'ನರಭಕ್ಷಕ' ಆಮೀರ್ !

ಸಮ್ ಥಿಂಗ್ ಈಸ್ ದೇರ್ ಅನ್ನೋದು ನಿಮಗೂ ಅನ್ನಿಸಿದೆ. ಮೊದಲೇ ಸ್ಪಷ್ಟಪಡಿಸುವ ಹಾಗೆ ಆಮೀರ್ ನರಭಕ್ಷಕನಾಗುತ್ತಿರುವುದು ನಿಜ ಜೀವನದಲ್ಲಲ್ಲ. ಸಿನಿಮಾವೊಂದರಲ್ಲಿ ಆ ರೀತಿಯ ಪಾತ್ರ ಮಾಡಬೇಕೆನ್ನುವ ಆಸೆ ನೆರವೇರುತ್ತಿದೆ ಎನ್ನುವುದಷ್ಟೇ ಸುದ್ದಿ !ಆಮೀರ್ ಬಗ್ಗೆ ನಿಮಗೇನೂ ಹೇಳಬೇಕಾಗಿಲ್ಲ. ತನ್ನ ವೃತ್ತಿಜೀವನದಲ್ಲಿ ಎಂಥೆಂಥಾ ಚಿತ್ರಗಳನ್ನು ನೀಡಿ ಪ್ರೇಕ್ಷಕರ ಮನ ಸೂರೆಗೊಂಡ 43ರ ಪ್ರತಿಭಾವಂತ ಸುಂದರಾಗನಲ್ಲವೇ ಆತ. ಅದು ಲಗಾನ್ ಆಗಿರಬಹುದು, ರೈಸಿಂಗ್ ಆಗಿರಬಹುದು ಅಥವಾ ಇತ್ತೀಚಿನ ತಾರೆ ಝಮೀನ್ ತೆಗೆದುಕೊಂಡರೂ ಎಲ್ಲೂ ನಮ್ಮನ್ನು ನಿರಾಸೆ ಮಾಡಿದವರಲ್ಲ. ಮುಂದೆ ಬರುತ್ತಿರುವ 'ಘಜನಿ' ಪಾತ್ರ ಕೂಡ ಸವಾಲಿನದ್ದೆ. ಇದರ ಮೂಲ ತಮಿಳು ಚಿತ್ರದಲ್ಲಿ ಸೂರ್ಯ ಮತ್ತು ಆಸಿನ್ ನಟಿಸಿದ್ದರು. ಹಿಂದಿ ಅವತರಣಿಕೆಯಲ್ಲೂ ಆಸಿನ್ ನಾಯಕಿಯಾಗಿಯಾಗಿದ್ದಾರೆ. ಸಂಜಯ್ ರಾಮಸ್ವಾಮಿ ಎಂಬ ಪಾತ್ರದಲ್ಲಿ ಆಮೀರ್ ಘಜನಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಚಿತ್ರ ವ್ಯಕ್ತಿತ್ವದ ಆಕ್ಷನ್ ಪಾತ್ರವಾದ ಕಾರಣ ಚಿತ್ರದ ಸ್ಟಿಲ್ಗಳು, ಪ್ರೊಮೋಗಳು ಆಸಕ್ತಿ ಹುಟ್ಟಿಸಿವೆ. ಬಜೆಟ್ ಕೂಡಾ 90 ಕೋಟಿ ದಾಟಿದೆ ಎನ್ನಲಾಗಿದೆ.ಇಂತಿಪ್ಪ ಆಮೀರ್ಗೆ ಹೊಸ ಯೋಚನೆ ಬಂದಿದೆ. ಅದು ನರಭಕ್ಷಕ ಮಾನವನ ಪಾತ್ರ. ಇದಕ್ಕಾಗಿ ಹಲವು ಸಮಯದಿಂದ ಕಥೆಯ ಹುಡುಕಾಟ ನಡೆಸಲಾಗಿದೆ. ನರಭಕ್ಷಕನ ಪಾತ್ರ ಪೋಷಣೆ ಬಗ್ಗೆಯೂ ಚಿಂತನೆ ನಡೆಸಲಾಗಿದೆ. ಚಿತ್ರವನ್ನು ಆಮೀರ್ ತನ್ನ ಸ್ವಂತ ಬ್ಯಾನರಿನಲ್ಲಿ ನಿರ್ಮಿಸಲಿದ್ದಾರೆ. 'ಘಜನಿ'ಯ ನಿರ್ದೇಶಕ ಮುರುಗದಾಸ್ ತರಹದ ಯಾವುದಾದರೂ ಪ್ರಸಿದ್ಧ ದಕ್ಷಿಣದವರಿಂದಲೇ ಈ ಚಿತ್ರವನ್ನು ನಿರ್ದೇಶಿಸುವಾಸೆ ಆಮೀರ್ಗೆ.ಆ ಚಿತ್ರಕ್ಕಾಗಿ ಸಾಕಷ್ಟು ತಯಾರಿಯನ್ನೂ ಆರಂಭಿಸಲಾಗಿದೆ. ಈಗಾಗಲೇ ಮುಂಬೈಯ ಹಲವಾರು ಕಸಾಯಿಖಾನೆಗಳಿಗೆ ಭೇಟಿ ಕೊಟ್ಟು, ಮಾಂಸ ಕತ್ತರಿಸುವ ರೀತಿಯನ್ನು ತಿಳಿದುಕೊಂಡಿದ್ದಾನಂತೆ. ಅತಿ ಗರಿಷ್ಠ ಪ್ರಮಾಣದ ಪೌಷ್ಟಿಕಾಂಶಗಳನ್ನು ಹೊಂದಿರುವ ಮಾಂಸಾಹಾರ ಸೇವಿಸುತ್ತಿರುವ ಆಮೀರ್ ಅಂಗ ಸೌಷ್ಟವ ಬೆಳೆಸುವತ್ತ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಪ್ರಾಣಿಗಳ ವರ್ತನೆಗಳನ್ನೂ ಅತ್ಯಂತ ಸಮೀಪದಿಂದ ಗಮನಿಸಿ, ಪಾತ್ರಕ್ಕೆ ಅತಿ ಹೆಚ್ಚಿನ ನ್ಯಾಯವೊದಗಿಸಲಿದ್ದಾರೆ.ಆಮೀರ್ ಏನು ಮಾಡಿದರೂ ನೋಡಲು ಸಹ್ಯವಾಗಿರುತ್ತದೆ. ಹಾಗಾಗಿ ನಿರೀಕ್ಷೆಗಳು ಹುಸಿಯಾಗವು. ಕಾದು ನೋಡೋಣ...