ಶುಕ್ರವಾರದ ಸೆಮಿಫೈನಲ್ ನಮ್ಮ ದಿನವಾಗಿರಲಿಲ್ಲ. ಅದು ಏಕಮಾತ್ರ ಗಿಲ್ಕ್ರಿಸ್ಟ್ ಅವರ ದಿನವಾಗಿ ಹೊರಹೊಮ್ಮಿತು ಎಂದು ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕ ಆಡಮ್ ಗಿಲ್ಕ್ರಿಸ್ಟ್ ಅವರ ಬಿರುಗಾಳಿಯ ಹೊಡೆತಕ್ಕೆ ತತ್ತರಿಸಿ ಹೋದ ಡೆಲ್ಲಿ ಪಡೆಯ ನಾಯಕ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.ಗಿಲ್ ಕೇವಲ 35 ಎಸೆತಗಳಿಂದ 85 ರನ್ ಚಚ್ಚಿದರು. 10 ಬೌಂಡರಿಗಳು ಹಾಗೂ ಐದು ಸಿಕ್ಸರ್ಗಳನ್ನು ಲೀಲಾಜಾಲವಾಗಿ ಸಿಡಿಸಿದ ಅವರನ್ನು ಕಟ್ಟಿಹಾಕುವುದು ನಮ್ಮಿಂದ ಸಾಧ್ಯವಾಗಲೇ ಇಲ್ಲ. ನಾವು ಅವರ ಬ್ಯಾಟಿಂಗ್ ಎದುರು ಏನೂ ಮಾಡಲಾರದೆ ಹೋದೆವು. ಅದು ಅಕ್ಷರಶಃ ಗಿಲ್ಕ್ರಿಸ್ಟ್ ಅವರ ದಿನವಾಗಿ ರೂಪುಗೊಂಡಿತು ಎಂದು ಸೆಹ್ವಾಗ್ ಬಣ್ಣಿಸಿದರು.ನಾವು ಮೊದಲು ಬ್ಯಾಟಿಂಗ್ಗೆ ಇಳಿದು 153ರ ಸವಾಲನ್ನು ಚಾರ್ಜರ್ಸ್ಗೆ ನೀಡಿದಾಗ ಅದು ಉತ್ತಮ ಮೊತ್ತವೆಂದೇ ಅಂದುಕೊಂಡಿದ್ದೆ. ಅದೇನೂ ಸುಲಭದ ಗುರಿಯಾಗಿರಲಿಲ್ಲ. ಆದರೆ ಗಿಲ್ಕ್ರಿಸ್ಟ್ ತಮ್ಮ ಬಿರುಗಾಳಿಯ ಬ್ಯಾಟಿಂಗ್ ಆರಂಭಿಸಿದಾಗ ಇಂದು ನಮ್ಮ ದಿನವಲ್ಲ ಅಂದುಕೊಂಡೆ ಎಂದು ಸೆಹ್ವಾಗ್ ವಿವರಿಸಿದರು.ಆದರೆ ಈ ಐಪಿಎಲ್ಗಿಂತ ಮೊದಲು ಸುಮಾರು ಒಂದು ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಕಾಣದೆ ಇದ್ದ ಗಿಲ್ಕ್ರಿಸ್ಟ್ ಸುದೀರ್ಘ ದಿನಗಳ ನಂತರ ಮತ್ತೆ ಬಂದರೂ ತಮ್ಮ ಹಳೆಯ ಶೈಲಿಗೆ ತುಕ್ಕು ಹಿಡಿದಿಲ್ಲ ಎಂದು ಈ ಮೂಲಕ ತೋರಿಸಿಕೊಟ್ಟಿದ್ದಾರೆ.ಗಿಲ್ಕ್ರಿಸ್ಟ್ ತಮ್ಮ ಅಮೋಘ ಆಟಕ್ಕೆ ಸಂತೋಷಗೊಂಡಿದ್ದು, ಇದು ನನಗೆ ಮರುಜೀವ ತಂದುಕೊಟ್ಟ ಪಂದ್ಯ. ಒಂದು ವರ್ಷದ ನಂತರ ಮರಳಿ ಬಂದುದಕ್ಕೆ ನನಗೆ ತುಂಬ ಖುಷಿಯೆನಿಸುತ್ತಿದೆ ಎಂದು ವಿವರಿಸಿದರು.ಡೆಲ್ಲಿ ತಂಡ ಉತ್ತಮ ಮೊತ್ತ ಕಲೆ ಹಾಕಿತ್ತು. ಹಾಗಾಗಿ ಅವರ ರನ್ರೇಟ್ಗೆ ನಮ್ಮ ರನ್ರೇಟನ್ನೂ ಹೊಂದಿಸಿಕೊಳ್ಳುವ ಒತ್ತಡ ನಮ್ಮ ತಂಡಕ್ಕಿತ್ತು. ಗೆಲ್ಲಲೇ ಬೇಕೆಂಬ ಒತ್ತಡದಿಂದಲೇ ಆಟವಾಡಿದೆ. ಇದರಿಂದ ಗೆಲುವು ಸಾಧ್ಯವಾಯಿತು ಎಂದು ಗಿಲ್ ಗೆಲುವಿನ ಸಂತಸ ಹಂಚಿಕೊಂಡರು. |