ಜಾಕಿಶ್ರಾಫ್ ಹೆಸರು ಕೇಳಿದ ತಕ್ಷಣ ಮನಸ್ಸು ಬಾಲಿವುಡ್ಡಿನತ್ತ ಸರಿಯುತ್ತದೆ. ಆದರೆ ಇತ್ತೀಚೆಗೆ ಕೆಲ ಚಿತ್ರಗಳ ಮೂಲಕ ಜಾಕಿ ನಮ್ಮವರಾಗಿ ಹೋಗಿದ್ದಾರೆ. ಮೊನ್ನೆ ನಗರಕ್ಕೆ ಬಂದ ಸಂದರ್ಭದಲ್ಲಿ ಅವರ ನಡವಳಿಕೆ ಹಾಗೆ ಅನ್ನಿಸಿತು.
ನನಗೆ ಕನ್ನಡ ಅಷ್ಟು ಚೆನ್ನಾಗಿ ಬರೋದಿಲ್ಲ. ಆದರೂ ಸಲ್ಪ ಸಲ್ಪ ಮಾತಾಡೋಕೆ ಟ್ರೈ ಮಾಡ್ತೇನೆ...! ಅಂತ ಹೇಳಿ ಸೇರಿದ್ದವರನ್ನು ಅಚ್ಚರಿಗೆ ದೂಡಿದ ಜಾಕಿ ಕನ್ನಡದ ಬಗ್ಗೆ ಅಪಾರ ಗೌರವ, ಆದರ, ಅಭಿಮಾನ ಹೊಂದಿರುವುದಾಗಿ ಹೇಳಿಕೊಂಡರು. ಅವರಿಗೆ ನೂರಕ್ಕೆ ನೂರು ಭಾಗ ಕನ್ನಡ ಗೊತ್ತಿಲ್ಲ. ಆದರೂ ಯತ್ನಿಸಿದ್ದು ನಿಜಕ್ಕೂ ಆದರ್ಶಪ್ರಾಯವಾಗಿ ಗೋಚರಿಸಿತು.
ಹಿಂದಿ ಚಿತ್ರರಂಗದ ಜನಪ್ರಿಯ ತಾರೆ ಜಾಕಿಶ್ರಾಫ್ ಮೊನ್ನೆಯಷ್ಟೇ ಬಿಡುಗಡೆಯಾದ ಜಮಾನಾ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೊಮ್ಮೆ ಕೇರಾಫ್ ಫುಟ್ಪಾತ್ ಚಿತ್ರದಲ್ಲಿ ಗಮನ ಸೆಳೆಯುವ ಪಾತ್ರ ಮಾಡಿದ್ದರು. ಅವರಿಗೆ ಬೆಂಗಳೂರು ಎಂದರೆ ಬಲು ಇಷ್ಟವಂತೆ. ಮುಂಬಯಿ ಎಷ್ಟೇ ಬಿಜಿ ನಗರವಾಗಿದ್ದರೂ ಅಲ್ಲಿ ತಲೆ ಬಿಸಿ, ಕಿರಿಕಿರಿಗಳೇ ಜಾಸ್ತಿಯಂತೆ. ಹಾಗಾಗಿ ಬೆಂಗಳೂರು ಇಷ್ಟ. ಇಲ್ಲಿನ ಜನರೂ ಅಷ್ಟೆ, ತುಂಬಾ ಇಷ್ಟ ಎನ್ನುತ್ತಾರೆ ಈ ಜಾಕಿ.
ಇವರಿಗೆ ಇನ್ನಷ್ಟು ಕನ್ನಡ ಚಿತ್ರಗಳಲ್ಲಿ ನಟಿಸುವ ಆಸೆಯಿದೆ. ಅವಕಾಶ ಸಿಕ್ಕರೆ ಕಣ್ಣುಮುಚ್ಚಿ ಒಪ್ಪಿಕೊಳ್ಳುತ್ತಾರಂತೆ. ವಿಶೇಷ ಅಂದರೆ ಇವರೂ ಕೂಡ ವರನಟ ಡಾ. ರಾಜ್ ಕುಮಾರ್ ಅಭಿಮಾನಿ. ಬೆಂಗಳೂರಿನ ಗಲ್ಲಿಗಲ್ಲಿಯಲ್ಲಿ ರಾಜ್ ರಾರಾಜಿಸುತ್ತಿರುವುದನ್ನು ಕಂಡು ಅವರು ಬೆರಗಾಗಿ ಹೋದರಂತೆ.