ಲಿಂಗ ಪರೀಕ್ಷೆಯಲ್ಲಿ ವಿಫಲಗೊಂಡು ಖಿನ್ನರಾದ ನಂತರ ಆತ್ಮಹತ್ಯೆಗೂ ಯತ್ನಿಸಿದ್ದ ಕ್ರೀಡಾಪಟು ಶಾಂತಿ ಸೌಂದರಾಜನ್ ಇದೀಗ ತರಬೇತುಗಾರ್ತಿಯಾಗಿ ಹೊಸ ಜೀವನ ಕಂಡುಕೊಂಡಿದ್ದಾರೆ. ಆ ಮೂಲಕ ತನ್ನ ಕನಸುಗಳನ್ನು ಸಾಕಾರಗೊಳಿಸುವ ಆಶಯವನ್ನು ಕಣ್ಣುಗಳಲ್ಲಿ ತುಂಬಿಕೊಂಡಿದ್ದಾರೆ. "2014 ರ ಏಷಿಯನ್ ಗೇಮ್ಸ್ನಲ್ಲಿ ನನ್ನ ಒಬ್ಬ ವಿದ್ಯಾರ್ಥಿಯಾದರೂ ಖಂಡಿತ ಪದಕ ಗಳಿಸುತ್ತಾರೆ. ಅದು ನನ್ನ ಕನಸು.. ಅದಕ್ಕಾಗಿ ನಾನು ಸಾಕಷ್ಟು ಶ್ರಮವಹಿಸುತ್ತಿದ್ದೇನೆ" ಎಂದು ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಅವರು ತನ್ನ ಆಶಯವನ್ನು ಹೊರ ಹಾಕಿದ್ದಾರೆ.2006 ರ ಏಷಿಯನ್ ಗೇಮ್ಸ್ನ 800 ಮೀಟರ್ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದ ಶಾಂತಿ ಲಿಂಗ ಪರೀಕ್ಷೆಯಲ್ಲಿ ವಿಫಲರಾಗಿದ್ದರು. ಈ ಕಾರಣದಿಂದಾಗಿ ಅವರ ಪದಕವನ್ನು ವಾಪಸು ಪಡೆದುಕೊಳ್ಳಲಾಗಿತ್ತು. ನಂತರ ಆತ್ಮಹತ್ಯೆಗೂ ಯತ್ನಿಸಿದ್ದ ಆಕೆ ಸೆಪ್ಟೆಂಬರ್ನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು." ಪರೀಕ್ಷೆಯಲ್ಲಿ ನಾನು ವಿಫಲಗೊಂಡಾಗ ತೀವ್ರ ವಿಚಲಿತಳಾಗಿದ್ದೆ" ಎಂದು ತಮಿಳಿನಲ್ಲಿ ಮಾತನಾಡುತ್ತಾ, "ಈ ಸಂದರ್ಭದಲ್ಲಿ ನನ್ನನ್ನು ಭಾರತೀಯ ಅಥ್ಲೆಟಿಕ್ಸ್ ಫೆಡರೇಷನ್ ನನ್ನನ್ನು ಬೆಂಬಲಿಸಲಿಲ್ಲ, ತೀರ್ಪಿನ ವಿರುದ್ಧ ಹೋರಾಡಲೂ ಇಲ್ಲ. ಅವರು ನೆರವಿಗೆ ಬರುತ್ತಾರೆ ಎಂಬ ಭರವಸೆ ನನ್ನಲ್ಲಿತ್ತು. ನಾನು ಖಿನ್ನಳಾಗಿದ್ದೆ.." ಎಂದು ತನ್ನ ನೋವಿನ ಪುಟಗಳನ್ನು ಒಂದೊಂದಾಗಿಯೇ ಬಿಚ್ಚಿಟ್ಟರು." ನಾನು ಎಲ್ಲವನ್ನೂ ಕಳೆದುಕೊಂಡಾಯಿತು ಎಂಬ ಭಾವನೆ ನನ್ನಲ್ಲಿ ಮೂಡಿತ್ತು. ಆ ನೋವು ಈಗಲೂ ಇದೆ. ಕ್ರೀಡೆಯನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸಿದವಳು ನಾನು. ಕನಸುಗಳು ನುಚ್ಚು ನೂರಾದ ಕಾರಣ ನಾನು ಆತ್ಮಹತ್ಯೆಗೆ ಯತ್ನಿಸಿದೆ..." ಎಂದರು.ತನಗಾಗಿರುವ ಘೋರ ಅನುಭವಗಳಿಂದ ಹೊರ ಬರಲು ಯತ್ನಿಸುತ್ತಿರುವ 28ರ ಹರೆಯದ ಶಾಂತಿ ಅದಕ್ಕಾಗಿ ಆರಿಸಿಕೊಂಡ ಮಾರ್ಗ ತರಬೇತಿ ಕೊಡುವುದು." ನನ್ನ ಕ್ರೀಡಾ ಜೀವನ ಅಂದೇ ಮುಗಿದು ಹೋಗಿದೆ. ನಾನು ಕ್ರೀಡೆಯ ಬಗ್ಗೆ ತಿಳಿದಿದ್ದ ಕಾರಣ ಇಲ್ಲೇ ಉಳಿದುಕೊಳ್ಳಲು ನಾನು ಬಯಸಿದ್ದೆ. ಇದು ನನ್ನ ಮರು ಪ್ರವೇಶಕ್ಕೆ ಕಾರಣ" ಎಂದು ಆಕೆ ವಿವರಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ್ದ ಎರಡು ತಿಂಗಳ ನಂತರ ಹುಟ್ಟೂರು ತಮಿಳುನಾಡಿನ ಪುದುಕೋಟೈಯಲ್ಲಿ ಸ್ವಂತ ಅಕಾಡೆಮಿಯನ್ನು ಶಾಂತಿ ಸ್ಥಾಪಿಸಿದ್ದರು." ನನ್ನ ಅಕಾಡೆಮಿಯಲ್ಲೀಗ 68 ವಿದ್ಯಾರ್ಥಿಗಳಿದ್ದಾರೆ. 10 ಪ್ರತಿಭಾವಂತ ಹುಡುಗರಿಗಾಗಿ ನಾನು ಹಾಸ್ಟೆಲ್ ಕೂಡ ನಡೆಸುತ್ತಿದ್ದೇನೆ. ಕ್ರೀಡಾಪಟುಗಳಿಗೆ ಆಹಾರ ಮತ್ತು ಉಳಿದುಕೊಳ್ಳುವ ಸಲುವಾಗಿ ನಾನು ಒಂದು ಮನೆಯನ್ನೂ ಖರೀದಿಸಿದ್ದೇನೆ" ಎಂದು ವಿದ್ಯಾರ್ಥಿಗಳ ಬಗ್ಗೆ ಕನಸುಗಳನ್ನು ಕಟ್ಟುತ್ತಾ ಕಣ್ತುಂಬಾ ನೀರು ತುಂಬಿಕೊಂಡು ಹೆಮ್ಮೆಯಿಂದ ಶಾಂತಿ ಹೇಳುತ್ತಿದ್ದಾರೆ.ನನಗೆ ಬಡತನವೆಂದರೆ ಏನೆಂದು ಗೊತ್ತು. ಭಿಕ್ಷೆ ಬೇಡಿ ತಿಂದೂ ನನಗೆ ಗೊತ್ತು. ನನಗೆ ಬಾಲ್ಯದಲ್ಲಿ ನನ್ನ ತರಬೇತುದಾರರು ಊಟದ ವ್ಯವಸ್ಥೆ ಮಾಡಿದ್ದರು. ಈಗ ಅದೇ ಕೆಲಸವನ್ನು ನಾನು ಮಾಡಲು ಯತ್ನಿಸುತ್ತಿದ್ದೇನೆ ಎನ್ನುವ ಶಾಂತಿಯ ಬಾಳಿನಲ್ಲಿ ಶಾಂತಿಯನ್ನು ಹುಡುಕುವುದು ತೀರಾ ದುಸ್ತರವಾದ ಕೆಲಸವೇನೋ... ಆದರೂ ಮಾಡುತ್ತಿರುವ ಸಮಾಜಮುಖಿ ಕಾರ್ಯಗಳಿಗೆ ಜನರ ಅಥವಾ ಸರಕಾರಗಳ ಬೆಂಬಲ ಆರ್ಥಿಕ ರೂಪದಲ್ಲಿರಲಿ ಎಂಬುವುದು ಆಕೆಯ ಆಶಯ. |