'ಡಾ. ರಾಜ್ ಕಪ್' ಹೆಸರಿನಲ್ಲಿ ದಾವಣಗೆರೆಯಲ್ಲಿ ನಡೆಯುತ್ತಿರುವ ಕ್ರಿಕೆಟ್ ಪಂದ್ಯಾವಳಿಗೆ ಅದೇಕೋ ವಿಘ್ನಗಳ ಮೇಲೆ ವಿಘ್ನ ಕಾಡುತ್ತಿದೆ. ವಾರದ ಹಿಂದೆ ಮಳೆ ಕಾಟ ಕೊಡಬಹುದು ಎಂಬ ಅನುಮಾನ ಕಾಡಿತ್ತು. ಆದರೆ ಪಂದ್ಯದ ಹೊತ್ತಿಗೆ ಅದು ನಿವಾರಣೆಯಾಗಿದೆ. ಆದರೆ ನಟರಲ್ಲಿ ಕೆಲವರು ಆಡಬೇಕೋ, ಬೇಡವೋ ಎಂದು ಮೈದಾನಕ್ಕಿಳಿಯದೇ ಗೊಂದಲ ಹುಟ್ಟಿಸಿದ್ದಾರೆ.
ತೆಲುಗು ಚಿತ್ರನಟರು ಆಡಿ ಯಶಸ್ವಿಗೊಳಿಸಿದ ಪಂದ್ಯಾವಳಿಯನ್ನು ಸ್ಫೂರ್ತಿಯಾಗಿ ಪರಿಗಣಿಸಿ ನೋಡಿದರೆ, ನಮ್ಮವರಲ್ಲಿ ಹೆಚ್ಚಿನವರು ಮೈದಾನಕ್ಕೆ ಇಳಿಯಲು ಒಲ್ಲೆ ಎನ್ನುವ ಮೂಲಕ ಅಸಮಾಧಾನ ಹಾಗೂ ಒಗ್ಗಟ್ಟಿನ ಕೊರತೆ ತೋರಿಸುತ್ತಿದ್ದಾರೆ. ಈ ಮೂಲಕ ಡಾ. ರಾಜ್ಕುಮಾರ್ ಹೆಸರಿಗೆ ಮಸಿ ಬಳಿಯುವ ಜತೆಗೆ ಕನ್ನಡ ಚಿತ್ರರಂಗದವರ ಟಿ20 ಕಪ್ಗೆ ಒಂದು ಆತಂಕದ ಛಾಯೆ ಮೂಡುವಂತೆ ಮಾಡಿದ್ದಾರೆ.
ಒಟ್ಟಾರೆ ಮಹತ್ವಾಕಾಂಕ್ಷೆಯಿಂದ ಚಲನಚಿತ್ರ ನೃತ್ಯ ಕಲಾವಿದರ ಸಹಾಯಾರ್ಥ ನಡೆಯುವ ಈ ಕಪ್ನಲ್ಲಿ ತಾವು ಆಡಬೇಕೇ ಬೇಡವೇ ಎಂದು ಸ್ಟೇಡಿಯಂ ಆಚೆ ನಿಂತು ಕೆಲ ನಾಯಕ ನಟರು ಯೋಚಿಸುತ್ತಿರುವುದು ಮೈದಾನದ ಒಳಗೆ ಆಟ ಕಳೆಗಟ್ಟದಂತೆ ಮಾಡಿದೆ.
ದಾವಣಗೆರೆಯಲ್ಲಿ ನಡೆಯುತ್ತಿರುವ ಈ ಮೂರು ದಿನದ ಪಂದ್ಯಾವಳಿಯಲ್ಲಿ ಆಡದಂತೆ ಕಲಾವಿದರ ಸಂಘ ಪರ್ಮಾನು ಸಹ ಹೊಡೆಸಿದ್ದು, ನಟರಲ್ಲಿ ಇನ್ನೊಂದು ಆತಂಕ ಹುಟ್ಟಿಸಲು ಕಾರಣ. ಇದ್ಯಾಕೆ ಹೀಗೆ ಅಂದರೆ ಸಂಘದವರು, ನವೆಂಬರ್ 1ಕ್ಕೆ ನಾವೂ ಟೂರ್ನಿ ಹಮ್ಮಿಕೊಂಡಿದ್ದೇವೆ. ಹೀಗಾಗಿ ನೃತ್ಯ ಕಲಾವಿದರ ಸಂಘದ ಟೂರ್ನಿ ಆಡಬೇಡಿ ಎಂದಿದ್ದೇವೆ. ಅದರಲ್ಲಿ ತಪ್ಪೇನಿದೆ ಎನ್ನುತ್ತಿದ್ದಾರೆ.
ಈ ರೀತಿ ಪರಸ್ಪರ ನಮ್ಮವರಲ್ಲೇ ಒಂದು ಸಾಮರಸ್ಯ ಇಲ್ಲದಿರುವಾಗ, ಸಾಲು ಸಾಲು ಚಿತ್ರ ಏಕೆ ಸೋಲುತ್ತಿದೆ ಎಂದು ಎಲ್ಲೋ ಕುಳಿತು ಚರ್ಚಿಸುವ ಅಗತ್ಯ ಇಲ್ಲ ಅನ್ನಿಸುತ್ತದೆ. ನಮ್ಮೊಳಗಿರುವ ಹುಳುಕು ತೆಗೆದು ಹಾಕಿದರೆ ಎಲ್ಲಾ ಚಿತ್ರಗಳೂ ಉತ್ತಮವಾಗಿ ಮೂಡಿ ಬರುತ್ತವೆ. ಆಗ ತೆಲುಗರು ನಮ್ಮವರ ಕ್ರಿಕೆಟ್ ನೋಡಿ ಟೂರ್ನಿ ಆಯೋಜಿಸುವಂತೆ ಆಗುತ್ತದೆ. ಆ ದಿನಗಳು ಬೇಗ ಬರಲಿ.