ನಟ ದರ್ಶನ್ ಎಲ್ಲೂ ಕಾಣ್ತಾನೇ ಇಲ್ವಲ್ಲ. ಹೊಸತೇನಾದ್ರೂ ಚಿತ್ರ ಗಿತ್ರದ ಸುದ್ದಿ ಏನಾದ್ರೂ ಇದೆಯಾ ಅಂತ ಕಾಯುತ್ತಿದ್ದ ಅಭಿಮಾನಿಗಳಿಗೆ ಹೊಸ ಸುದ್ದಿ ಬಂದಿದೆ. ಅದು ಚಿಂಗಾರಿ.
ಬಂಗಾರಿ ಯಾರೇ ನೀ ಬುಲ್ ಬುಲ್.. ಅಂತ ಹಾಡಿ ಕುಣಿದು ಕಿಚಾಯಿಸಿದ್ದ ದರ್ಶನ್ ಯಾಕಪ್ಪಾ ಈಗ ಚಿಂಗಾರಿ ಅಂತಿದ್ದಾರೆ ಅಂತ ಯೋಚಿಸಬೇಡಿ. ಈ ಬಾರಿ ಚಿಂಗಾರಿ ಎಂಬ ಹೆಸರಿನ ಚಿತ್ರದಲ್ಲಿ ದರ್ಶನ್ ನಾಯಕ. ಈ ಚಿತ್ರವನ್ನು ಬಿರುಗಾಳಿ ಎಂಬ ಚಿತ್ರ ನಿರ್ದೇಶಿಸಿದ ಕನ್ನಡ ಚಿತ್ರರಂಗದ ನೃತ್ಯ ನಿರ್ದೇಶಕ ಹರ್ಷ ಈ ಚಿತ್ರಕ್ಕೀಗ ಕೈ ಹಾಕಿದ್ದಾರೆ. ಆ ಮೂಲಕ ಚಿಂಗಾರಿಯನ್ನು ನಿರ್ದೇಶಿಸಲಿದ್ದಾರೆ.
MOKSHA
ಹರ್ಷ ನೃತ್ಯ ನಿರ್ದೇಶಕರಾಗಿ ಸ್ಯಾಂಡಲ್ವುಡ್ಡಿನಲ್ಲಿ ಗಮನಾರ್ಹ ಸಾಧನೆ ಮಾಡಿದವರು. ಆದರೆ ನಿರ್ದೇಶಕರಾಗಿ ಮಾಡಿದ ಬಿರುಗಾಳಿ ಯಾಕೋ ಗಿಟ್ಟಲಿಲ್ಲ. ಈಗ ಮತ್ತೊಮ್ಮೆ ಧೈರ್ಯ ಮಾಡಿ ದರ್ಶನ್ ಅವರನ್ನೇ ನಾಯಕನನ್ನಾಗಿಸಿ ಚಿಂಗಾರಿ ಮಾಡುವ ಸಾಹಸ ಮಾಡುತ್ತಿದ್ದಾರೆ.
ಚಿಂಗಾರಿ ಎಂದರೆ ಬೆಂಕಿಯ ಕಿಡಿ ಎಂದರ್ಥ. ಹೆಸರಿಗೆ ತಕ್ಕಂತೆ ಬೆಂಕಿಯ ಚೆಂಡಿನಂತೇ ಪುಟಿಯುತ್ತಿರುವ ದರ್ಶನ್ ನಾಯಕ. ಆಷಾಢ ಮಾಸ ಶುರುವಾಗುವ ಮುನ್ನವೇ ಚಿತ್ರ ಸೆಟ್ಟೇರಲಿದೆ. ಬಹುತೇಕ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ. ಶಿಶಿರ ಎಂಬ ಸದಭಿರುಚಿ ಸಿನಿಮಾ ಮಾಡಿದ್ದ ಮಹದೇವ್ ನಿರ್ಮಾಪಕ. ಹರಿಕೃಷ್ಣ ಸಂಗೀತವಿದ್ದು, ನಾಯಕಿಯ ಹುಡುಕಾಟ ಭರದಿಂದ ಸಾಗಿದೆ. ದರ್ಶನ್ ಹಾಗೂ ಹರ್ಷರಿಗೆ ಆಲ್ ದಿ ಬೆಸ್ಟ್.