ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ತೆರೆ ಕಂಡ ಅರವತ್ತು ಚಿತ್ರಗಳಲ್ಲಿ ಸೂಪರ್ ಹಿಟ್ ಅನಿಸಿಕೊಂಡದ್ದು ಆಪ್ತ ರಕ್ಷಕ ಮತ್ತು ರಾಮ್ ಮಾತ್ರ!
ಅಂದರೆ ಇಲ್ಲಿ ಕನ್ನಡ ಚಿತ್ರರಂಗದ ಸಾಧನೆ ಎಂಥದ್ದು ಅನ್ನುವುದು ಅರಿವಾಗಿರಬೇಕಲ್ಲಾ. ಇದಕ್ಕೆಲ್ಲಾ ಅಸಲಿ ಯಾರು ಕಾರಣ ಎನ್ನುವ ಜಿಜ್ಞಾಸೆ ಕನ್ನಡ ಚಿತ್ರರಂಗದಲ್ಲಿ ನಡೆಯಬೇಕಿದೆ. ಆದರೆ ಚಿತ್ರನಟನಟಿಯರು, ನಿರ್ಮಾಪಕರು, ನಿರ್ದೇಶಕರು ಸೇರಿದಂತೆ ಎಲ್ಲರೂ ಕ್ರಿಕೆಟ್ ಆಡುವ ವಿಷಯದಲ್ಲಿ ಬ್ಯುಸಿ ಆಗಿದ್ದಾರೆ.
ನೃತ್ಯಗಾರರ ಸಂಘದ ಕಲ್ಯಾಣಕ್ಕಾಗಿ, ಬಡ ನೃತ್ಯ ಕಲಾವಿದರಿಗೆ ತಲೆಗೊಂದು ಸೂರು ಕಲ್ಪಿಸಲು ಈ ಪಂದ್ಯವಂತೆ. ಇದರಲ್ಲಿ ಶಿವಣ್ಣ, ರವಿಚಂದ್ರನ್, ದರ್ಶನ್, ಸುದೀಪ್, ಗಣೇಶ್, ವಿಜಯ್, ಉಪೇಂದ್ರ ಅವರ ಜತೆ ಇತ್ತೀಚೆಗೆ ತಲೆ ಎತ್ತಿರುವ ಹತ್ತಾರು ಹೊಸನಟರು ಇರುತ್ತಾರಂತೆ. ನಟಿಯರಿಗೂ ಕೊರತೆ ಇಲ್ಲ. ರಮ್ಯಾ, ಐಂದ್ರಿತಾ, ರಾಧಿಕಾ ಪಂಡಿತ್, ಪೂಜಾಗಾಂಧಿ...ಕೂಡ ಬರುತ್ತಾರೆ ಅನ್ನಲಾಗುತ್ತಿದೆ.
MOKSHA
ಆದರೆ, ಇಡೀ ಚಿತ್ರರಂಗದ ನಾನಾ ವಿಭಾಗದ ಸಂಘದ ಕಣ್ಣು ಬಿದ್ದಿರುವುದೇ ಇಲ್ಲಿಗೆ. 'ಬರೀ ನೃತ್ಯಗಾರರು ಮಾತ್ರ ಉದ್ದಾರವಾದರೆ ಸಾಕಾ? ನಾವೇನು ಉದ್ಯಮಕ್ಕೆ ಕಮ್ಮಿ ದುಡಿದಿದ್ದೇವಾ?' ಎನ್ನುತ್ತಿದ್ದಾರೆ. ನಮ್ಮ ಗೋಳು ಕೇಳುವವರು ಯಾರು ಎಂದು ಕೆಲ ನಿರ್ದೇಶಕರು ಅಪಸ್ವರದ ಮಾತನ್ನು ಆಡಿದ್ದಾರೆ.
ಎಲ್ಲೋ ಯೋಗರಾಜ್ ಭಟ್, ಸೂರಿ, ತಾಜ್ ಮಹಲ್ ಚಂದ್ರು, ಗುರು ಪ್ರಸಾದ್, ಶಶಾಂಕ್, ಪ್ರೇಮ್ ಇನ್ನಿತರರು ಬಂದ ಮೇಲೆ ಕೆಲ ನಿರ್ದೇಶಕರ ಸಂಭಾವನೆ ಕೋಟಿ ಹತ್ತಿರ ಬಂದಿದೆ. ಆದರೆ ಇದರ ಲಾಭ ಎಲ್ಲರಿಗೂ ಸಿಕ್ಕಿಲ್ಲ. ಕತ್ತೆಯಂತೆ ದುಡಿದು ಕೈಗೆ ಪುಡಿಗಾಸು ಪಡೆದುಕೊಳ್ಳುತ್ತಿರುವ ಎರಡನೇ ಹಂತದ ಸಾವಿರಾರುಜನರು ಉದ್ಯಮದಲ್ಲಿದ್ದಾರೆ. ಅವರ ಆಸೆ ಈಡೇರುವುದು ಯಾವಾಗ? ಇದಕ್ಕೆ ಉತ್ತರ ಯಾರು ಹೇಳುವರೋ ಗೊತ್ತಿಲ್ಲ.