ಆಸ್ಟ್ರೇಲಿಯಾ ವಿರುದ್ಧದ ನಿರ್ಣಾಯಕ ಐದನೇ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲಬೇಕಾದರೆ ಕೆಳ ಕ್ರಮಾಂಕದ ಮೇಲೆ ಅವಲಂಬಿತವಾಗದೇ ಅಗ್ರ ಕ್ರಮಾಂಕವು ಸ್ಥಿರ ಪ್ರದರ್ಶನ ನೀಡುವ ಅಗತ್ಯವಿದೆ ಎಂದು ನಾಯಕ ಮಹೇಂದ್ರ ಸಿಂಗ್ ಧೋನಿ ಹೇಳಿದ್ದಾರೆ.
ಅಗ್ರ ದಾಂಡಿಗರು ಅತ್ಯುತ್ತಮ ಬ್ಯಾಟಿಂಗ್ ಮಾಡಬೇಕಾದ ಅಗತ್ಯವಿದೆ. ಅವರು ಕೆಳ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನೇ ನಂಬಿಕೊಂಡಿರಬಾರದು. ಏಳು ಮಂದಿ ಬ್ಯಾಟ್ಸ್ಮನ್ಗಳು ತಂಡದಲ್ಲಿದ್ದರೆ ಆಗ ಅವರಲ್ಲಿನ ಆರು ಮಂದಿ ದೊಡ್ಡ ಮೊತ್ತ ಕಲೆ ಹಾಕಲು ಮುಂದಾಗುವುದು ಸಾಧ್ಯವಾಗುತ್ತದೆ. ಏಳನೇ ದಾಂಡಿಗನನ್ನು ನಾವು ಬ್ಯಾಕ್ಅಪ್ ಬ್ಯಾಟ್ಸ್ಮನ್ ಎಂದು ನಾವು ಬಳಕೆ ಮಾಡುತ್ತೇವೆ. ಇದು ಚೇಸಿಂಗ್ ಮಾಡುವಾಗ ಹೆಚ್ಚಿನ ಉಪಯೋಗಕ್ಕೆ ಬರುತ್ತದೆ ಎಂದರು.
ಅಗ್ರ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ದೊಡ್ಡ ಮೊತ್ತ ಗಳಿಸುವುದು ಸಾಧ್ಯವಾದರೆ ಇತರರಿಗೆ ಅವರನ್ನೇ ಹಿಂಬಾಲಿಸಲು ಸುಲಭವಾಗುತ್ತದೆ. ಆರಂಭ ಉತ್ತಮವಾಗಿದ್ದರೆ ನಾವು ದೊಡ್ಡ ಮೊತ್ತವನ್ನು ಕೂಡಿ ಹಾಕಬಹುದು. ಆ ಮೂಲಕ ಪಂದ್ಯದಲ್ಲಿ ಪ್ರಭಾವವನ್ನು ಬೀರಬಹುದು ಎಂದು ಪಂದ್ಯಕ್ಕೂ ಮೊದಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಧೋನಿ ಹೇಳಿದರು.
ಅದೇ ಹೊತ್ತಿಗೆ ಮೊಹಾಲಿ ಪಂದ್ಯದಲ್ಲಿ 250 ರನ್ನುಗಳನ್ನು ಬೆಂಬಲತ್ತಲು ಸಾಧ್ಯವಾಗದೇ ಇರುವುದಕ್ಕೆ ಅವರು ಬ್ಯಾಟ್ಸ್ಮನ್ಗಳನ್ನು ದೂಷಿಸಿದರು.
ರವೀಂದ್ರ ಜಡೇಜಾ ಬೌಲಿಂಗ್ ಆಲ್-ರೌಂಡ್ ಪ್ರದರ್ಶನ ನೀಡುತ್ತಿದ್ದು ಏಳನೇ ಕ್ರಮಾಂಕದಲ್ಲಿ ಅತ್ಯುತ್ತಮ ಆಟ ನೀಡುತ್ತಿದ್ದಾರೆ. ಬೌಲಿಂಗ್ನಂತೆ ಅವರ ಬ್ಯಾಟಿಂಗ್ ಕೂಡ ಪ್ರಮುಖ ಅಂಶ. ಏಳನೇ ಕ್ರಮಾಂಕದಲ್ಲಿರುವವರು ದೊಡ್ಡ ಮೊತ್ತ ಕಲೆ ಹಾಕಬೇಕೆಂದು ಯಾರೂ ನಿರೀಕ್ಷಿಸುವುದಿಲ್ಲ. ಆದರೆ ಅವರು ಕ್ಷಿಪ್ರ ರನ್ ಗಳಿಸುವುದು ಅಗತ್ಯ ಎಂದು ವಿವರಣೆ ನೀಡಿದ್ದಾರೆ.
ಬರಿ ದಾಖಲೆ ಮಾತ್ರವಲ್ಲ... ಸರಣಿಯಲ್ಲಿ ವಿಫಲರಾಗಿರುವ ಸಚಿನ್ ತೆಂಡೂಲ್ಕರ್ ಬಗ್ಗೆ ಮಾತಿಗಿಳಿದ ಅವರು, ಅನುಭವಿ ದಾಂಡಿಗ 17,000 ರನ್ ದಾಖಲೆಗೆ ಅಗತ್ಯವಿರುವ ಏಳು ರನ್ ಗಳಿಸಿದರೆ ಸಾಲದು ಎಂದರು.
ಸಚಿನ್ ಬ್ಯಾಟಿಂಗ್ ಮಾಡಲು ಹೋದಾಗ ಪ್ರತಿಯೊಬ್ಬರಿಗೂ ಸಾಕಷ್ಟು ನಿರೀಕ್ಷೆಗಳಿರುತ್ತವೆ. ಅದು ಅವರ ಜವಾಬ್ದಾರಿ ಕೂಡ. ಕಳೆದ 20 ವರ್ಷಗಳಲ್ಲಿ ಅವರದನ್ನು ನಿರ್ವಹಿಸಿದ್ದಾರೆ. ಅವರು ದೊಡ್ಡ ಮೊತ್ತ ಕಲೆ ಹಾಕಬೇಕೆಂಬುದು ನಮ್ಮ ನಿರೀಕ್ಷೆ. ಆದರೆ ಅವರನ್ನು ಒತ್ತಡದಲ್ಲಿ ಸಿಲುಕಿಸುವುದು ನಮಗಿಷ್ಟವಿಲ್ಲ ಎಂದರು.
ಏಳು ಏಕದಿನ ಪಂದ್ಯಗಳ ಸರಣಿಯೀಗ 2-2ರಲ್ಲಿ ಸಮಬಲಗೊಂಡಿದ್ದು, ಹೈದರಾಬಾದ್ನ ಪಂದ್ಯವನ್ನು ನೂತನ ಸರಣಿಯೆಂಬಂತೆ ಆಡಬೇಕು. ಇನ್ನಿರುವುದು ಮೂರೇ ಪಂದ್ಯಗಳು. ಅದರಲ್ಲಿ ಎರಡು ಪಂದ್ಯ ಗೆದ್ದವರಿಗೆ ಸರಣಿ ಎಂದು ಧೋನಿ ತಿಳಿಸಿದರು.
ಇನ್ನು ಮುಂದಿನ ಪ್ರತೀ ಪಂದ್ಯವೂ ಪ್ರಮುಖವಾದುದು. ಇತ್ತಂಡಗಳಿಗೂ ಇಲ್ಲಿನ ಪ್ರತಿ ಕ್ಷಣ ಮಹತ್ವವಾದುದು. ಪಂದ್ಯಗಳು ಕಡಿಮೆಯಾಗಿರುವುದರಿಂದ ನಾವು ಸ್ಥಿರ ಪ್ರದರ್ಶನ ನೀಡಲೇಬೇಕಾದ ಅನಿವಾರ್ಯತೆಯಲ್ಲಿದ್ದೇವೆ ಎಂದು ನಾಯಕ ವಿವರಣೆ ನೀಡಿದ್ದಾರೆ.