ದುಕೊಡುವ ಭರವಸೆಯಿಂದಿದ್ದವರು. ಆದರೆ ನಾವು ಬಂದದ್ದನ್ನು ಎದುರಿಸಬೇಕಾಗಿದೆ ಎಂದರು.