ಫೆಬ್ರವರಿಗೆ ಮುನಿಯಾ ಮೇನಿಯಾ
ಬೆಂಗಳೂರು, ಶುಕ್ರವಾರ, 25 ಜನವರಿ 2008( 11:45 IST )
ಯೋಗರಾಜ ಭಟ್ಟರ ಮಣಿ ಚಿತ್ರದಿಂದ ಮೊದಲುಗೊಂಡು ತಮ್ಮ ತಂದೆ ಮದನ್ ಪಟೇಲ್ ನಿರ್ದೇಶಿಸಿದ ನಿನದೇ ನೆನಪು ಚಿತ್ರಗಳವರೆಗೆ ಹಲವು ಹನ್ನೊಂದು ಚಿತ್ರಗಳಲ್ಲಿ ನಟಿಸಿರುವ ಮಯೂರ್ ಪಟೇಲ್ ಛಲಕ್ಕೆ ಮತ್ತೊಂದು ಹೆಸರು. ಹಲವು ವೈಫಲ್ಯಗಳ ನಡುವೆಯೂ ಧೂಳಿನಿಂದೆದ್ದು ಬರುವ ಛಾತಿ ತೋರುವ ಅವರು ಇಷ್ಟವಾಗುವುದು ಪ್ರಾಯಶಃ ಇದೇ ಕಾರಣಕ್ಕೆ.
ಮಯೂರ್ ಪಟೇಲ್ ಈಗ ಮುನಿಯಾ ಚಿತ್ರದಲ್ಲಿ ಮತ್ತೊಮ್ಮೆ ತಮ್ಮ ಅದೃಷ್ಟವನ್ನು ಒರೆಗೆ ಹಚ್ಚಲಿದ್ದಾರೆ. ಚಿತ್ರದ ಚಿತ್ರೀಕರಣ ಫೆಬ್ರವರಿ 1 ರಿಂದ ಪ್ರಾರಂಭವಾಗಲಿದ್ದು, ಕಂಪನಿಗಳ ಬಡಾವಣೆ ಎಂದೇ ಹೆಸರಾದ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಬಳಿಯಿರುವ ಬೆಟ್ಟದಾಸಪುರದ ತಿಮ್ಮರಾಯ ಸ್ವಾಮಿ ದೇವಾಲಯದಲ್ಲಿ ಚಿತ್ರದ ಮುಹೂರ್ತ ನಡೆಯಲಿದೆ.
ಸತ್ಯ ಇನ್ ಲವ್ ಚಿತ್ರದ ಸಂಭಾಷಣೆ ರಚಿಸಿರುವ ಮಳವಳ್ಳಿ ಸಾಯಿಕೃಷ್ಣ ಈ ಚಿತ್ರಕ್ಕೂ ಸಂಭಾಷಣೆ ಬರೆಯಲಿದ್ದಾರೆ. ಓ.ನಾಗಚಂದ್ರ ಚಿತ್ರದ ನಿರ್ದೇಶಕರು. ಚಿತ್ರದ ಇತರ ತಾರಾಗಣದಲ್ಲಿ ರಂಗಾಯಣ ರಘು, ಮೈಕೋ ನಾಗರಾಜ್, ತುಮಕೂರು ಮೋಹನ್ ಮೊದಲಾದವರಿದ್ದಾರೆ.