ಇತ್ತೀಚಿನ ದಿನಗಳಲ್ಲಿ ಪ್ರಜ್ವಲ್ ಒಪ್ಪಿಕೊಳ್ಳುತ್ತಿರುವ ಚಿತ್ರಗಳು ಹೆಚ್ಚಾಗುತ್ತಿರುವೆಯೇ ಹೊರತು ಯಶಸ್ಸಿನ ಪಟ್ಟಿ ಮಾತ್ರ ಹಾಗೇ ಇದೆ. ಇಂಥ ಸಂದರ್ಭ ಮತ್ತೆ ಪ್ರಜ್ವಲ್ ಕೋಟೆ ಎಂಬ ಚಿತ್ರಕ್ಕೂ ಸಹಿ ಮಾಡಿದ್ದಾರೆ.
ಈ ಚಿತ್ರದಲ್ಲಿ ಅವರು ಒಂದು ವಿಭಿನ್ನ ಪಾತ್ರ ನಿರ್ವಹಿಸಲಿದ್ದಾರೆ. ಆ ಮೂಲಕ ಇಂಥದ್ದೊಂದು ಪಾತ್ರದಲ್ಲಿ ನಟಿಸಬೇಕೆಂಬ ಎಷ್ಟೋ ದಿನಗಳ ಕನಸು ನನಸಾಗುತ್ತಿದೆಯೆಂಬ ಮಾತು ಅವರದ್ದು. ಚಿತ್ರರಂಗಕ್ಕೆ ಬಂದ ಮೇಲೆ ಇಂಥ ಪಾತ್ರ ಸಿಕ್ಕಿರಲಿಲ್ಲವಂತೆ. ಶ್ರೀನಿವಾಸ್ ಪ್ರಭು ಚಿತ್ರದ ನಿರ್ದೇಶಕರಾಗಿದ್ದು, ಈ ಚಿತ್ರವನ್ನು ಪ್ರಜ್ವಲ್ಗಾಗಿಯೇ ನಿರ್ಮಿಸಿದ್ದಾರೇನೋ ಅನ್ನುವಂತೆ ಕಥೆ ಇದೆಯಂತೆ. ಚಿತ್ರಕ್ಕೂ, ಕಥೆಗೂ, ಪ್ರಜ್ವಲ್ಗೂ ಏನೋ ಸಾಮ್ಯತೆ ಇದೆ ಎನ್ನುತ್ತಾರೆ ಅವರು.
ಇವರು ಈಗಾಗಲೇ ಪ್ರಜ್ವಲ್ ಅವರನ್ನು ನಾಯಕರಾಗಿಸಿಕೊಂಡು ನನ್ನವನು ಚಿತ್ರ ಮಾಡಿದ್ದರು. ಬಾಕ್ಸ್ ಆಫೀಸಿನಲ್ಲಿ ಆ ಚಿತ್ರ ಗೆದ್ದಿತು. ಕೋಟೆ ಚಿತ್ರಕ್ಕೆ ಇಬ್ಬರು ನಾಯಕಿಯರು. ರಾಗಿಣಿ ಇವರಲ್ಲಿ ಒಬ್ಬರು ಎನ್ನಲಾಗುತ್ತಿದೆ. ಇನ್ನೊಬ್ಬರ ಹುಡುಕಾಟ ಭರದಿಂದ ಸಾಗಿದೆಯಂತೆ.
ಅಂದಹಾಗೆ, ಈ ಚಿತ್ರದಲ್ಲಿ ನಟ ಸಾಯಿಕುಮಾರ್ ಸಹೋದರ ರವಿಶಂಕರ್ ಚಿತ್ರದಲ್ಲಿ ಖಳನಾಯಕನಾಗಿ ನಟಿಸಿದ್ದಾರೆ. ಒಬ್ಬ ಉತ್ತಮ ಖಳನಟನ ನಿರೀಕ್ಷೆಯಲ್ಲಿರುವ ಕನ್ನಡ ಚಿತ್ರರಂಗಕ್ಕೆ ಇವರು ಉತ್ತಮ ಸರಕಾಗಿ ಲಭಿಸುತ್ತಾರಾ ಅಂತ ಕಾದು ನೋಡಬೇಕಿದೆ. ರಘು ದೀಕ್ಷಿತ್ ಸಂಗೀತ ಸಂಯೋಜಕರು. ಚಿತ್ರದ ಚಿತ್ರೀಕರಣ ಹುಬ್ಬಳ್ಳಿ, ಬೆಂಗಳೂರು ಹಾಗೂ ವಿದೇಶಗಳಲ್ಲಿ ನಡೆಯಲಿದೆಯಂತೆ. ಇದೊಂದು ಏರಿಯಾದಲ್ಲಿ ನಡೆಯುವ ಕಥೆಯ ಕುರಿತಾದ ಚಿತ್ರವಾಗಿದೆ. ರವಿಶಂಕರ್ ಪಾಲಿಗೆ ಇದು ಕನ್ನಡದ ಮೂರನೇ ಚಿತ್ರ.