ಹಂಸಲೇಖ ನಿರ್ಮಾಣದ ಕಾದಂಬರಿ ಆಧಾರಿತ ಚಿತ್ರ ಭಗವತಿ ಕಾಡು ಬಿಡುಗಡೆಗೆ ಸಿದ್ಧವಾಗಿದೆ. ಅತ್ಯಂತ ವೇಗವಾಗಿ ಆರಂಭವಾಗಿ, ಸತತ 17 ದಿನಗಳ ಚಿತ್ರೀಕರಣ ಪೂರೈಸಿ, ತೆರೆ ಕಾಣಲು ಸಹ ಸಿದ್ಧವಾಗಿ ಬಿಟ್ಟಿದೆ. ಚಿತ್ರ ಈಗಾಗಲೇ ಸಾಕಷ್ಟು ಸುದ್ದಿಯಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗಾಗಿ ಹಂಸಲೇಖ ವಿಭಿನ್ನ ರೀತಿಯಲ್ಲಿ ಈ ಚಿತ್ರ ಸಿದ್ಧಪಡಿಸಿದ್ದಾರೆ.
ಕುಂ.ವೀರಭದ್ರಪ್ಪ ಕಾದಂಬರಿ ಆಧಾರಿತ ಈ ಚಿತ್ರಕ್ಕೆ ಶಿವರುದ್ರಯ್ಯ ಅವರ ನಿರ್ದೇಶನವಿದೆ. ನಿರ್ದೇಶಕರು ಚಿತ್ರೀಕರಣಕ್ಕೆ ಸಹಕರಿಸಿದ ಮರಿಯಮ್ಮನ ಹಳ್ಳಿ ಜನತೆಗೆ ಸಹ ಚಿತ್ರತಂಡ ಇದೇ ಸಂದರ್ಭದಲ್ಲಿ ಥ್ಯಾಂಕ್ಸ್ ಹೇಳಿದೆ.
ವಿಶೇಷ ಅಂದರೆ ಈ ಚಿತ್ರದಲ್ಲಿ ಇನ್ನೂರು ಮಕ್ಕಳು, ನೂರೈವತ್ತು ದೊಡ್ಡವರು ಶ್ರಮ ವಹಿಸಿ ನಟಿಸಿದ್ದಾರೆ. ಅವರಿಗೂ ಧನ್ಯವಾದ ಎನ್ನುತ್ತಾರೆ ಅವರು. ಭಗವತಿ ಕಾಡು ಹದಿನೈದು ವರ್ಷಗಳ ಹಿಂದೆ ಬಂದ ಯಶಸ್ವೀ ನಾಟಕ ಪ್ರಯೋಗವೂ ಹೌದು. ಈಗ ಅದನ್ನು ಮೂರು ತಾಸಿನ ಶೋ ಮಾಡಿದ್ದೇವೆ ಎನ್ನುತ್ತಾರೆ. ನೀನಾಸಂ ಅಚ್ಯುತ ಮೇಷ್ಟ್ರ ಪಾತ್ರ ಮಾಡುತ್ತಿದ್ದು, ಬೃಹತ್ ಗಾತ್ರದ ಬೇವಿನ ಮರವೊಂದು ಇಡೀ ಚಿತ್ರದ ಕೇಂದ್ರಬಿಂದು. ಆ ಮರಕ್ಕೆ ಮುನ್ನೂರೈವತ್ತು ವರ್ಷವಾಗಿದೆ ಎಂಬುದು ಇನ್ನೊಂದು ವಿಶೇಷ. ಈ ರೀತಿ ವಿಶೇಷದ ಮೇಲೆ ಇನ್ನೊಂದು ವಿಶೇಷ ಒಳಗೊಂಡಿರುವ ಚಿತ್ರ ಬೇಗ ಬಿಡುಗಡೆ ಆಗಿ ಯಶ ಕಾಣಲಿ ಎಂದು ಆಶಿಸೋಣ.