ಮುಂಬೈ ಇಂಡಿಯನ್ಸ್ ವಿರುದ್ಧದ ಔಪಚಾರಿಕವೆನಿಸಿದ್ದ ಪಂದ್ಯದಲ್ಲಿ ಅರ್ಧಶತಕ ದಾಖಲಿಸುವ ಮೂಲಕ ಮರಳಿ ಲಯ ಕಂಡುಕೊಂಡಿರುವ ವೀರೇಂದ್ರ ಸೆಹ್ವಾಗ್ ಸಮಾಧಾನಗೊಂಡಿದ್ದಾರೆ. ಸೆಮಿಫೈನಲ್ನಲ್ಲೂ ಇದೇ ರೀತಿಯ ಆಟವನ್ನು ಮುಂದುವರಿಸಲು ಯತ್ನಿಸುವುದಾಗಿ ತಿಳಿಸಿದ್ದಾರೆ.
"ಇಲ್ಲಿ ಅರ್ಧಶತಕ ದಾಖಲಿಸಿರುವುದರಿಂದ ನಾನು ತಕ್ಕಮಟ್ಟಿಗೆ ಸಂತೋಷಗೊಂಡಿದ್ದೇನೆ. ಈಗ ನನ್ನ ಮುಂದಿನ ಗುರಿ ಸೆಮಿಫೈನಲ್. ಮರಳಿ ಲಯ ಕಂಡುಕೊಂಡಿರುವುದು ತಂಡಕ್ಕೆ ಉತ್ತಮವಾಗಿದ್ದು, ಆರಂಭಿಕ ಆಟಗಾರರು ಅತ್ಯುತ್ತಮ ಆಟ ನೀಡುವುದು ಮುಖ್ಯ" ಎಂದು ಸೆಮಿಫೈನಲ್ನಿಂದ ಮೊದಲೇ ಹೊರಬಿದ್ದಿದ್ದ ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್ಗಳ ಜಯ ದಾಖಲಿಸಿದ ನಂತರ ಸೆಹ್ವಾಗ್ ತಿಳಿಸಿದರು.
ಡೆಲ್ಲಿ ಡೇರ್ಡೆವಿಲ್ಸ್ ಮತ್ತು ಡೆಕ್ಕನ್ ಚಾರ್ಜರ್ಸ್ ನಡುವಿನ ಐಪಿಎಲ್ ಮೊದಲ ಸೆಮಿಫೈನಲ್ ಪಂದ್ಯ ಇಂದು ಸೆಂಚೂರಿಯನ್ನಲ್ಲಿ ನಡೆಯಲಿದೆ. ಮತ್ತೊಂದು ಸೆಮಿಫೈನಲ್ ಬೆಂಗಳೂರು ರಾಯಲ್ ಚಾಲೆಂಜರ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ನಾಳೆ ವಾಂಡರರ್ಸ್ನಲ್ಲಿ ನಡೆಯುವುದು.
27 ಎಸೆತಗಳಿಂದ 50 ರನ್ ದಾಖಲಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದ ಬಲಗೈ ಸ್ಫೋಟಕ ದಾಂಡಿಗ ಮತ್ತೂ ಮಾತು ಮುಂದುವರಿಸುತ್ತಾ, ಈ ಪಂದ್ಯದಲ್ಲಿ ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುವ ಮೂಲಕ ಪ್ರತಿಯೊಬ್ಬರೂ ಐಪಿಎಲ್ನಲ್ಲಿ ಆಡುವ ಅವಕಾಶ ಪಡೆದುಕೊಳ್ಳುವಂತೆ ನಡೆದುಕೊಳ್ಳಲಾಗಿದೆ ಎಂದರು.
"ಐಪಿಎಲ್ನಲ್ಲಿ ಎಲ್ಲರಿಗೂ ಆಡುವ ಅವಕಾಶವನ್ನು ನಾನು ನೀಡಿದ್ದೇನೆ. ಅದಕ್ಕಾಗಿ ನಾವು ಕೆಲವು ಪ್ರಮುಖ ಆಟಗಾರರಿಗೆ ಇಂದಿನ ಪಂದ್ಯದಿಂದ ವಿಶ್ರಾಂತಿ ನೀಡಲಾಗಿದೆ" ಎಂದು ವಿವರಿಸಿದ್ದಾರೆ.
ಈ ಪಂದ್ಯದಲ್ಲಿ ಗೌತಮ್ ಗಂಭೀರ್ ಕೂಡ ಮರಳಿ ಲಯ ಕಂಡುಕೊಂಡಿದ್ದರು. ಅವರು 38 ಎಸೆತಗಳಿಂದ 47 ರನ್ ದಾಖಲಿಸಿದ್ದಾರೆ. ಟೀಮ್ ಇಂಡಿಯಾ ಸ್ಫೋಟಕ ಆರಂಭಿಕರಾದ ಗಂಭೀರ್ ಮತ್ತು ಸೆಹ್ವಾಗ್ ಐಪಿಎಲ್ 2009ರಲ್ಲಿ ರನ್ ಬರ ಎದುರಿಸುತ್ತಿದ್ದರು.
ಸೆಮಿಫೈನಲ್ ಹೋರಾಟದಿಂದ ಹೊರಬಿದ್ದುದ್ದಲ್ಲದೆ ಕೊನೆಯ ಪಂದ್ಯವನ್ನೂ ಕಳೆದುಕೊಂಡ ತಂಡದ ನಾಯಕ ಸಚಿನ್ ತೆಂಡೂಲ್ಕರ್, ಸೋಲಿಗೆ ಕಳಪೆ ಬೌಲಿಂಗ್ ಕಾರಣವಾಗಿದ್ದು, ಮುಂದಿನ ವರ್ಷ ಅತ್ಯುತ್ತಮ ತಂಡದೊಂದಿಗೆ ವಾಪಸು ಬರುವುದಾಗಿ ಭರವಸೆ ನೀಡಿದರು.
"ನಾವು ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದೆವು. ಆದರೆ ಇಂದಿನ ಬೌಲಿಂಗ್ ನಮ್ಮ ನಿರೀಕ್ಷೆಯನ್ನು ತಲುಪಲಿಲ್ಲ. ಈ ಟೂರ್ನಮೆಂಟ್ವುದ್ದಕ್ಕೂ ನಮ್ಮ ಬೌಲಿಂಗ್ ಉತ್ತಮವಾಗಿತ್ತು. ಅವರನ್ನು ಹೆಚ್ಚು ದೂರಲು ನಾನು ಇಷ್ಟಪಡುವುದಿಲ್ಲ. ಮುಂದಿನ ವರ್ಷ ಶ್ರೇಷ್ಠ ಪ್ರದರ್ಶನ ನೀಡುವ ಸಲುವಾಗಿ ನಾವು ಹೆಚ್ಚಿನ ಶ್ರಮವಹಿಸಲಿದ್ದೇವೆ" ಎಂದಿದ್ದಾರೆ.
|