ಅಂದು ಶಿವಣ್ಣರ ಮುಖ ಕೊಂಚ ಕಳೆಗುಂದಿತ್ತು. ಹಾಗಂತ ಅವರು ಅಭಿಮಾನ ಇಲ್ಲದೇ ಒತ್ತಾಯಕ್ಕಂತೂ ಅಲ್ಲಿಗೆ ಬಂದಿರಲಿಲ್ಲ. ತುಂಬಾ ಅಭಿಮಾನ ಇಟ್ಟು ಜ್ವರ ಇದ್ದರೂ ಅದನ್ನು ಬದಿಗಿರಿಸಿ ಬಂದಿದ್ದರು.
ಕಿರಿ ನಟರ ಚಿತ್ರಕ್ಕೆ ಹಿರಿ ನಟರ ಆಶೀರ್ವಾದ ಅಗತ್ಯ ಎನ್ನುವುದು ಯಾವತ್ತೂ ಸುಳ್ಳಲ್ಲ. ಇದರಿಂದಲೇ ಕನ್ನಡ ಚಿತ್ರರಂಗದ ಒಬ್ಬ ಹಿರಿಯ ನಟ ಶಿವರಾಜ್ ಕುಮಾರ್ ಜ್ವರದಿಂದ ಬಳಲುತ್ತಿದ್ದೂ ಮೊನ್ನೆ ಬನಶಂಕರಿಯ ಧರ್ಮಗಿರಿ ದೇವಸ್ಥಾನಕ್ಕೆ ಬಂದಿದ್ದರು. ಅಲ್ಲಿ ಬಂದು ತೂಫಾನ್ ಚಿತ್ರಕ್ಕೆ ಕ್ಲಾಪ್ ಮಾಡಿದರು.
ಮುಖದಲ್ಲಿ ಜ್ವರದಿಂದ ಎದ್ದ ಬಳಲಿಕೆ ಇತ್ತು. ಆದರೆ ಪ್ರೀತಿ ಪಾತ್ರರ ಚಿತ್ರಕ್ಕೆ ಶುಭ ಹಾರೈಸಬೇಕೆಂಬ ಲವಲವಿಕೆ ಇತ್ತು. ಆಯಾಸಪಟ್ಟು ಬಂದಿರುವುದು ಅವರ ಮುಖ ನೋಡಿದರೆ ಅರಿವಾಗುತ್ತಿತ್ತು. ಕೆಲ ಹೊತ್ತಿಗಾಗಿ ಬಂದ ಶಿವಣ್ಣನನ್ನು ಚಿತ್ರತಂಡ ಗೌರವಿಸಿತು. ಹೂ ಹಣ್ಣು ನೀಡಿ, ಮಾಲೆ ಹಾಕಿ ಅಭಿನಂದಿಸಿತು. ಖುದ್ದು ನಾಯಕ ಯಶಸ್ ನೇತೃತ್ವದಲ್ಲಿ ಎಲ್ಲವೂ ಅಚ್ಚುಕಟ್ಟಾಗಿ ನೆರವೇರಿತು.
ಶಿವಣ್ಣ ಈ ಚಿತ್ರದ ಪ್ರಥಮ ಶಾಟ್ಗೆ ಕ್ಲಾಪ್ ಮಾಡಿದರು. ನಂತರ ಅಭಿನಂದನೆಯ ಮಾತು ಆಡಿದರು. ಇವರಿಗೆ ಸಿಹಿ ತಿನ್ನಿಸಿ ಚಿತ್ರಕ್ಕೆ ಶುಭ ನುಡಿಸಲಾಯಿತು. ಒಟ್ಟಾರೆ ಒಂದು ವಿಭಿನ್ನ ಚಿತ್ರಕ್ಕೆ ಪ್ರೋತ್ಸಾಹ ನೀಡಲು ಆಗಮಿಸಿದ್ದ ಶಿವಣ್ಣರಿಗೆ ಇಡೀ ಚಿತ್ರತಂಡ ಒಟ್ಟಾಗಿ ಅಭಿನಂದಿಸಿದ್ದು ಹೃದಯಸ್ಪರ್ಶಿ ಸನ್ನಿವೇಶವಾಗಿ ಗೋಚರಿಸಿತು. ಚಿತ್ರದ ನಾಯಕಿ ನಕ್ಷತ್ರ ಸಹ ಇದೇ ಸಂದರ್ಭದಲ್ಲಿ ಹಾಜರಿದ್ದರು. ತೆಲುಗಿನಲ್ಲಿ ಒಂದು ತಮಿಳಿನಲ್ಲಿ ಎರಡು ಚಿತ್ರದಲ್ಲಿ ಅಭಿನಯಿಸಿರುವ ಅನುಭವ ಇವರಿಗಿದೆ. ಆ ಅನುಭವವನ್ನು ಬಳಸಿಕೊಳ್ಳುವ ಜೊತೆ ಕನ್ನಡದವರಿಗೆ ಅಗತ್ಯ ಇರುವ ಮಾದರಿಯ ನಟನೆ ನೀಡುತ್ತೇನೆ ಎಂದರು.