ಚಿತ್ರ ನಿರ್ದೇಶಕ ಶಶಾಂಕ್ ಗೆದ್ದಿದ್ದಾರೆ. ಅವರ ಕೃಷ್ಣನ ನಾದಕ್ಕೆ ಜನ ಮನಸೋತಿದ್ದಾರೆ. ದುರಂತ ಅಂತ್ಯ ಕಾಣುವ ಚಿತ್ರವಾದರೂ ಕೃಷ್ಣನ್ ಲವ್ ಸ್ಟೋರಿಯನ್ನು ಜನ ಒಪ್ಪಿಕೊಂಡಿದ್ದಾರೆ. ಇದರ ಫಲವೇ ಕೃಷ್ಣ ಗೆದ್ದಿದ್ದಾನೆ. ಜತೆಗೆ ಶಶಾಂಕ್ ಅವರನ್ನೂ ಜನ ಗೆಲ್ಲಿಸಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ ಸಿಕ್ಸರ್ ಎಂಬ ಚಿತ್ರ ನಿರ್ದೇಶಿಸುವ ಮೂಲಕ ಚಿತ್ರ ನಿರ್ದೇಶನಕ್ಕೆ ಕಾಲಿಟ್ಟ ಶಶಾಂಕ್ ಈ ಚಿತ್ರದಲ್ಲೂ ಯಶಸ್ಸು ಕಂಡು ನಂತರ ಮೊಗ್ಗಿನ ಮನಸು ಚಿತ್ರ ನಿರ್ದೇಶಿಸಿದ್ದರು. ಎರಡನೇ ಚಿತ್ರಕ್ಕೂ ಭರ್ಜರಿ ಪ್ರತಿಕ್ರಿಯೆ ಕಂಡು ಪ್ರಶಸ್ತಿಗಳನ್ನು ಕೊಳ್ಳೆ ಹೊಡೆದಿದ್ದ ಶಶಾಂಕ್ ಈಗ ಮೂರನೇ ಚಿತ್ರ ಕೃಷ್ಣನ್ ಲವ್ ಸ್ಟೋರಿ ಮೂಲಕ ಹ್ಯಾಟ್ರಿಕ್ ಯಶಸ್ಸನ್ನು ಕಂಡಿದ್ದಾರೆ.
ಕಳೆದ ಒಂದು ವರ್ಷದ ಈಚೆ ಗೆದ್ದ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟು. ಅದರಲ್ಲಿ ಇದೂ ಒಂದು ಅನ್ನುವುದು ವಿಶೇಷ. ಈ ಸಂತಸವನ್ನು ಎಲ್ಲರಂತೆ ಹಂಚಿಕೊಳ್ಳಲು ಇಷ್ಟಪಡದ ಶಶಾಂಕ್ ಗೆಲುವಿಗೆ ಜನರು ಕಾರಣ. ಇದರಿಂದ ಅವರಿಗೆ ಇನ್ನೊಂದು ಹಬ್ಬದೂಟ ನೀಡುತ್ತೇನೆ. ಅದೂ 'ಕೃಷ್ಣನ್ ಲವ್ ಸ್ಟೋರಿ- 2' ಚಿತ್ರದ ಮೂಲಕ ಅಂತ ಘೋಷಿಸಿದ್ದಾರೆ.
MOKSHA
ಕೃಷ್ಣನ್ ಲವ್ ಸ್ಟೋರಿ ಬಿಡುಗಡೆ ನಂತರ ರಾಜ್ಯಾದ್ಯಂತ ಸುತ್ತಿದ ಶಶಾಂಕ್ ಅವರಿಗೆ ಜನರಿಂದ ಅಪಾರ ಮೆಚ್ಚುಗೆ ಹಾಗೂ ಶುಭಾಶಯ ಸಿಕ್ಕಿದೆ. ಮುಕ್ತ ಕಂಠದಿಂದ ಜನ ಚಿತ್ರ ಬಗ್ಗೆ ಹಾಡಿ ಹೊಗಳಿದ್ದು ಹೊಸ ಚಿತ್ರ ನಿರ್ಮಾಣಕ್ಕೆ ಸ್ಪೂರ್ತಿ ತಂದಿದೆ. ಇದರ ಫಲವೇ ಭಾಗ ಎರಡರ ಘೋಷಣೆ.
"ಕೃಷ್ಣನಿಗೆ ಚಿತ್ರದಲ್ಲಿ ಕೊನೆಯವರೆಗೂ ನ್ಯಾಯ ಸಿಗಲಿಲ್ಲ. ಪ್ರೀತಿಸಿದ ಹುಡುಗಿಯನ್ನು ಪಡೆಯಲು ಕೊನೆಯವರೆಗೂ ಸಾಧ್ಯವಾಗಲೇ ಇಲ್ಲ. ಇದೊಂದು ಅನ್ಯಾಯವನ್ನು ಕಂಡು ನಮ್ಮಿಂದ ಸುಮ್ಮನಿರಲು ಆಗಲ್ಲ. ಅವನಿಗೊಂದು ನ್ಯಾಯ ಒದಗಿಸಿ, ಅದು ಎರಡನೇ ಭಾಗದಲ್ಲಾದರೂ ಸರಿ' ಎಂದು ಜನ ಶಶಾಂಕ್ಗೆಹೋದಲ್ಲೆಲ್ಲಾ ಸಲಹೆ ನೀಡಿದ್ದಾರಂತೆ. ಅದಕ್ಕಾಗಿ ಕೊನೆಗೆ ಈ ತೀರ್ಮಾನಕ್ಕೆ ಅವರು ಬಂದಿದ್ದಾರೆ. ಹೀಗಾಗಿ ಭಾಗ ಎರಡಲ್ಲೂ ಅಜಯ್ ಅವರೇ ನಾಯಕ. ಹಿಂದಿನ ಚಿತ್ರದ ತಾರಾಂಗಣವೇ ಬಹುತೇಕ ಉಳಿದುಕೊಳ್ಳಲಿದೆ. ಚಿತ್ರಕಥೆ ಹೆಣೆಯಲು ಕುಳಿತಿರುವ ಶಶಾಂಕ್, ಇಲ್ಲಿಗೆ ಇಷ್ಟು ಸಾಕು. ಇನ್ನಷ್ಟು ವಿವರ ಮುಂದೆ ಹೇಳುತ್ತೇನೆ ಎಂದಿದ್ದಾರೆ.