ಭಾನುವಾರ ನಡೆದ ಎರಡನೇ ಅರ್ಹತಾ ಪಂದ್ಯದಲ್ಲಿ ಎದುರಾಳಿ ಸನಮ್ ಸಿಂಗ್ರನ್ನು ಮಣಿಸುವ ಮೂಲಕ ಚೆನ್ನೈ ಓಪನ್ನ ಪ್ರಮುಖ ಪಂದ್ಯದ ಸನಿಹದಲ್ಲಿರುವ ಕರ್ನಾಟಕದ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಗುರಿ ತಲುಪಲು ಇನ್ನೂ ಒಂದು ಪಂದ್ಯ ಗೆಲ್ಲಬೇಕಿದೆ.
ಭಾರತದ ಈ ಡೇವಿಸ್ ಕಪ್ ವಿಜೇತ ಆಟಗಾರ ಚೆನ್ನೈಯಲ್ಲಿ ನಡೆಯುತ್ತಿರುವ ಎಟಿಪಿ ಚೆನ್ನೈ ಓಪನ್ನ ಎರಡು ಅರ್ಹತಾ ಪಂದ್ಯಗಳನ್ನು ಈಗಾಗಲೇ ಗೆದ್ದುಕೊಂಡಂತಾಗಿದ್ದು, ಕೊನೆಯ ಪಂದ್ಯ ಸೋಮವಾರ ನಡೆಯಲಿದೆ. ಈ ಟೂರ್ನಮೆಂಟ್ 450 ಸಾವಿರ ಅಮೆರಿಕನ್ ಡಾಲರ್ ಬಹುಮಾನ ಹೊಂದಿದೆ. ಈ ಪಂದ್ಯವನ್ನೂ ಗೆದ್ದಲ್ಲಿ ಚೆನ್ನೈ ಓಪನ್ನ ಪ್ರಮುಖ ಪಂದ್ಯಗಳಲ್ಲಿ ಬೋಪಣ್ಣ ಭಾಗವಹಿಸಬಹುದಾಗಿದೆ.
ತನ್ನ ಸ್ವದೇಶದ ಎದುರಾಳಿ ಸನಮ್ ಸಿಂಗ್ರನ್ನು 6-3, 6-4ರ ನೇರ ಸೆಟ್ಗಳಿಂದ ಮಣಿಸಿದ ರೋಹನ್ ಭಾರತದ ಪರವಾಗಿ ಅರ್ಹತಾ ಸುತ್ತಿನಲ್ಲಿ ಉಳಿದಿರುವ ಏಕೈಕ ಸ್ಫರ್ಧಿಯೂ ಹೌದು. ಇತರ ನಾಲ್ವರು ಆಟಗಾರರು ಅರ್ಹತಾ ಸುತ್ತುಗಳಲ್ಲಿ ಸೋಲನುಭವಿಸಿ ಹೊರಬಿದ್ದಿದ್ದಾರೆ. ಬೋಪಣ್ಣ ಮುಂದಿನ ಹಂತದಲ್ಲಿ ಎರಡನೇ ಶ್ರೇಯಾಂಕದ ಜರ್ಮನಿಯ ಮೈಕೆಲ್ ಬೆರರ್ ಜತೆ ಹೋರಾಡಬೇಕಿದೆ.
ಇತ್ತೀಚೆಗಷ್ಟೇ ಮುಕ್ತಾಯ ಕಂಡಿದ್ದ ರಾಷ್ಟ್ರೀಯ ಚಾಂಪಿಯನ್ಶಿಪ್ ಗೆದ್ದಿದ್ದ ರಂಜಿತ್ ವಿರಾಲಿ ಮುರುಗೇಶನ್ರವರನ್ನು 6-1, 6-1ರಿಂದ ಜರ್ಮನಿಯ ಬೆರರ್ ಅರ್ಹತಾ ಸುತ್ತಿನಲ್ಲಿ ಮಣಿಸಿದ್ದಾರೆ. ರೋಹನ್ ಗಜ್ಜಾರ್ರವರನ್ನು ಜರ್ಮನಿಯ ಅಲೆಕ್ಸ್ ಸಾಟ್ಸಚ್ಕೊ 6-2, 6-4ರಿಂದ, ಎನ್. ಶ್ರೀರಾಮ್ ಬಾಲಾಜಿಯವರನ್ನು ಕ್ಯೂ-ಟೇ-ಐಎಸ್ 0-6, 7-6(4), 2-6, ವಿಘ್ನೇಶ್ ಪಿಸಿ ಶೇಖರ್ರವರನ್ನು ಅಲೆಕ್ಸಾಂಡ್ರೆ ಕುದ್ರಿತ್ಸೇವ್ 6-1, 7-6(5)ರಿಂದ ಸೋಲಿಸಿ ಮುಂದಿನ ಹಂತ ಪ್ರವೇಶ ಪಡೆದಿದ್ದಾರೆ.
|