ಡೇವಿಸ್ ಕಪ್ಪರ್ ಭಾರತೀಯ ಪ್ರಕಾಶ್ ಅಮೃತರಾಜ್ ಮತ್ತೆ ಎಡವಿದ್ದು, ಐದನೇ ಶ್ರೇಯಾಂಕದ ಅಗ್ರ ಆಟಗಾರ ಜರ್ಮನಿಯ ರೈನರ್ ಶೆಟ್ಲರ್ ಎದುರು ಎಟಿಪಿ ಚೆನ್ನೈ ಓಪನ್ನ ಮೊದಲ ಸುತ್ತಿನಲ್ಲಿ ಸೋಲೊಪ್ಪಿಕೊಂಡಿದ್ದಾರೆ. ಗೆಲುವಿನ ನಗೆ ಬೀರಿರುವ ರೈನರ್ ಶೆಟ್ಲರ್ ಎರಡನೇ ಸುತ್ತಿಗೆ ಪ್ರವೇಶ ಪಡೆದುಕೊಂಡರು.
ಜರ್ಮನಿಯ ರೈನರ್ ಶೆಟ್ಲರ್ ವಿರುದ್ಧ ಎರಡನೇ ಸೆಟ್ನಲ್ಲಿ ಜಯಗಳಿಸಿದರೂ ಮೊದಲನೇ ಮತ್ತು ಕೊನೆಯ ಸೆಟ್ನಲ್ಲಿ ಸೋಲುಂಡ ಕಾರಣ ಪಂದ್ಯ ಪ್ರಕಾಶ್ ಕೈ ತಪ್ಪಿತು. ಪಂದ್ಯವನ್ನು ಪ್ರಕಾಶ್ 2-6, 6-4, 1-6ರ ಅಂತರದಿಂದ 85 ನಿಮಿಷಗಳ ಕಾಲ ಹೋರಾಡಿ ಕಳೆದುಕೊಂಡರು. ಈ ಟೂರ್ನಮೆಂಟ್ 450 ಸಾವಿರ ಅಮೆರಿಕನ್ ಡಾಲರ್ ಬಹುಮಾನವನ್ನು ಹೊಂದಿದೆ.
211ನೇ ರ್ಯಾಂಕ್ನ ಆಟಗಾರ ಪ್ರಕಾಶ್ ಅಮೃತರಾಜ್ ತವರು ನೆಲದಲ್ಲಿ ತನ್ನ ಪ್ರಭಾವ ಬೀರಲು ವಿಫಲವಾದರು. 33ನೇ ರ್ಯಾಂಕ್ ಆಟಗಾರ ಶೆಟ್ಲರ್ ಪಾರಮ್ಯ ಮೆರೆದಿದ್ದು, ಪ್ರಕಾಶ್ರ ತಪ್ಪುಗಳ ಲಾಭವನ್ನು ಸುಲಭವಾಗಿ ಪಡೆದುಕೊಂಡರು.
ಭಾರತದ ಪಾಸ್ಪೋರ್ಟ್ ಹೊಂದಿರದಿದ್ದರೂ ವೈಲ್ಡ್ ಕಾರ್ಡ್ ಅರ್ಹತೆ ಮೂಲಕ ಪ್ರಕಾಶ್ ಅಮೃತರಾಜ್ ನಾಮಕರಣಗೊಂಡಿದ್ದರು. ಭಾರತದ ನಂಬರ್ 2 ಆಟಗಾರನಾಗಿರುವ ಪ್ರಕಾಶ್ ಅಮೃತರಾಜ್ ಮತ್ತು ನಂಬರ್ ವನ್ ಆಟಗಾರ ಸೋಮದೇವ್ ದೇವರ್ಮನ್ ನವೆಂಬರ್ನಲ್ಲೇ ಚೆನ್ನೈ ಓಪನ್ಗಾಗಿ ವೈಲ್ಡ್ ಕಾರ್ಡ್ ಅರ್ಹತೆ ಗಿಟ್ಟಿಸಿದ್ದರು.
|