ಗರುಡಾದ್ರಿ ರಾಘು ಅವರು ಬಹು ಕಾಲದ ನಂತರ ತಮ್ಮದೊಂದು ಆಸೆ ಈಡೇರಿಸಿಕೊಂಡಿದ್ದಾರೆ. ಮೃತ್ಯುವಿನ ಮೂಲಕ ಇವರು ತಮ್ಮ ಆಸೆಗೆ ಪರಿಹಾರ ಕಂಡುಕೊಂಡಿದ್ದಾರೆ.
ಅಯ್ಯೋ, ಇದೇನು ಆಭಾಸ, ರಾಘು ಅವರಿಗೇನಾಯಿತು ಅಂತ ಅಲವತ್ತುಕೊಳ್ಳಬೇಡಿ. ಅವರೀಗ ಮೃತ್ಯು ಚಿತ್ರದ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ. ಬಹು ವರ್ಷದಿಂದ ಒಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ ಮಾಡುವ ಆಸೆ ಮನಸ್ಸಿನೊಳಗೆ ಇರಿಸಿಕೊಂಡು ಒದ್ದಾಡುತ್ತಿದ್ದ ಇವರು ಈಗ ಮೃತ್ಯು ಚಿತ್ರದ ಮೂಲಕ ಆ ಆಸೆಯನ್ನು ಈಡೇರಿಸಿಕೊಳ್ಳುತ್ತಿದ್ದಾರೆ.
ಇಂದಿನ ಸಮಾಜಕ್ಕೆ ಪ್ರಸ್ತುತ ಎನಿಸುವ ಕಥೆಯನ್ನು ಹೆಣೆದಿದ್ದೇನೆ. ನಿಜಕ್ಕೂ ಇದೊಂದು ಉತ್ತಮ ಚಿತ್ರ. ಜನ ಬಯಸುವ ರೀತಿ ಪ್ರಸೆಂಟೇಷನ್ ಮಾಡಿದ್ದೇನೆ. ಚಿತ್ರದ ನಾಯಕ ಯಶಸ್ ಸಹ ತುಂಬಾ ಆಸಕ್ತಿಯಿಂದ, ಕಾಳಜಿಯಿಂದ ನಟಿಸಿದ್ದಾರೆ. ಚಿತ್ರ ನಿಜಕ್ಕೂ ಉತ್ತಮವಾಗಿದೆ. ಭ್ರಷ್ಟಾಚಾರದ ವಿರುದ್ಧ ನಾಯಕ ಹೋರಾಟವೇ ಚಿತ್ರದ ಮೂಲ ಕಥಾವಸ್ತು ಎನ್ನುತ್ತಾರೆ ರಾಘು.
ದಿಲ್ಲಿಯ ಸುಂದರಿ ಶಿಲ್ಪಾ ಚಿತ್ರದ ನಾಯಕಿ. ಗುರು ಅವರ ಸಂಗೀತ ಹಾಗೂ ನಿರಂಜನ ಬಾಬು ಛಾಯಾಗ್ರಹಣ ಇದೆ. ಬೆಂಗಳೂರು ಮಹಾನಗರದಲ್ಲಿ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ.