ನಟ ದುನಿಯಾ ವಿಜಯ್ ರಾತ್ರಿಯೆಲ್ಲಾ ಸ್ಮಶಾನ ಕಾದಿದ್ದಾರೆ. ವಿಚಿತ್ರವೆಂದರೂ ನಿಜ. ವಿಜಯ್ ಸಿನಿಮಾಕ್ಕೆ ಬರುವ ಮೊದಲು ಪ್ಲಂಬರ್ (ನಲ್ಲಿ ರಿಪೇರಿ ಮಾಡುವಾತ) ಆಗಿದ್ದ ವಿಚಾರ ಎಲ್ಲರಿಗೂ ಗೊತ್ತು. ಆದರೆ ಈಗ ಸ್ಮಶಾನ ಕಾಯೋ ಕೆಲಸ ಶುರು ಮಾಡಿ ಬಿಟ್ಟರಾ ಅಂತ ಹುಬ್ಬೇರಿಸಬೇಡಿ. ಸದ್ಯ ವಿಜಯ್ ಮಹೇಂದರ್ ನಿರ್ದೇಶನದ ವೀರಬಾಹು ಚಿತ್ರಕ್ಕೆ ಒಕೆ ಅಂದ ವಿಚಾರ ಗೊತ್ತು. ಇದೀಗ ಆ ಚಿತ್ರದ ಸನ್ನಿವೇಶದ ನೈಜ ಅಭಿನಯಕ್ಕಾಗಿ ಮೊನ್ನೆ ನಟ ದುನಿಯಾ ವಿಜಯ್ ಸ್ಮಶಾನಕ್ಕೆ ತೆರಳಿ ನಾಲ್ಕು ದಿನ ಇದ್ದರಂತೆ. ಸ್ಮಶಾನದಲ್ಲಿರುವ ನೈಜ ಅನುಭವ ಪಡೆದು ಆ ರೀತಿ ನಟಿಸಲು ವಿಜಯ್ ಈ ಸರ್ಕಸ್ ಮಾಡಿದ್ದಾರೆ.
ಎಸ್. ಮಹೇಂದರ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ 31ನೇ ಚಿತ್ರ ಇದು. ಚಿತ್ರದ ಚಿತ್ರೀಕರಣ ಸದ್ಯ ಮೈಸೂರು ಸುತ್ತಮುತ್ತಲಿನ ರಮಣೀಯ ತಾಣಗಳಲ್ಲಿ ನಡೆಯುತ್ತಿದೆ. ಹಳ್ಳಿ ರಾಜಕೀಯದ ಸುತ್ತ ಈ ಚಿತ್ರದ ಕಥೆ ಹೆಣೆಯಲಾಗಿದೆ. ಚಿತ್ರಕ್ಕೆ ಸೂಕ್ತ ಎನಿಸುವ ಮುದವಾದ ಸಂಗೀತವನ್ನು ವಿ. ಹರಿಕೃಷ್ಣ ಸಂಯೋಜಿಸಿದ್ದಾರೆ.
ಚಿತ್ರದಲ್ಲಿ ದುನಿಯಾ ಖ್ಯಾತಿಯ ವಿಜಯ್ ಸ್ಮಶಾನದಲ್ಲಿ ಕೆಲಸ ಮಾಡುವ ವ್ಯಕ್ತಿಯ ಪಾತ್ರ ಮಾಡುತ್ತಿದ್ದಾರೆ. ಪಕ್ಕಾ ಒರಟು ಪಾತ್ರವಾದ್ದರಿಂದ ಇಂಥ ಪಾತ್ರಕ್ಕೆ ಕನ್ನಡದಲ್ಲಿ ಸೂಟ್ ಆಗುವ ನಾಯಕ ಎಂದರೆ ಖಂಡಿತ ವಿಜಯ್ ಮಾತ್ರವೇ ಎಂದು ಮಹೇಂದರ್ ತೀರ್ಮಾನಿಸಿಬಿಟ್ಟರಂತೆ. ಹಾಗಾಗಿ ನೇರವಾಗಿ ಈ ಚಿತ್ರಕ್ಕಾಗಿ ಸಂಪರ್ಕಿಸಿದ ನಾಯಕ ನಟ ವಿಜಯ್ ಮಾತ್ರ. ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ರಾಗಿಣಿ ದ್ವಿವೇದಿ ನಟಿಸುತ್ತಿದ್ದಾರೆ. ಯೋಗರಾಜ ಭಟ್ಟರ ಪಂಚರಂಗಿ ಚಿತ್ರದಲ್ಲಿ ಬ್ಯುಸಿಯಾಗಿರುವ ಈ ಕೊಡಗಿನ ಬೆಡಗಿ ಈ ಚಿತ್ರದಲ್ಲಿ ಒಬ್ಬ ಸಾಂಪ್ರದಾಯಿಕ ಅಯ್ಯಂಗಾರಿ ಹುಡುಗಿಯ ಪಾತ್ರದಲ್ಲಿ ಕಾಣಿಸಲಿದ್ದಾರಂತೆ.
ಶಂಕರ್ ಐಪಿಎಸ್ ಚಿತ್ರಕ್ಕಾಗಿ ಕಟ್ಟುಮಸ್ತಾಗಿ ದೇಹ ಬೆಳೆಸಲು ಇನ್ನಿಲ್ಲ ತಪಸ್ಸು ಮಾಡಿದ ವಿಜಯ್ ಈ ಚಿತ್ರದಲ್ಲೂ ತನ್ನ ಅಭಿನಯಕ್ಕಾಗಿ ಮೊದಲೇ ತಾಲೀಮು ಮುಂದುವರಿಸಿದ್ದಾರೆ. ವಿಜಯ್ಗೆ ವಿಜಯ ಸಿಗಲಿ ಎಂದು ಹಾರೈಸೋಣ.