ಗಾಯಗೊಂಡು ತಂಡದಿಂದ ಹೊರಗುಳಿದ ಬಳಿಕ ರಣಜಿ ಟ್ರೋಫಿ ಕೂಟದಲ್ಲಿ ಅದ್ಭುತ ನಿರ್ವಹಣೆ ತೋರಿರುವ ವೇಗಿ ಜಹೀರ್ ಖಾನ್ ಅವರು, ಶ್ರೀಲಂಕಾ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಮರಳಲು ಸಜ್ಜಾಗಿದ್ದಾರೆ.
ಪಂಜಾಬ್ ವಿರುದ್ಧದ ರಣಜಿ ಪಂದ್ಯದಲ್ಲಿ ಮುಂಬೈ ಪರ 42 ಓವರು ಎಸೆದಿದ್ದ ಜಹೀರ್, ಒಟ್ಟು 152 ರನ್ನುಗಳಿಗೆ 7 ವಿಕೆಟ್ ಕಿತ್ತಿದ್ದಾರೆ.
ಇದೇ ತಿಂಗಳ 16ರಿಂದ ಆರಂಭವಾಗಲಿರುವ ಪ್ರವಾಸೀ ಶ್ರೀಲಂಕಾ ವಿರುದ್ಧದ ಸರಣಿಗೆ ಜಹೀರ್ ಆಯ್ಕೆಯಾಗುವ ಎಲ್ಲ ಸಾಧ್ಯತೆಗಳಿವೆ. ಇದಕ್ಕೆ ಕಾರಣವೆಂದರೆ, ಈಗ ರಾಷ್ಟ್ರೀಯ ತಂಡದಲ್ಲಿರುವ ವೇಗಿಗಳಾದ ಇಶಾಂತ್ ಶರ್ಮಾ, ಮುನಾಫ್ ಪಟೇಲ್ ಅಷ್ಟೇನೂ ಆಶಾದಾಯಕ ಪ್ರದರ್ಶನ ನೀಡದಿರುವುದು.
ಜಹೀರ್ ಖಾನ್ ಕೊನೆಯ ಬಾರಿ ಭಾರತದ ಪರವಾಗಿ ಆಡಿದ್ದು ಇಂಗ್ಲೆಂಡಿನಲ್ಲಿ ನಡೆದ ವಿಶ್ವ ಟ್ವೆಂಟಿ-20 ಪಂದ್ಯಾವಳಿಯಲ್ಲಿ. ಆ ಬಳಿಕ ಭುಜದ ನೋವಿನಿಂದಾಗಿ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿದಿದ್ದರು.