ವಿಶ್ವದ ನಂ.7 ಆಟಗಾರ್ತಿ ಸೈನಾ ನೆಹ್ವಾಲ್ ಮತ್ತು ಅನೂಪ್ ಶ್ರೀಧರ್ ಸಿಂಗಾಪುರ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್ ಟೂರ್ನಮೆಂಟ್ನ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸೈನಾ ನೆಹ್ವಾಲ್ ತನ್ನ ಎದುರಾಳಿ ಇಂಡೋನೇಷಿಯಾದ ಶ್ರೇಯಾಂಕರಹಿತ ಆಟಗಾರ್ತಿ ಅದ್ರಿಯಾಂತಿ ಫ್ರಿರ್ದಾಸರಿಯವರನ್ನು 49 ನಿಮಿಷಗಳ ಕಾಲ ನಡೆದ ಸುದೀರ್ಘ ಹೋರಾಟದಲ್ಲಿ 21-18, 17-21, 21-17ರಿಂದ ಮಣಿಸುವ ಮೂಲಕ ಕ್ವಾರ್ಟರ್ ಫೈನಲ್ ತಲುಪಿದರು.
ಮುಂದಿನ ಸುತ್ತಿನಲ್ಲಿ ಆರನೇ ಶ್ರೇಯಾಂಕಿತೆ ನೆಹ್ವಾಲ್ ಚೀನಾದ ಮೂರನೇ ಶ್ರೇಯಾಂಕಿತೆ ಲಿನ್ ವಾಂಗ್ ವಿರುದ್ಧ ಹೋರಾಡಲಿದ್ದಾರೆ. ಅವರು ಪ್ರಿ-ಕ್ವಾರ್ಟರ್ ಫೈನಲ್ನಲ್ಲಿ ಹ್ಯೂ ಯಾನ್ ಹ್ವಾಂಗ್ ವಿರುದ್ಧ 21-10, 21-10ರ ಸುಲಭ ಜಯ ದಾಖಲಿಸಿದ್ದರು.
ನೆಹ್ವಾಲ್ ಆರಂಭಿಕ ಸುತ್ತಿನಲ್ಲಿ ಕ್ವಾಲಿಫೈಯರ್ ಸ್ಲೋವೇನಿಯಾದ ಮಾಜಾ ತ್ವೆರ್ಡಿಯವರನ್ನು 18-21, 21-11, 21-16ರಿಂದ ಸೋಲಿಸಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದರು.
ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅನೂಪ್ ಶ್ರೀಧರ್ರವರು ಡೆನ್ಮಾರ್ಕ್ನ ಎರಡನೇ ಶ್ರೇಯಾಂಕಿತ ಪೀಟರ್ ಹ್ಯೂಗ್ ಗಾಡೆ ವಿರುದ್ಧ 21-19, 16-21, 21-13ರ ಅಂತರದಿಂದ 59 ನಿಮಿಷಗಳ ಹೋರಾಟದಲ್ಲಿ ಗೆಲುವು ದಾಖಲಿಸಿದ್ದಾರೆ.
ಕ್ವಾರ್ಟರ್ ಫೈನಲ್ ತಲುಪಿರುವ ಶ್ರೀಧರ್ ಥಾಯ್ಲೆಂಡ್ನ ಬೂನ್ಸಾಕ್ ಪೊನ್ಸಾನಾ ವಿರುದ್ಧ ಸೆಮಿಫೈನಲ್ ಸ್ಥಾನಕ್ಕಾಗಿ ಸೆಣಸಾಡಬೇಕಿದೆ.
ಉಳಿದಂತೆ ಚೇತನ್ ಆನಂದ್, ಅರವಿಂದ್ ಭಟ್, ಜ್ವಾಲಾ ಗುತ್ತಾ, ವಿ. ದಿಜು, ಅದಿತಿ ಮುತಾತ್ಕರ್, ಅಶ್ವಿನಿ ಪೊನ್ನಪ್ಪರವರು ತಮ್ಮ ತಮ್ಮ ವಿಭಾಗಗಳಲ್ಲಿ ಈಗಾಗಲೇ ಸೋಲನುಭವಿಸಿ ಟೂರ್ನಮೆಂಟ್ನಿಂದ ಹೊರ ಬಿದ್ದಿದ್ದಾರೆ.
|