ಸಚಿನ್ರನ್ನು ತಂಡದಿಂದ ಹೊರದಬ್ಬಲು ಯತ್ನಿಸಿದ್ದ ಚಾಪೆಲ್..!
ನವದೆಹಲಿ, ಶುಕ್ರವಾರ, 6 ನವೆಂಬರ್ 2009( 15:56 IST )
ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರನ್ನು ಟೀಮ್ ಇಂಡಿಯಾದಿಂದ ಹೊರಗಿಡಲು ಗ್ರೆಗ್ ಚಾಪೆಲ್ ಬಯಸಿದ್ದರು ಮತ್ತು ಈ ಸಂಬಂಧ ಆಯ್ಕೆ ಸಮಿತಿಯ ಮೇಲೆ ಅವರು ಒತ್ತಡ ಕೂಡ ಹಾಕಿದ್ದರು ಎಂದು ಮಾಜಿ ವಿಕೆಟ್ ಕೀಪರ್ ಹಾಗೂ ಮುಖ್ಯ ಆಯ್ಕೆಗಾರ ಕಿರಣ್ ಮೋರೆ ಬಹಿರಂಗಪಡಿಸಿದ್ದಾರೆ.
ತಾನು ಟೀಮ್ ಇಂಡಿಯಾ ತರಬೇತುದಾರನಾಗಿದ್ದಾಗ ಸಾರ್ವಕಾಲಿಕ ಶ್ರೇಷ್ಠ ಕಪ್ತಾನನೆಂದು ಹೆಸರು ಗಳಿಸಿದ್ದ ಸೌರವ್ ಗಂಗೂಲಿಯವರ ಜತೆ ಸಾಕಷ್ಟು ಜಿದ್ದಾಜಿದ್ದಿ ನಡೆಸಿದ್ದರು. ಆ ಬಳಿಕ ಗಂಗೂಲಿ ಕೂಡ ಕೆಲ ಕಾಲ ಕ್ರಿಕೆಟ್ನಿಂದ ಹೊರಗುಳಿಯಬೇಕಾದುದು ಕೂಡ ಚಾಪೆಲ್ ಪಿತೂರಿಯಿಂದಲೇ.
ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್ ಮುಂತಾದ ಆಟಗಾರರ ಜತೆಗೂ ಚಾಪೆಲ್ ಸಾಕಷ್ಟು ಕಾದಾಟ ನಡೆಸಿದ್ದರು ಎಂಬುದು ನಂತರದ ದಿನಗಳಲ್ಲಿ ಬಹಿರಂಗವಾಗಿತ್ತು. ಆದರೆ ಆ ಪಟ್ಟಿಯಲ್ಲಿ ಸಚಿನ್ ಕೂಡ ಸ್ಥಾನ ಪಡೆದಿದ್ದರು ಎಂಬ ಬಿಸಿಬಿಸಿ ಸುದ್ದಿ ಮೋರೆಯವರಿಂದ ಹೊರ ಬಂದಿದೆ.
ವೆಬ್ಸೈಟ್ವೊಂದರ ಜತೆ ಮಾತನಾಡುತ್ತಿದ್ದ ಕಿರಣ್ ಮೋರೆ ಮೊತ್ತ ಮೊದಲ ಬಾರಿಗೆ ಈ ಸುದ್ದಿಯನ್ನು ಹೊರ ಜಗತ್ತಿಗೆ ತಿಳಿಸಿದ್ದಾರೆ. ಚಾಪೆಲ್ರವರು ಸಚಿನ್ ಜತೆಗೂ ಹೊಂದಾಣಿಕೆಯಿಂದಿರಲಿಲ್ಲ. ಅವರೊಂದಿಗೂ ಸಾಕಷ್ಟು ಮೇಲಾಟ ನಡೆಸಿದ್ದರು.
ಚಾಪೆಲ್ ಕೆಲವು ವಿಚಾರಗಳಲ್ಲಿ ನಡೆದುಕೊಳ್ಳುತ್ತಿದ್ದ ರೀತಿಯು ಭಾರತದ ಮಾಸ್ಟರ್ ಬ್ಲಾಸ್ಟರ್ಗೆ ಕಿರಿಕಿರಿಯಾಗುತ್ತಿತ್ತು. ಇದೇ ಕಾರಣದಿಂದ ಚಾಪೆಲ್ಗೆ ಸಚಿನ್ ತಂಡದಲ್ಲಿರುವುದು ಇಷ್ಟವಿರಲಿಲ್ಲ ಎಂದು ತಿಳಿಸಿದ್ದಾರೆ.
ಚಾಪೆಲ್ರಿಂದ ಒತ್ತಡವಿದ್ದ ಹೊರತಾಗಿಯೂ ತಾನು ಆಯ್ಕೆಗಾರನಾಗಿದ್ದಾಗ ಸಚಿನ್ರನ್ನು ತಂಡದಿಂದ ಹೊರಗಿಡುವ ಯೋಚನೆಯನ್ನು ಕೂಡ ಮಾಡಿರಲಿಲ್ಲ. ಅಲ್ಲದೆ ಈ ಕುರಿತು ಆಯ್ಕೆ ಸಮಿತಿಯ ಸಭೆಗಳಲ್ಲೂ ಯಾವುದೇ ಚರ್ಚೆ ನಡೆದಿರಲಿಲ್ಲ ಎಂದು ವಿವರಿಸಿದರು.
ಚಾಪೆಲ್ ಭಾರತೀಯ ಕ್ರಿಕೆಟ್ ತಂಡಕ್ಕೆ ತರಬೇತುದಾರರಾಗಿದ್ದಾಗ ಆಟಗಾರರೊಳಗೆ ವೈಮನಸ್ಯ ಉಂಟು ಮಾಡಲು ಯತ್ನಿಸುತ್ತಿದ್ದರು. ತಂಡದೊಳಗಿನ ವಿಚಾರಗಳನ್ನು ಮಾಧ್ಯಮಗಳೆದುರು ಅಥವಾ ಹೊರಗಡೆ ಹೇಳಿಕೊಳ್ಳುತ್ತಿದ್ದರು ಎಂಬ ಆರೋಪಗಳು ನಂತರದ ದಿನಗಳಲ್ಲಿ ಬಂದಿದ್ದವು.