ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕನ್ನಡ ಚಿತ್ರೋದ್ಯಮದ ಹಾಲಿ ನಿರ್ದೇಶಕರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ತಮ್ಮ ಸ್ವಂತ ನಿರ್ಮಾಣದಲ್ಲಿ ಚಿತ್ರ ಮೂಡಿಬರಬೇಕು ಎಂಬ ಅವರ ಆಶಯಕ್ಕೆ ತಣ್ಣೀರು ಎರಚಲಾಗಿದೆಯಂತೆ.
ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆಗುವ ಮುನ್ನ ರಾಜ್ಯ ಚಿತ್ರೋದ್ಯಮದಲ್ಲಿ ಸಕ್ರಿಯವಾಗಿದ್ದರು. ಎಸ್.ನಾರಾಯಣ್ ಸಾರಥ್ಯದ ಚಂದ್ರಚಕೋರಿ, ಸೂರ್ಯವಂಶ ಮೊದಲಾದ ಚಿತ್ರಗಳಿಗೆ ಬಂಡವಾಳ ಹೂಡಿದ್ದರು. ನಂತರ ಸಿಎಂ ಪದವಿ ಸಿಕ್ಕ ಪರಿಣಾಮ ಅನಿವಾರ್ಯವಾಗಿ ರಾಜಕೀಯ ಕೆಲಸಗಳಿಂದಾಗಿ ಚಿತ್ರರಂಗದಿಂದ ದೂರ ಉಳಿದರು. ಆದರೆ, ಇದೀಗ ಮತ್ತೆ ಚಿತ್ರರಂಗದತ್ತ ಕಣ್ಣು ಹೊರಳಿಸಿರುವ ಅವರಿಗೆ ಒಂದು ಮಹದಾಸೆ ಇದೆಯಂತೆ.
ಅದು ವ್ಯಾಸರಾಯ ಬಲ್ಲಾಳ ಅವರ 'ಹೆಜ್ಜೆಗಳು' ಕಾದಂಬರಿಗೆ ಸಿನಿಮಾ ರೂಪ ಕೊಡುವುದು! ಕುಮಾರಸ್ವಾಮಿ, ಆ ಕಥೆಯನ್ನು ಸಿನಿಮಾ ಮಾಡಿಕೊಡಿ ಎಂದು ಸಾಕಷ್ಟು ನಿರ್ದೇಶಕರ ಬಳಿ ಕೇಳಿಕೊಂಡಿದ್ದಾರಂತೆ. ಆದರೆ, ಸಿಕ್ಕವರೆಲ್ಲ ಆ ಕಥೆಯನ್ನು ಸಿನಿಮಾ ಮಾಡುವುದು ಕಷ್ಟ ಎಂದು ಅಡ್ಡಡ್ಡ ತಲೆ ಆಡಿಸಿದರಂತೆ. 'ಇದು ಕಮರ್ಷಿಯಲ್ ಚಿತ್ರ ಆಗಲು ಲಾಯಕ್ಕಿಲ್ಲ. ಬೇಕಾದರೆ, ಕಲಾತ್ಮಕ ಚಿತ್ರ ಮಾಡಬಹುದು. ಅದು ನಮ್ಮಿಂದ ಸಾಧ್ಯವಿಲ್ಲ' ಎಂದು ಕಣ್ಣೆದುರೇ ಕೈ ತೊಳೆದುಕೊಂಡವರೂ ಇದ್ದಾರಂತೆ!
ಕುಮಾರಣ್ಣಂಗೆ ಇದು ಬೇಸರ ತಂದಿದೆ. ಮೊನ್ನೆ ನಡೆದ ಪ್ರೀತಿಯ ಲೋಕ ಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಕುಮಾರಣ್ಣ ಈ ಗೋಳು ತೋಡಿಕೊಂಡರು.