ಕರಣ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಪಾನಿಪುರಿ ಚಿತ್ರದ ಚಿತ್ರೀಕರಣ ಈ ತಿಂಗಳಿಂದ ಆರಂಭವಾಗಲಿದೆ. ದಿಗಂತ್ ತಾರಾಗಣದ ಈ ಚಿತ್ರದಲ್ಲಿ ರಾಗಿಣಿ ನಾಯಕಿ ಎಂಬ ಮಾತೂ ಕೂಡಾ ಕೇಳಿ ಬರುತ್ತಿದೆ.
ಅಂದಹಾಗೆ, ದಿಗಂತ್ ಪಂಚರಂಗಿ ಹಾಗೂ ಇನ್ನಿತರ ಕೆಲ ಚಿತ್ರದಲ್ಲಿ ಬ್ಯುಸಿ ಆಗಿದ್ದರಿಂದ ಈ ಚಿತ್ರ ಆರಂಭ ಕೊಂಚ ತಡವಾಗಿ ಆಗುತ್ತಿದೆ. ಇದೀಗ ಆರಂಭವಾಗುತ್ತಿದ್ದು, ಯಾವುದೇ ಆತಂಕ ಇಲ್ಲದೇ ಮುಂದುವರಿದು ಮುಗಿದು ಹೋಗಲಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕರಾಗಿರುವ ಗುಡೂರು ವೆಂಕಟೇಶ್ವರಲು ಅವರು.
ರವಿಚಂದ್ರನ್ ಅಭಿನಯದ ಯಶಸ್ವಿ ಚಿತ್ರ ಕನಸುಗಾರ ನಿಮಗೆಲ್ಲಾ ಗೊತ್ತಿರಬೇಕು. ಹೌದು, ಅದನ್ನು ನಿರ್ದೇಶಿಸುವ ಮೂಲಕ ಕರಣ್ ಜನಪ್ರಿಯರಾಗಿದ್ದರು. ಆದರೆ ಇದೀಗ ನಿರ್ಮಾಪಕರಾಗಲು ಅವರು ಮುಂದಾಗಿದ್ದಾರೆ. ಒಂದು ಪ್ರೇಮಕಥೆಯನ್ನು ಪಾನಿಪುರಿ ಮೂಲಕ ಆರಂಭಿಸಿ, ಅದರ ಮೂಲಕವೇ ಮುಗಿಸುವ ವಿಶಿಷ್ಟ ಸಂದರ್ಭ ಸೃಷ್ಟಿಸಲಾಗಿದೆ. ಇಡೀ ಚಿತ್ರ ಹಾಗೂ ನಾಯಕ ನಾಯಕಿಯ ನಡುವೆ ಪಾನಿಪುರಿ ಅತ್ಯಂತ ಮಹತ್ವದ ಪಾತ್ರ ನಿರ್ವಹಿಸಲಿದೆ.
ಒಟ್ಟಾರೆ ಇತ್ತೀಚೆಗೆ ಎಲ್ಲಾ ಚಿತ್ರಗಳೂ ಸೋಲುತ್ತಿವೆ. ಅದರಲ್ಲೂ ಪ್ರೇಮಕಥೆಗಳು ಹೇಳ ಹೆಸರಿಲ್ಲದಂತೆ ನೆಲ ಕಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಪಾನಿಪುರಿ ಜನರಿಗೆ ಏನು ಮೋಡಿ ಮಾಡಲಿದೆಯೋ ಕಾದು ನೋಡಬೇಕು.