ಇತ್ತೀಚೆಗಷ್ಟೇ ಸ್ಥಾಪನೆಗೊಂಡ 'ಹಾಕಿ ಇಂಡಿಯಾ' ಸಂಸ್ಥೆಯ ವಿರುದ್ಧ ಬಲಾಬಲ ಪ್ರದರ್ಶನಕ್ಕೆಂದು ಉದ್ದೇಶಿಸಲಾಗಿದ್ದ ಸಭೆಗೂ ಮೊದಲು ಮಧ್ಯದಲ್ಲಿ ಕೆ. ಜ್ಯೋತಿ ಕುಮಾರನ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಜೆ.ಬಿ. ರಾಯ್ ಮತ್ತು ಕೆ.ಪಿ.ಎಸ್. ಗಿಲ್ ನಡುವೆ ಭಿನ್ನಾಭಿಪ್ರಾಯ ತಲೆದೋರಿದ್ದು ಸಭೆಯನ್ನು ದೆಹಲಿಯಿಂದ ಮುಂಬೈಗೆ ಸ್ಥಳಾಂತರಿಸಲಾಗಿದೆ.
ಜೆ.ಬಿ. ರಾಯ್ರವರು ಹಾಕಿ ಅಸೋಸಿಯೇಷನ್ಗಳು ಮತ್ತು ಕೆ.ಪಿ.ಎಸ್. ಗಿಲ್ರವರು ಭಾರತೀಯ ಮಹಿಳಾ ಹಾಕಿ ಫೆಡರೇಷನ್ ಹಾಗೂ ಭಾರತೀಯ ಹಾಕಿ ಫೆಡರೇಷನ್ ಬೆಂಬಲವನ್ನು ಪಡೆದುಕೊಂಡು ಜೂನ್ 13 ಮತ್ತು 14ರಂದು ಜಂಟಿ ಸಭೆಯನ್ನು ದೆಹಲಿಯಲ್ಲಿ ನಡೆಸಲು ಯೋಜಿಸಿದ್ದರು.
ರಾಜ್ಯ ಅಸೋಸಿಯೇಷನ್ಗಳ ಜತೆ ಯಾವುದೇ ಸಮಾಲೋಚನೆ ನಡೆಸದೆ 'ಹಾಕಿ ಇಂಡಿಯಾ'ವನ್ನು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ರಚಿಸಿದ್ದರ ಕುರಿತು ಪ್ರತಿಭಟನಾರ್ಥವಾಗಿ ಈ ಸಭೆಯನ್ನು ಆಯೋಜಿಸಲು ಉದ್ದೇಶಿಸಲಾಗಿತ್ತು.
ಆದರೆ ಈ ಇಬ್ಬರು ಹಾಕಿ ಮುಖ್ಯಸ್ಥರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಗೆ ಕಾರಣರಾಗಿದ್ದು ಭಾರತೀಯ ಹಾಕಿ ಫೆಡರೇಷನ್ನ ಪದಚ್ಯುತ ಕಾರ್ಯದರ್ಶಿ ಕೆ. ಜ್ಯೋತಿ ಕುಮಾರನ್.
ಜ್ಯೋತಿ ಕುಮಾರನ್ರವರ ಉಪಸ್ಥಿತಿಯಿಂದಾಗಿ ತಮ್ಮ ಘನತೆಗೆ ಕುಂದುಂಟಾಗಬಹುದು; ಹಾಗಾಗಿ ಅವರನ್ನು ಸಭೆಗೆ ಆಹ್ವಾನಿಸಬಾರದು ಎಂದು ರಾಯ್ ಮತ್ತು ಭಾರತೀಯ ಮಹಿಳಾ ಹಾಕಿ ಫೆಡರೇಷನ್ ಮುಖ್ಯಸ್ಥ ಅಮೃತ್ ಬೋಸ್ರವರು ಗಿಲ್ರನ್ನು ಆಗ್ರಹಿಸಿದ್ದಾರೆ.
ಈ ಹಿನ್ನಲೆಯಲ್ಲಿ ಬುಧವಾರ ಸಂಜೆಯವರೆಗೂ ಗಿಲ್ರಿಂದ ಸೌಹಾರ್ದಯುತ ಉತ್ತರ ನಿರೀಕ್ಷೆಯಲ್ಲಿದ್ದ ಜೆ.ಬಿ. ರಾಯ್ ಗುಂಪು ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನಲೆಯಲ್ಲಿ ಸಭೆಯನ್ನು ಆಂಬಿ ವಾಲಿಗೆ ಸ್ಥಳಾಂತರಗೊಳಿಸಿದೆ.
ಮೂಲಗಳ ಪ್ರಕಾರ ಮುಂಬೈಯಲ್ಲಿ ನಡೆಯಲಿರುವ ಈ ಸಭೆಗೆ ಗಿಲ್ ಹಾಜರಾಗುವ ಸಾಧ್ಯತೆಗಳಿಲ್ಲ. ಭಿನ್ನಮತೀಯರ ಗುಂಪಿನಲ್ಲಿ ಬಿರುಕುಂಟಾಗಿರುವುದರಿಂದ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮೇಲಿನ ಒತ್ತಡವೂ ಕಡಿಮೆಯಾದಂತಾಗಿದೆ ಎಂದೇ ಹಾಕಿ ವಲಯದಲ್ಲಿ ಅಂದಾಜಿಸಲಾಗುತ್ತಿದೆ.
|