ಬಂಗಾಳ ವಿರುದ್ಧ ಮೈಸೂರಿನಲ್ಲಿ ನಡೆದ ರಣಜಿ ಟ್ರೋಫಿ ಸೂಪರ್ ಲೀಗ್ ಹಂತದ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತ್ತಾದರೂ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಕರ್ನಾಟಕ ಮೂರು ಪಾಯಿಂಟ್ ಗಳಿಸಿತ್ತಲ್ಲದೆ ಒಟ್ಟು ಮೂರು ಪಂದ್ಯಗಳಿಂದಾಗಿ 11 ಅಂಕಗಳೊಂದಿಗೆ 'ಬಿ' ಗುಂಪಿನ ಅಗ್ರಸ್ಥಾನಿಯಾಯಿತು.
ಅದೇ ವೇಳೆ ಪಂದ್ಯದಲ್ಲಿ ಒಂದು ಅಂಕಕ್ಕೆ ತೃಪ್ತಿಪಟ್ಟ ಬಂಗಾಳ ಒಟ್ಟು ಏಳು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.
ಮೊದಲ ಇನಿಂಗ್ಸ್ನಲ್ಲಿ 199 ರನ್ಗಳ ಹಿನ್ನಡೆ ಅನುಭವಿಸಿದ್ದ ಬಂಗಾಳ ಅಂತಿಮ ದಿನದಲ್ಲಿ 86 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 213 ರನ್ ಗಳಿಸಿತು. ಪಂದ್ಯದಲ್ಲಿ ಉತ್ತಪ್ಪ ಪಡೆ ಹಲವು ಬಾರಿ ಮೇಲುಗೈ ಸಾಧಿಸಿದರೂ ನಾಯಕ ಮನೋಜ್ ತಿವಾರಿ (ಅಜೇಯ 65) ಹಾಗೂ ಆರಂಭಿಕ ದೀಪ್ ದಾಸ್ ಗುಪ್ತಾ (55) ಬಾರಿಸಿದ ಅರ್ಧಶತವು ಗೆಲುವಿನ ಆಸೆಗೆ ತಣ್ಣೀರೆರೆಚಿತು.
ಮೊದಲ ಇನ್ನಿಂಗ್ಸ್ನಲ್ಲೂ ಆಕರ್ಷಕ 78ರನ್ ಬಾರಿಸಿದ ತಿವಾರಿ 155 ಎಸೆತಗಳಲ್ಲಿ ನಾಲ್ಕು ಬೌಂಡರಿ ನೆರವಿನಿಂದ ಅಜೇಯ 65ರನ್ ಗಳಿಸಿದರು.
ಕರ್ನಾಟಕ ಪರ ವಿನಯ್ ಕುಮಾರ್ ಎರಡು, ಸುನೀಲ್ ಜೋಶಿ, ಅಖಿಲ್ ಮತ್ತು ಅಮಿತ್ ವರ್ಮಾ ತಲಾ ಒಂದು ವಿಕೆಟ್ ಪಡೆದರು.
ಕರ್ನಾಟಕ ತನ್ನ ಮುಂದಿನ ಪಂದ್ಯವನ್ನು ಮಹಾರಾಷ್ಟ್ರ ವಿರುದ್ಧ ಆಡಲಿದ್ದು, ನವೆಂಬರ್ 24ರಿಂದ ಪುಣೆಯಲ್ಲಿ ಆರಂಭವಾಗಲಿದೆ. ಅದೇ ವೇಳೆ ಬಂಗಾಳ ತಂಡ ಕೋಲ್ಕತ್ತಾದಲ್ಲಿ ಸೌರಾಷ್ಟ್ರ ತಂಡವನ್ನು ಎದುರಿಸಲಿದೆ.